ಅಸ್ಪೃಶ್ಯ ಪದ ಬಳಕೆ: ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೊಳ್ಳೇಗಾಲದಲ್ಲಿ ದೂರು
ಚಾಮರಾಜನಗರ, ನ. 30: ಸಿಎಂ ಇಬ್ರಾಹಿಂ ಅವರೇನೂ ಅಸ್ಪೃಶ್ಯರಲ್ಲ ಎಂದು ಅಸೂಕ್ಷ್ಮ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಕೊಳ್ಳೇಗಾಲ ಪಟ್ಟಣ ಠಾಣೆಗೆ ಚಾಮರಾಜನಗರ ಜಿಲ್ಲಾ ಪ್ರಗತಿಪರ ಸಂಘಟನೆಗಳ ಒಕ್ಕೂಟವು ದೂರು ನೀಡಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಂಚರತ್ನ ಯಾತ್ರೆ ವೇಳೆ ಜೆಡಿಎಸ್ ಮುಸ್ಲಿಂ ವ್ಯಕ್ತಿಯನ್ನು ಸಿಎಂ ಮಾಡುತ್ತದೆ ಎಂಬ ವಿಚಾರದ ಬಗ್ಗೆ ಮಾತನಾಡುವಾಗ 'ಇಬ್ರಾಹಿಂ ಏಕೆ ಸಿಎಂ ಆಗಬಾರದು, ಅವರೇನು ಅಸ್ಪೃಶ್ಯರಲ್ಲ' ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದರು. ಇಂತಹ ಅಸೂಕ್ಷ್ಮತೆಯ ಹೇಳಿಕೆ ನೀಡಿದಕ್ಕೆ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.
ನೆಲಮಂಗಲ ಸ್ಯಾಟಲೈಟ್ ಸಿಟಿ; ಮೂರು ವರ್ಷದಲ್ಲಿ ಮಾಡದವರು, ಮೂರು ತಿಂಗಳಲ್ಲಿ ಮಾಡ್ತಾರಾ ಹೆಚ್ಡಿಕೆ ವ್ಯಂಗ್ಯ
ಜಿಲ್ಲಾ ಪ್ರಗತಿಪರ ಸಂಘಟನೆಯ ಸಂಚಾಲಕ ಶೇಖರ್ ದೂರು ನೀಡಿದ್ದಾರೆ. ' ಸಿ.ಎಂ. ಇಬ್ರಾಹಿಂ ಅವರೇನೂ ಅಸ್ಪೃಶ್ಯರಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳುವ ಮೂಲಕ ಅಸ್ಪೃಶ್ಯ ಸಮಾಜಕ್ಕೆ ಅಪಮಾನ ಮಾಡಿದ್ದಾರೆ, ಅಸ್ಪೃಶ್ಯತೆ ಆಚರಣೆಗೆ ಪೂರಕವಾಗಿ ಹೇಳಿಕೆ ಕೊಟ್ಟು ಅಸ್ಪೃಶ್ಯತೆ ಆಚರಣೆ ಮಾಡಿದ್ದಾರೆ" ಎಂದು ಶೇಖರ್ ಆರೋಪಿಸಿದ್ದಾರೆ.
ಅಸ್ಪೃಶ್ಯತಾ ನಿಷೇಧ ಕಾಯ್ದೆಯಡಿ ದೂರು ದಾಖಲಿಸಿ ಕಾನೂನಾತ್ಮಕ ಕ್ರಮ ಜರುಗಿಸಬೇಕೆಂದು ಕೊಳ್ಳೇಗಾಲ ಪಟ್ಟಣ ಠಾಣೆಯಲ್ಲಿ ಈ ದೂರು ದಾಖಲಿಸಿದ್ದಾರೆ. ಕಳೆದ ನ. 21 ರಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಪಂಚಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ಸಿ.ಎಂ.ಇಬ್ರಾಹಿಂ ಅವರನ್ನೂ ಮುಖ್ಯಮಂತ್ರಿ ಮಾಡುತ್ತೇವೆ, ಅವರೇನೂ ಅಸ್ಪೃಶ್ಯರಲ್ಲ ಎಂದಿದ್ದರು.
ಇತ್ತ, ಛಲವಾದಿ ಮಹಾಸಭಾ ಮಂಗಳವಾರ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ದೂರು ದಾಖಲಿಸಿದೆ. ಎಸ್.ಸಿ/ಎಸ್.ಟಿ ವಿರುದ್ಧದ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಿಸಿ ಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.