ಭಾಷಣ ಮಾಡಿದರೆ ಸಾಮಾಜಿಕ ನ್ಯಾಯ ಸಿಗಲ್ಲ, ಅವಕಾಶ ಸಿಕ್ಕಾಗ ಕೆಲಸ ಮಾಡಬೇಕು- ಸಿಎಂ ಬೊಮ್ಮಾಯಿ
ಚಾಮರಾಜನಗರ, ಡಿಸೆಂಬರ್ 13: ಭಾಷಣಗಳಿಂದ ಜನರ ಹೊಟ್ಟೆ ತುಂಬಲ್ಲ ಎಂದು ವಿಪಕ್ಷಗಳಿಗೆ ಪರೋಕ್ಷವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.
ಹನೂರಿನಲ್ಲಿ 650 ಕೋಟಿ ರೂಪಾಯಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯ ಎಂದು ಭಾಷಣಗಳನ್ನು ಮಾಡಿದರೆ, ನ್ಯಾಯ ಸಿಗಲ್ಲ. ಅವಕಾಶ ಸಿಕ್ಕಾಗ ಕೆಲಸ ಮಾಡಬೇಕು. ನಾನು ಶಕ್ತಿಮೀರಿ ಬಡವರಿಗೆ ಬದುಕು ಕಟ್ಟಿಕೊಳ್ಳುವಂತ ಕೆಲಸ ಮಾಡುತ್ತಿದ್ದೇನೆ. ಸಂವಿಧಾನದ ಆಶಯ, ಆತ್ಮಸಾಕ್ಷಿಯಂತೆ ಕೆಲಸ ಮಾಡುತ್ತೀದ್ದೇನೆ ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿ ಆಗಲು ಯಾವುದೇ ಪ್ರಯತ್ನವನ್ನು ಮಾಡಿಲ್ಲ ಆದರೆ ಕೆಲವರು ಮುಖ್ಯಮಂತ್ರಿ ಆಗಲೆಂದೇ ಹುಟ್ಟಿದ್ದಾರೆ. ನಾನು ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಬೆಳೆದವನು, ಅವರ ತತ್ವಾದರ್ಶಗಳನ್ನು ಆಡಳಿತದಲ್ಲಿ ಬಳಸುತ್ತಿದ್ದೇನೆ ಎಂದು ಹೇಳಿದರು.

ಬಡವರು ಬದುಕು ಕಟ್ಟಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ
ಪ.ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳದ ವಿಚಾರವನ್ನೇ ಈ ಹಿಂದೆ ಹೆದರಿಕೆಯಿಂದ ಯಾರು ಮುಟ್ಟಲಿಲ್ಲ. ಆದರೆ ನಾನು ಧೈರ್ಯ ಮಾಡಿ ಆತ್ಮಸಾಕ್ಷಿಯಂತೆ ನಡೆದುಕೊಂಡು ಮೀಸಲಾತಿ ಹೆಚ್ಚಿಸಿದೆ. ವಾಸ್ತವಾಂಶಕ್ಕೆ ಸ್ಪಂದಿಸಿದರೆ ಕ್ರಾಂತಿ ಆಗಲಿದೆ. ಬದುಕಲ್ಲಿ ಕ್ರಾಂತಿ ಆಗಲಿದೆ. ಬಡವರು ಬದುಕು ಕಟ್ಟಿಕೊಳ್ಳಲು ಏನು ಬೇಕಾದರೂ ಮಾಡುತ್ತೇನೆ. ನಾವು ಎಷ್ಟು ವರ್ಷ ಸಿಎಂ ಆಗಿರುತ್ತೇವೆ ಎಂಬುದು ಮುಖ್ಯವಲ್ಲ, ನಾವು ಏನು ಕೆಲಸ ಮಾಡಿದ್ದೇವೆ ಎಂಬುದು ಮುಖ್ಯ ಎಂದರು.

ನಡುಭಾಗದ ಪ್ರದೇಶದಷ್ಟೇ ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಯೂ ಮುಖ್ಯ
ಬದಲಾವಣೆ ಜಗದ ನಿಯಮ, ಪ್ರಾಮಾಣಿಕತೆ, ನಿಷ್ಠೆ ಮುಖ್ಯ. ಜನರಿಗೆ ತಿಳಿದಿದೆ ಯಾರು ನಿಷ್ಠರು ಎನ್ನುವುದು. ನಮ್ಮದು ಡಬಲ್ ಎಂಜಿನ್ ಸರ್ಕಾರ ಆದ್ದರಿಂದಲೇ 6 ಸಾವಿರ ಕಿಮೀ ರಸ್ತೆ ನಿರ್ಮಾಣ ಆಗುತ್ತಿದೆ, ಅಸಾಧ್ಯ ಆಗಿರುವುದೆಲ್ಲಾ ಸಾಧ್ಯವಾಗುತ್ತಿದೆ. ನಡುಭಾಗದ ಪ್ರದೇಶದಷ್ಟೇ ಗಡಿಭಾಗದ ಜಿಲ್ಲೆಗಳ ಅಭಿವೃದ್ಧಿಯೂ ಮುಖ್ಯ. ಆದ್ದರಿಂದಲೇ 1500 ಗಡಿ ಗ್ರಾಮಗಳ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದ್ದೇವೆ. ಗಡಿಭಾಗದ ಶಾಲೆಗಳು, ರಸ್ತೆಗಳು ಮತ್ತು ಆಸ್ಪತ್ರೆಗಳ ಅಭಿವೃದ್ಧಿಗೆ ಹೆಚ್ಚು ಅನುದಾನ ಕೊಡಲಾಗುತ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರ ಘೋಷಣೆ ಮಾಡುವುದಲ್ಲ ಕಾರ್ಯಗತ ಮಾಡುತ್ತಿದ್ದೇವೆ
ಗಡಿಭಾಗದ ಕನ್ನಡಿಗರಷ್ಟೇ ಗಡಿಯಾಚೆಗಿನ ಕನ್ನಡಿಗರ ಅಭಿವೃದ್ಧಿಯೂ ಮುಖ್ಯ. ಗಡಿಯಾಚೆಗಿನ ಕನ್ನಡ ಶಾಲೆಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್ ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ಹನೂರು ಕ್ಷೇತ್ರ ರಾಜ್ಯದಲ್ಲೇ ಅತ್ಯಂತ ಮುಂದುವರೆದ ತಾಲೂಕು ಆಗಲಿದೆ ಎಂದರು.
ಹಿಂದಿನ ಸರ್ಕಾರಗಳು ಯೋಜನೆಗಳನ್ನು ಘೋಷಣೆಗಳು ಮಾಡುತ್ತಿದ್ದವು ಆದರೆ ಕಾರ್ಯಗತ ಆಗುತ್ತಿರಲಿಲ್ಲ. ಕಾಗದದಲ್ಲಿ ಆದೇಶ ಇರುತ್ತಿತ್ತು. ನನ್ನ ಕ್ಷೇತ್ರದಲ್ಲೇ 3 ಬಾರಿ ಯೋಜನೆಯೊಂದು ಆದೇಶ ಹೊರಡಿಸಿ ಬಳಿಕ ಅನುದಾನ ಕೊಡದೆ ರದ್ದಾಯಿತು. ಆದರೆ, ನಮ್ಮ ಸರ್ಕಾರ ಘೋಷಣೆ ಮಾಡುವುದಲ್ಲ ಕಾರ್ಯಗತ ಮಾಡುತ್ತಿದ್ದೇವೆ ಎಂದು ವಿಪಕ್ಷಗಳಿಗೆ ಸಿಎಂ ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.

ರೈತರ ಸಮಸ್ಯೆ ಆಲಿಸಿದ ಸಿಎಂ ಬಸವರಾಜ ಬೊಮ್ಮಾಯಿ
ಜನರು ನಮಗೆ 60 ತಿಂಗಳು ಅವಕಾಶ ಕೊಡುತ್ತಾರೆ. 59 ತಿಂಗಳು ಕೆಲಸ ಮಾಡೋಣ. 1 ತಿಂಗಳು ರಾಜಕೀಯ ಮಾಡೋಣ, ಶಾಸಕರುಗಳು ಕೊಟ್ಟಿರುವ ಮನವಿಗಳನ್ನು ಶೀಘ್ರ ಮಂಜೂರಾತಿ ಕೊಡುತ್ತೇನೆ. ಯಳಂದೂರು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಬಗ್ಗೆ ಚಿಂತಿಸುತ್ತೇನೆ. ಚಾಮರಾಜನಗರ ಜಿಲ್ಲೆಯ ಅಭಿವೃದ್ಧಿಗೆ ಆದಷ್ಟು ನೆರವಾಗುವುದಾಗಿ ಭರವಸೆ ಕೊಟ್ಟರು.
ಬಡಗಲಪುರ ನಾಗೇಂದ್ರ ನೇತೃತ್ವದಲ್ಲಿ ರೈತರು ಸಲ್ಲಿಸಿದ ಅಹವಾಲನ್ನು ಸ್ವೀಕರಿಸಿದ ಸಿಎಂ ಬೊಮ್ಮಾಯಿ ಆದಷ್ಟು ಬೇಗ ವರದಿಯನ್ನು ತರಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications