3 ಲೀಟರ್ ನೀರಲ್ಲಿ ಕಾರ್ ಸರ್ವಿಸ್: ಚಾಮರಾಜನಗರದ ಯುವಕ ಜಾದೂ!
ಚಾಮರಾಜನಗರ, ಜನವರಿ 10: ನೀರಿಗಾಗಿ ಪರದಾಡುವ ಈ ಕಾಲದಲ್ಲಿ ವಾಹನಗಳನ್ನು ನೀರಿನಲ್ಲಿ ಸರ್ವೀಸ್ ಮಾಡುವುದು ಅಷ್ಟು ಸುಲಭದ ಕೆಲಸವೇನಲ್ಲ. ಹೀಗಾಗಿ ಕಡಿಮೆ ಪ್ರಮಾಣದ ನೀರಿನಲ್ಲಿ ಕಾರನ್ನು ತೊಳೆಯಬಹುದು ಎಂಬುದನ್ನು ಗುಂಡ್ಲುಪೇಟೆ ಪಟ್ಟಣದ ಯುವಕ ವಿಕಾಸ್ ತೋರಿಸಿಕೊಟ್ಟಿದ್ದಾರೆ.
ಇವರು ಗುಂಡ್ಲುಪೇಟೆ ಪಟ್ಟಣ ಪುರಸಭೆಯ ಮಾಜಿ ಅಧ್ಯಕ್ಷೆ, ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಪುಟ್ಟತಾಯಮ್ಮನವರ ಮೊಮ್ಮಗ ದ್ರಾವಣಗಳನ್ನು ಬಳಸಿ ಕೇವಲ 3 ರಿಂದ 5 ಲೀಟರ್ ನೀರಿನಲ್ಲಿ ಕಾರುಗಳನ್ನು ತೊಳೆಯುವ, ಸರ್ವೀಸ್ ಮಾಡುವ ವಿಧಾನ ಕಂಡು ಹಿಡಿದು ಇತರರಿಗೆ ಮಾದರಿಯಾಗಿದ್ದಾರೆ.

ಜರ್ಮನಿಯಲ್ಲಿ ಐದು ವರ್ಷಗಳ ಕಾಲ ಮಾಸ್ಟರ್ ಆಫ್ ಇಂಜಿನಿಯರಿಂಗ್ ನಲ್ಲಿ ಆಟೋಮೊಬೈಲ್ ಅಧ್ಯಯನ ಮಾಡಿ, ಒಂದು ವರ್ಷ ಪ್ರತಿಷ್ಟಿತ ಫೋಕ್ಸ್ ವೆಗಾನ್ ಕಂಪನಿಯಲ್ಲಿ ಸಲಹೆಗಾರನಾಗಿ ಕಾರ್ಯನಿರ್ವಹಿಸುತ್ತಿದ್ದರು. ಆ ಸಂದರ್ಭದಲ್ಲಿ ಕಾರುಗಳನ್ನು ಸರ್ವೀಸ್ ಮಾಡಲು ಅಧಿಕ ಪ್ರಮಾಣದಲ್ಲಿ ನೀರು ವ್ಯಯವಾಗುತ್ತಿರುವುದನ್ನು ಗಮನಿಸಿದ ವಿಕಾಸ್ ಅವರು ಕಡಿಮೆ ಬಳಕೆ ಮಾಡುತ್ತಿರುವುದನ್ನು ಕಂಡು ತಮ್ಮ ಸ್ನೇಹಿತರೊಂದಿಗೆ ಚರ್ಚಿಸಿ ನೀರು ಉಳಿಸಲು ಯೋಜನೆ ರೂಪಿಸಿದರು.
ಸಾಮಾನ್ಯವಾಗಿ ಸರ್ವೀಸ್ ಸ್ಟೇಷನ್ ಗಳಲ್ಲಿ ಒಂದು ಕಾರು ಸರ್ವೀಸ್ ಮಾಡಲು 150ರಿಂದ 180 ಲೀಟರ್ ನೀರು ಬೇಕಾಗುತ್ತದೆ. ಈ ನೀರನ್ನು ಕಡಿಮೆ ಮಾಡಲು ಸಾಧ್ಯನಾ ಎಂದು ಆಲೋಚಿಸಿದ ಅವರು ಇದಕ್ಕಾಗಿ ಹೊಸ ಆವಿಷ್ಕಾರ ಮಾಡಲು ಮುಂದಾದರು.

ಜರ್ಮನಿಯಿಂದ ತವರಿಗೆ ಮರಳಿದ ಅವರು ತಮ್ಮ ಸ್ನೇಹಿತರು ಮೈಸೂರಿನ ಕುವೆಂಪು ನಗರದಲ್ಲಿ ಪ್ರಾರಂಭಿಸಿರುವ ಸರ್ವೀಸ್ ಕೇಂದ್ರದಲ್ಲಿ ತಮ್ಮ ಬಹುದಿನ ಕನಸನ್ನು ನನಸು ಮಾಡಲು ಮುಂದಾದರು. ನೀರಿನ ಬಳಕೆಯನ್ನು ಕಡಿಮೆ ಮಾಡುವ ಸಲುವಾಗಿ ವಾಹನದ ಹೊರಭಾಗ, ಟಯರ್, ಒಳಭಾಗ ಹಾಗೂ ಗಾಜುಗಳಿಗೆ ಪ್ರತ್ಯೇಕ ಪರಿಸರಸ್ನೇಹಿ ದ್ರಾವಣಗಳನ್ನು ಬಳಸಿ ಬಟ್ಟೆಗಳಿಂದ ಒರೆಸುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತಿದ್ದ ನೀರಿನ ಪ್ರಮಾಣವನ್ನು ತಗ್ಗಿಸಿದ್ದಾರೆ.
ವಿಕಾಸ್ ಅವರು ಕಂಡುಕೊಂಡಿರುವ ವಿಧಾನದಿಂದ ನೀರು ಕಡಿಮೆ ಬಳಕೆ ಆಗುವುದಲ್ಲದೆ, ಉತ್ತಮ ರೀತಿಯ ಸರ್ವೀಸ್ ಕೂಡ ಆಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಜತೆಗೆ ಗ್ರಾಹಕರಲ್ಲಿಯೂ ನೀರಿನ ಮಿತವ್ಯಯದ ಕುರಿತು ಅರಿವು ಮೂಡಿಸುತ್ತಿದ್ದಾರೆ. ಇನ್ನೊಂದೆಡೆ ವಾಹನ ಹೊಂದಿರುವ ಮಾಲೀಕರ ಮನೆಗೆ ತೆರಳಿ ಅವರ ಸಮ್ಮುಖದಲ್ಲಿಯೇ ಸರ್ವೀಸ್ ಮಾಡುತ್ತಿದ್ದಾರೆ.

ಈಗಾಗಲೇ ಇದಕ್ಕಾಗಿ ಮೂರು ತಂಡಗಳನ್ನು ರಚಿಸಿ ಮೂಕ ಹಾಗೂ ಕಿವುಡ ಯುವಕರಿಗೆ ತರಬೇತಿ ನೀಡಿದ್ದು, ಅವರು ಕೂಡ ಸ್ವಾವಲಂಬಿಗಳಾಗಲು ಪ್ರೇರೇಪಿಸಿದ್ದಾರೆ. ಒಟ್ಟಾರೆ ವಿಕಾಸ್ ಅವರ ಹೊಸ ವಿಧಾನ ಈಗ ಎಲ್ಲರ ಗಮನಸೆಳೆಯುತ್ತಿರುವುದಂತೂ ಸತ್ಯ.












Click it and Unblock the Notifications