ಕಾವೇರಿ ವಿವಾದ: 25 ದಿನಗಳಿಂದ ನಿರಂತರ ಹೋರಾಟ, ನಾಳೆ ಚಾಮರಾಜನಗರ ಬಂದ್
ಚಾಮರಾಜನಗರ, ಸೆಪ್ಟೆಂಬರ್ 28: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ಕರೆ ನೀಡಿರುವ ಕರ್ನಾಟಕ ಬಂದ್ಗೆ ಗಡಿಜಿಲ್ಲೆ ಚಾಮರಾಜನಗರದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿತ್ತು, 20ಕ್ಕೂ ಹೆಚ್ಚು ಸಂಘಟನೆ ಬೆಂಬಲ ಸೂಚಿಸಿವೆ.
ಶುಕ್ರವಾರ ಬೆಳಗ್ಗೆ 6 ರಿಂದ ಸಂಜೆ 6 ತನಜ ಚಾಮರಾಜನಗರವನ್ನು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧರಿಸಲಾಗಿದ್ದು, ಕಬ್ಬು ಬೆಳೆಗಾರರ ಸಂಘ, ರೈತ ಸಂಘಟನೆ, ಕನ್ನಡಪರ ಸಂಘಟನೆಗಳು, ಖಾಸಗಿ ಸಾರಿಗೆ ಸಂಘ, ಆಟೋ ಚಾಲಕರು, ತಮಿಳರ ಸಂಘ, ಬಿಜೆಪಿ, ಜೆಡಿಎಸ್, ಬಿಎಸ್ ಪಿ, ಎಸ್ ಡಿಪಿಐ ಸೇರಿದಂತೆ 20ಕ್ಕೂ ಸಂಘಟನೆಗಳು, ರಾಜಕೀಯ ಪಕ್ಷಗಳು ಬೆಂಬಲ ಘೋಷಣೆ ಮಾಡಿವೆ.

ಬೆಳಗ್ಗೆ 6ರಿಂದಲೇ ಚಾಮರಾಜನಗರದ ಪ್ರಮುಖ ರಸ್ತೆಗಳಲ್ಲಿ ರಸ್ತೆ ತಡೆ, ಧರಣಿ, ಮೆರವಣಿಗೆ ನಡೆಯಲಿದ್ದು ಅದಾದ ಬಳಿಕ ಕಾವೇರಿ ಕ್ರಿಯಾ ಸಮಿತಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ನೀರು ಬಿಡದಂತೆ ಮನವಿ ಸಲ್ಲಿಸಲು ಯೋಜನೆ ರೂಪಿಸಲಾಗಿದೆ.
ತಮಿಳುನಾಡು ವಾಹನಗಳ ಓಡಾಟ ಡೌಟ್
ಬೆಂಗಳೂರು ಬಂದ್ ಕರೆ ಕೊಟ್ಟಾಗಲೇ ತಮಿಳುನಾಡು ನೋಂದಣಿ ವಾಹನಗಳು ಕರ್ನಾಟಕದ ಗಡಿದಾಟಿರಲಿಲ್ಲ. ಗುಂಡ್ಲುಪೇಟೆ ತಾಲೂಕಿನ ತಮಿಳುನಾಡು ಗಡಿ ಕೆಕ್ಕನಹಳ್ಳ ಚೆಕ್ ಪೋಸ್ಟ್ ನಲ್ಲಿ ತಮಿಳುನಾಡು ನೋಂದಣಿ ವಾಹನಗಳು ರಾಜ್ಯಕ್ಕೆ ಪ್ರವೇಶ ನೀಡದಂತೆ ತಮಿಳುನಾಡು ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಈಗ, ಕರ್ನಾಟಕ ಬಂದ್ ಆಗುವ ಹಿನ್ನೆಲೆ ತಮಿಳುನಾಡು ನೋಂದಣಿ ವಾಹನಗಳು ರಾಜ್ಯ ಪ್ರವೇಶಿಸುವುದು ಬಹುತೇಕ ಸಂದೇಹವಾಗಿದೆ.

ಮಾದಪ್ಪನನ್ನು ಬೇಡಿದರೆ ನೀರು ಬರಲ್ಲ- ಹರಿಸುತ್ತಿರುವ ನೀರು ನಿಲ್ಲಿಸಿ
ವರ್ತಕರು, ವಾಹನ ಚಾಲಕರು, ಹೋಟೆಲ್ಗಳಿಗೆ ಇಂದು ಕಬ್ಬು ಬೆಳೆಗಾರರ ಸಂಘ ಕರಪತ್ರಗಳನ್ನು ಹಂಚಿ ಬಂದ್ಗೆ ಬೆಂಬಲ ನೀಡುವಂತೆ ಮನವಿ ಮಾಡಿಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, 'ಮಳೆ ಬರಲಿ ಎಂದು ಸಿದ್ದರಾಮಯ್ಯ ದೇವರಿಗೆ ಬೇಡಿಕೊಂಡಿದ್ದಾರೆ. ದೇವರಿಗೆ ಬೇಡಿದರೆ ಮಳೆ ಬರಲ್ಲ. ಇರುವ ನೀರನ್ನು ಮೊದಲು ಉಳಿಸಿ ಅಂಥಾ ನಾವು ಕೇಳುತ್ತಿದ್ದೇವೆ. ಪ್ರಕೃತಿ ಮುನಿದರೆ ನಾವು ಏನು ಮಾಡಲಾಗಲ್ಲ. ಇರುವ ನೀರನ್ನು ಉಳಿಸಿ ಎಂದು ನಾವು ಬೇಡುತ್ತಿದ್ದೇವೆ. ಅಧಿಕಾರಕ್ಕಾಗಿ ನಾನು ಅಂಟಿಕೊಂಡಿಲ್ಲ ಎಂದು ಘೋಷಿಸಿ ನೀರು ಬಿಡದ ನಿರ್ಣಯ ಮಾಡಿ. ನಿಮ್ಮ ಜೊತೆಗೆ ನಾವಿರುತ್ತೇವೆ' ಎಂದು ಆಗ್ರಹಿಸಿದರು.
ಒಟ್ಟಿನಲ್ಲಿ ಕಾವೇರಿಗಾಗಿ ಕಳೆದ 25 ದಿನಗಳಿಂದಲೂ ಗಡಿಜಿಲ್ಲೆ ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿದ್ದು, ನಾಳಿನ ಬಂದ್ ನಲ್ಲೂ ಕೂಡ ಚಾಮರಾಜನಗರ ಸ್ತಬ್ಧವಾಗಲಿದೆ.












Click it and Unblock the Notifications