ಸಾರಾಯಿಯನ್ನು ಜ್ಯೂಸ್ ಬಾಟಲಿಯಲ್ಲಿ ಮಾರುತ್ತಿದ್ದವನ ಬಂಧನ
ಚಾಮರಾಜನಗರ, ಆಗಸ್ಟ್ 18: ಹಳ್ಳಿಗಳ ಪೆಟ್ಟಿಗೆ ಅಂಗಡಿಯಿಂದ ಆರಂಭವಾಗಿ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟದ ವಾಸನೆ ಮೂಗಿಗೆ ಬಡಿಯುತ್ತಿರುವ ಬೆನ್ನಲ್ಲೇ ಕಳ್ಳಭಟ್ಟಿ ಸಾರಾಯಿ ತಯಾರಿಸಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಅಬಕಾರಿ ಅಧಿಕಾರಿಗಳ ತಂಡ ಬಂಧಿಸಿದ ಘಟನೆ ಕೊಳ್ಳೇಗಾಲ ತಾಲೂಕಿನ ರಾಮಪುರ ಹೋಬಳಿಯ ಕೆರೆದೊಡ್ಡಿ ಗ್ರಾಮದಲ್ಲಿ ನಡೆದಿದೆ. [ಬಂಡೀಪುರದಲ್ಲಿ ಬೇಟೆಗಾರರ ಗುಂಡೇಟಿಗೆ ಗಂಡು ಹುಲಿ ಬಲಿ]

ಗ್ರಾಮದ ನಿವಾಸಿ ಸಕ್ರುನಾಯ್ಕ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಆರೋಪಿ. ಈತ ಮನೆಯಲ್ಲೇ ಕಳ್ಳಭಟ್ಟಿ ತಯಾರಿಸಿ, ಮಾರಾಟ ಮಾಡುತ್ತಿದ್ದ. ಪಟ್ಟಣದಿಂದ ಮದ್ಯ ಖರೀದಿಸಿ ಕುಡಿಯಲಾಗದವರು ಅಗ್ಗದ ಬೆಲೆಗೆ ಸಿಗುತ್ತಿದ್ದ ಸಕ್ರುನಾಯ್ಕನ ಕಳ್ಳಭಟ್ಟಿಗೆ ಮಾರುಹೋಗಿ ಗಿರಾಕಿಗಳಾಗಿದ್ದರು.
ಕಳ್ಳಭಟ್ಟಿ ತಯಾರಿಸಿ, ಅದನ್ನು ಜ್ಯೂಸ್ ಬಾಟಲಿಗಳಲ್ಲಿ ತುಂಬಿ ಮಾರಾಟ ಮಾಡುತ್ತಿದ್ದ. ಈ ಮಧ್ಯೆ ಕಳ್ಳಭಟ್ಟಿ ವ್ಯವಹಾರ ಜೋರಾಗಿಯೇ ನಡೆಯುತ್ತಿತ್ತಾದರೂ ಈ ಬಗ್ಗೆ ಯಾರೂ ಬಾಯಿಬಿಟ್ಟಿರಲಿಲ್ಲ. ರಾತ್ರಿ ಕಳ್ಳಭಟ್ಟಿ ಸಾರಾಯಿ ತಯಾರು ಮಾಡಿ, ಬಾಟಲಿಗಳಲ್ಲಿ ಸಂಗ್ರಹಿಸಿಟ್ಟು ಹಗಲು ವೇಳೆ ವ್ಯಾಪಾರ ನಡೆಸುತ್ತಿದ್ದ. [ಸೆ.25ರಂದು ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯೋತ್ಸವ]
ಈ ಕುರಿತು ಮಾಹಿತಿ ಬಂದ ಹಿನ್ನೆಲೆಯಲ್ಲಿ ಗಸ್ತಿನಲ್ಲಿದ್ದ ಜಿಲ್ಲಾ ಅಬಕಾರಿ ಉಪ ಆಯುಕ್ತೆ ವೀಣಾ, ಅಬಕಾರಿ ನಿರೀಕ್ಷಕರಾದ ಚೆಲುವರಾಜು, ಮೋಹನ್ ಕುಮಾರ್, ನಟರಾಜು, ಉಪನಿರೀಕ್ಷಕ ದೊರೈಸ್ವಾಮಿ, ಶಿವನಂಜಚಾರಿ, ರೇವಣ್ಣ, ಶಿವಮುಲ್ಲು ಮತ್ತು ಸಿಬ್ಬಂದಿಯೊಂದಿಗೆ ದಾಳಿ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕಳ್ಳಭಟ್ಟಿ ಸಾರಾಯಿ ಮಾರಾಟ ಮಾಡುತ್ತಿದ್ದ ಸಕ್ರುನಾಯ್ಕ ಸಿಕ್ಕಿ ಬಿದ್ದಿದ್ದಾನೆ. ಆದರೆ ಅದಾಗಲೇ ಸಾರಾಯಿ ಮಾರಾಟ ಮಾಡಿ ಮುಗಿಸಿದ್ದರಿಂದ ಎರಡು ಲೀಟರ್ ಸಾರಾಯಿ ಮಾತ್ರ ಸಿಕ್ಕಿದೆ. ಆರೋಪಿಯನ್ನು ವಶಕ್ಕೆ ಪಡೆದ ಅಬಕಾರಿ ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.












Click it and Unblock the Notifications