ಬಂಡೀಪುರ ಕೆರೆಯಲ್ಲಿ ಸಿಲುಕಿದ ಕಾಟಿ ರಕ್ಷಣೆ
ಬಂಡೀಪುರ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯಲ್ಲಿ ಕೆರೆಗೆ ನೀರು ಕುಡಿಯಲು ಬಂದ ಕಾಟಿಯೊಂದು ಕೆರೆಯ ಹೂಳಿನಲ್ಲಿ ಸಿಕ್ಕಿಕೊಂಡಿದೆ. ಗ್ರಾಮಸ್ಥರ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿ ಅದನ್ನು ರಕ್ಷಿಸಿದ್ದಾರೆ
ಚಾಮರಾಜನಗರ, ಮಾರ್ಚ್ 16: ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಲುಕಿ ಸಾವು- ಬದುಕಿನ ಮಧ್ಯೆ ಹೋರಾಡುತ್ತಿದ್ದ ಕಾಟಿಯನ್ನು ಸಾರ್ವಜನಿಕರ ಸಹಾಯದಿಂದ ಅರಣ್ಯ ಸಿಬ್ಬಂದಿ ರಕ್ಷಿಸಿದ ಘಟನೆ ಬಂಡೀಪುರ ಅರಣ್ಯದ ಹಿರಿಕೆರೆಯಲ್ಲಿ ನಡೆದಿದೆ.
ಬಂಡೀಪುರ ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿ ಯೋಜನೆಯ ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ ಸಮೀಪದ ಹಿರಿಕೆರೆಯಲ್ಲಿ ಇತ್ತೀಚೆಗೆ ಮಳೆ ಸುರಿದಿದ್ದರಿಂದ ಸ್ವಲ್ಪ ಮಟ್ಟಿಗೆ ನೀರು ತುಂಬಿತ್ತು. ಆದರೆ ಹೂಳು ತುಂಬಿರುವ ಕಾರಣ ಕೆರೆಯ ಆಳ ಗೊತ್ತಾಗುತ್ತಿರಲಿಲ್ಲ. ಈ ನಡುವೆ ಸುಮಾರು 25 ವರ್ಷದ ಕಾಟಿ ನೀರನ್ನು ಅರಸುತ್ತಾ ಅರಣ್ಯದಲ್ಲಿ ಅಲೆದಾಡಿದ್ದು, ಮಂಗಳವಾರ ಮಧ್ಯರಾತ್ರಿ ಈ ಕೆರೆಯತ್ತ ಬಂದಿದೆ.[ಗೋ ಮಧುಸೂದನ್ ಬಂಡೀಪುರದ ರೆಸಾರ್ಟ್ ಮುಟ್ಟುಗೋಲು?]

ನೀರನ್ನು ಕಂಡು ಕುಡಿಯಲೆಂದು ಕೆರೆಗೆ ಇಳಿದಿದೆ. ಆದರೆ ಹೂಳು ತುಂಬಿದ ಕಾರಣ ಹೂತುಕೊಂಡಿದ್ದು, ಮೇಲೆ ಬರಲಾಗದೆ ಅಲ್ಲಿಯೇ ಒದ್ದಾಡಿ ನಿತ್ರಾಣಗೊಂಡಿದೆ. ಗಸ್ತಿನಲ್ಲಿದ್ದ ಸಿಬ್ಬಂದಿ ಇದನ್ನು ಗಮನಿಸಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ.[ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿ ದಾಳಿಗೆ ಆನೆಮರಿ ಬಲಿ]

ವಿಷಯ ತಿಳಿದು ಸ್ಥಳಕ್ಕೆ ಸಿಬ್ಬಂದಿಯೊಂದಿಗೆ ಬಂದ ಬಂಡೀಪುರ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಿ.ಎ.ಮರಡಿಮನಿ, ಗೋಪಾಲಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ಪುಟ್ಟಸ್ವಾಮಿ ಅವರು ಸ್ಥಳೀಯರ ನೆರವಿನಿಂದ ಹಗ್ಗವನ್ನು ಬಳಸಿ ಕಾಟಿಯನ್ನು ಮೇಲಕ್ಕೆ ಎಳೆದು ರಕ್ಷಿಸುವಲ್ಲಿ ಯಶಸ್ವಿಯಾದರು. ಪೂರ್ಣ ಅಸ್ವಸ್ಥಗೊಂಡಿದ್ದರಿಂದ ಮತ್ತು ಮೈಮೇಲೆ ಕೆಸರು ಅಂಟಿಕೊಂಡಿದ್ದರಿಂದ ಕೆಲ ಕಾಲ ಕೆರೆಯ ದಂಡೆಯಲ್ಲಿ ವಿಶ್ರಾಂತಿ ಪಡೆದು ಬಳಿಕ ಕಾಡಿನತ್ತ ಮುಖ ಮಾಡಿದೆ.
ಈ ಲೇಖನದಲ್ಲಿ ಕಾಡುಕೋಣಕ್ಕೆ ಕಾಟಿ ಎಂದು ಬಳಸಲಾಗಿದೆ. ಇದು ಉಲ್ಲಾಸ ಕಾರಂತರು ಹೇಳುವಂಥದ್ದು. ಆದ್ದರಿಂದ ಕಾಟಿ ಪದ ಬಳಸಲಾಗಿದೆ.












Click it and Unblock the Notifications