ಸಹಜ ಸ್ಥಿತಿಯತ್ತ ಬಂಡೀಪುರದ ಕಾಡು;ಅಪಾಯದಿಂದ ಪಾರಾದ ಪ್ರಾಣಿಗಳು
ಚಾಮರಾಜನಗರ, ಮಾರ್ಚ್ 01:ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಬೆಂಕಿ ಆಕಸ್ಮಿಕವೇ ಅಥವಾ ವಿಧ್ವಂಸಕ ಕೃತ್ಯವೇ ಎಂಬ ವಿಷಯ ಈಗ ಅರಣ್ಯ ಸಂರಕ್ಷಣಾ ವಲಯಗಳು ಮತ್ತು ಅಧಿಕಾರಿಗಳ ನಡುವೆ ಹೆಚ್ಚು ಚರ್ಚೆಗೊಳಗಾಗಿದೆ.
ವಿವಿಧ ಶ್ರೇಣಿಗಳಲ್ಲಿ ಏಕಕಾಲದಲ್ಲಿ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ಚಿಂತಿಸಬೇಕಾಗಿದೆ.ಇದುವರೆಗೆ ಬಂಡೀಪುರದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರೂ ಅವು ಸಾಮಾನ್ಯವಾಗಿ ಒಂದು ನಿರ್ದಿಷ್ಟ ವ್ಯಾಪ್ತಿ ಅಥವಾ ವಿಭಾಗಕ್ಕೆ ಸೀಮಿತವಾಗಿರುತ್ತಿತ್ತು.
ಆದರೆ ಈ ವರ್ಷ ಕುಂದಕೆರೆ ಬಳಿ ಬೆಂಕಿ ಮೊದಲ ಬಾರಿಗೆ ಪತ್ತೆ ಮಾಡಲಾಯಿತು. ನಂತರ ಗೋಪಾಲಸ್ವಾಮಿ ಬೆಟ್ಟ, ಮೇಲುಕಾಮನಹಳ್ಳಿ ಬಳಿ ಕಾಡ್ಗಿಚ್ಚು ಗೋಚರವಾಯಿತು.
ಯಾವುದೇ ಖಚಿತತೆ ಇಲ್ಲವಾದರೂ ಕಾಡಿನಲ್ಲಿ ಅಪಾರವಾಗಿರುವ ಲ್ಯಾಂಟನಾ ವಿಸ್ತರಣೆ ತೀವ್ರವಾದ ಬೆಂಕಿಗೆ ಕಾರಣ ಎಂದು ಪ್ರಮುಖ ಅಂಶಗಳಲ್ಲಿ ಪರಿಗಣಿಸಲಾಗಿದೆ.
ಈ ವರ್ಷ ಕಾಡಿನಲ್ಲಿ ಶೇ.60 ಭಾಗ ಲ್ಯಾಂಟನಾಗಳು ಬೆಂಕಿಯ ಕೆನ್ನಾಲಿಗೆಗೆ ಇಂಧನವಾಗುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆಯಿಂದ ವ್ಯಕ್ತಪಡಿಸಿದ ಆತಂಕ ಈಗ ನಿಜವಾಗಿದೆ.
ಅಲ್ಲದೇ ಕಳೆದ ನವೆಂಬರ್ ತಿಂಗಳಲ್ಲಿ ಮಾನ್ಸೂನ್ ಮತ್ತು ಋತುಮಾನದ ಅವಧಿಯ ಭಾರೀ ಮಳೆ ಸಸ್ಯವರ್ಗದ ಅತ್ಯುತ್ತಮ ಬೆಳವಣಿಗೆಗೆ ನೆರವಾಗಿದ್ದವು. ಬೇಸಿಗೆಯಲ್ಲಿ ಒಣಗಿದ್ದ ಸಸ್ಯ ರಾಶಿ ಕಾಡಿನ ಬೆಂಕಿಗೆ ಮತ್ತಷ್ಟು ಉತ್ತೇಜನಕಾರಿಯಾಗುತ್ತದೆ ಎಂಬುದು ಅರಣ್ಯಾಧಿಕಾರಿಗಳ ನಿರೀಕ್ಷೆಯಾಗಿತ್ತು ಕೂಡ. ಮುಂದೆ ಓದಿ...

ಬಹು ಪಥ ವಿಧಾನ ಆವಿಷ್ಕಾರದ ಅಗತ್ಯವಿದೆ
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶವು 912 ಚದರ ಕಿಲೋಮೀಟರ್ ವಿಸ್ತಾರ ಹೊಂದಿದ್ದು, ಕಾಡ್ಗಿಚ್ಚನ್ನು ನಿಯಂತ್ರಿಸುವ ಬಹು ಪಥ ವಿಧಾನ ಆವಿಷ್ಕಾರದ ಅಗತ್ಯವಿದೆ ಮತ್ತು ಬೆಂಕಿ ಶುರುವಾಗುವ ಮುನ್ನವೇ ಮುಂಜಾಗ್ರತೆ ವಹಿಸಿ ತಡೆಗಟ್ಟುವುದು ಅತ್ಯುತ್ತಮ ಪರಿಹಾರ ಮಾರ್ಗವಾಗಿದೆ. ಅದೇ ರೀತಿ ಕಾಡಿನಲ್ಲಿ ಮತ್ತು ಸುತ್ತಲಿನ ಗ್ರಾಮಗಳಿಂದ ಬೆಂಕಿ ನಿಯಂತ್ರಣ ವೀಕ್ಷಕರ ಸಿಬ್ಬಂದಿಯನ್ನು ನಿರ್ಮಿಸಿಕೊಳ್ಳುವುದು ಮಹತ್ವದ್ದಾಗಿದೆ ಎಂದು ಸಂರಕ್ಷಕ ಜೀವ ವಿಜ್ಞಾನಿಯೊಬ್ಬರು ಹೇಳುತ್ತಾರೆ.

ಅನುಮಾನಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ
ಅಗ್ನಿ ಅವಘಡದ ಮುನ್ನೆಚ್ಚರಿಕೆ ಕ್ರಮವೆಂದರೆ ಸ್ಥಳೀಯ ಸಮುದಾಯದ ನಾಯಕರೊಂದಿಗೆ ಸಭೆಗಳನ್ನು ನಡೆಸಿ ಕಾಡ್ಗಿಚ್ಚು ತಡೆಗೆ ಸಹಕಾರ ನೀಡಬೇಕು ಎಂದು ಮನವೊಲಿಸಬೇಕು. ಅವರ ಅನುಮಾನಗಳ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು. ಆ ಮೂಲಕ ಸಮುದಾಯಗಳ ಬೆಂಬಲ ಪಡೆಯಬೇಕು. ಏಕೆಂದರೆ ಸ್ಥಳೀಯ ಸಮುದಾಯಗಳ ಸಹಕಾರ ಇದ್ದರೆ ಯಾವುದೇ ದುರ್ಘಟನೆಯನ್ನು ತಡೆಯಬಹುದು. ಅರಣ್ಯ ಬೆಂಕಿಯನ್ನು ತಡೆಗಟ್ಟಲು ನಾಗರಿಕ ಸಮಾಜವೂ ಕೈಜೋಡಿಸುವಂತೆ ಮನವಿ ಮಾಡಬೇಕಿದೆ.

ಸಂಪದ್ಭರಿತ ಕಾಡಿಗೆ ಯಾವುದೇ ಹಾನಿಯಾಗಿಲ್ಲ
ಬೆಂಕಿ ದುರ್ಘಟನೆಯಿಂದಾಗಿ ಈ ಹಿಂದೆ ಪ್ರಭಾರ ನಿರ್ದೇಶಕರಾಗಿದ್ದ ಅಂಬಾಡಿ ಮಾಧವ್ ಅವರ ಸ್ಥಾನಕ್ಕೆ ಬಂಡೀಪುರ ಹುಲಿ ಯೋಜನೆಗೆ ಪೂರ್ಣ ಪ್ರಮಾಣದ ನಿರ್ದೇಶಕರನ್ನಾಗಿ ಸರ್ಕಾರ ಟಿ. ಬಾಲಚಂದ್ರ ಅವರನ್ನು ನಿಯೋಜಿಸಿದೆ. ಇನ್ನು ಈ ಕುರಿತು ಬಂಡೀಪುರ ಹುಲಿ ಯೋಜನೆ ನೂತನ ನಿರ್ದೇಶಕ ಬಾಲಚಂದ್ರ ಅವರು ಮಾಹಿತಿ ನೀಡಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸ್ಥಿತಿ ಸುಧಾರಿಸುತ್ತಿದೆ. ಆದರೆ ವನ್ಯ ಜೀವಿಗಳಿಗೆ ಹಾನಿಯಾಗಿಲ್ಲ. ಬಂಡೀಪುರ ಅರಣ್ಯ ಸಂಪೂರ್ಣ ಭಸ್ಮವಾಗಿದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ಆದರೆ ವಾಸ್ತವವಾಗಿ ಕೆಲ ಪ್ರದೇಶಕ್ಕೆ ಮಾತ್ರ ಹಾನಿಯಾಗಿದೆ. ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿರುವುದರಿಂದ ಸಹಜವಾಗಿ ಬಂಡೀಪುರ ಅರಣ್ಯವೇ ನಾಶವಾಗಿದೆ ಎಂಬ ಭಾವನೆ ಕಾಡುತ್ತಿದೆ. ಆದರೆ ವಾಸ್ತವವಾಗಿ ಸಂಪದ್ಭರಿತ ಕಾಡಿಗೆ ಯಾವುದೇ ಹಾನಿಯಾಗಿಲ್ಲ ಎಂದರು.

ಸಫಾರಿ ಇಂದಿನಿಂದ ಪುನರಾರಂಭ
ಇನ್ನು ಈ ಅಗ್ನಿ ಅವಘಡದಿಂದಾಗಿ ಕಳೆದ ಒಂದು ವಾರದಿಂದ ಸ್ಥಗಿತಗೊಳಿಸಲಾಗಿದ್ದ ಸಫಾರಿಯನ್ನು ಇಂದಿನಿಂದ ಪುನರಾರಂಭಿಸಲಾಗಿದೆ. ಬೆಂಕಿ ನಂದಿಸುವ ಕಾರ್ಯಾಚರಣೆಗೆ ಎಲ್ಲಾ ಸಿಬ್ಬಂದಿಗಳನ್ನು ಬಳಸಿಕೊಂಡಿದ್ದರಿಂದ ಸಫಾರಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇದರಿಂದ ಜನರಲ್ಲಿ ಆತಂಕವೂ ನಿರ್ಮಾಣವಾಗಿತ್ತು.












Click it and Unblock the Notifications