ಕಾವೇರಿ ತಣ್ಣಗಾದ ಮೇಲೆ ಚಾಮರಾಜನಗರದ ಎಲ್ಲೆಲ್ಲೂ ಪ್ರವಾಸಿಗರು
ಚಾಮರಾಜನಗರ, ಅಕ್ಟೋಬರ್ 14: ದಸರಾ ವೀಕ್ಷಣೆಗೆ ಮೈಸೂರಿಗೆ ಬಂದ ಪ್ರವಾಸಿಗರು ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಿದ್ದು, ಬಂಡೀಪುರ ರಾಷ್ಟ್ರೀಯ ಉದ್ಯಾನ, ಹಿಮವದ್ ಗೋಪಾಲಸ್ವಾಮಿ ಬೆಟ್ಟ, ಹುಲುಗಿನಮುರುಡಿ ವೆಂಕಟರಮಣ ಸ್ವಾಮಿ ಬೆಟ್ಟ, ಹೋಟೆಲ್ ಹಾಗೂ ರೆಸಾರ್ಟ್ ಗಳು ಪ್ರವಾಸಿಗರಿಂದ ತುಂಬಿವೆ.
ಸಾಲು ರಜೆ ಹಾಗೂ ದಸರಾ ಹಬ್ಬದ ಹಿನ್ನೆಲೆಯಲ್ಲಿ ಕುಟುಂಬದೊಡನೆ ಮೈಸೂರಿಗೆ ಬಂದಿರುವ ಪ್ರವಾಸಿಗರು ತಡರಾತ್ರಿಗಳಲ್ಲಿ ಚಾಮರಾಜನಗರಕ್ಕೆ ಬರುತ್ತಿದ್ದಾರೆ. ರಾತ್ರಿವೇಳೆ ಹೊರ ರಾಜ್ಯಗಳ ಚೆಕ್ ಪೋಸ್ಟ್ ಗಳಲ್ಲಿ ವಾಹನಗಳನ್ನು ಬಿಡದಿರುವುದರಿಂದ ಹೆಚ್ಚಿನವರು ಸ್ಥಳೀಯ ಲಾಡ್ಜ್ ಹಾಗೂ ರೆಸಾರ್ಟ್ ಗಳಲ್ಲಿ ವಾಸ್ತವ್ಯ ಹೂಡುತ್ತಿದ್ದಾರೆ.[ಬಂಡೀಪುರದಲ್ಲಿ 'ಪ್ರಿನ್ಸ್' ಹುಲಿ ಕಂಡಾಗ ಕುಪ್ಪಳಿಸಿದ ಮನ]

ಹೋಟೆಲ್ ಗೆ ದೀಪಾಲಂಕರ: ಕಾವೇರಿ ಗಲಾಟೆಯಿಂದಾಗಿ ಇದುವರೆಗೆ ಬಾರದೆ ಬಿಕೋ ಎನ್ನುತ್ತಿದ್ದ ಪ್ರವಾಸಿ ತಾಣಗಳಲ್ಲಿ ಇದೀಗ ಪ್ರವಾಸಿಗರು ಕಂಡು ಬರುತ್ತಿದ್ದಾರೆ. ಹೆದ್ದಾರಿಯಲ್ಲಿರುವ ಹೋಟೆಲ್ ಗಳ ಮಾಲೀಕರು ದೀಪಾಲಂಕಾರ ಮಾಡಿ, ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಬಂಡೀಪುರ ಮಾರ್ಗದಲ್ಲಿ ಸಿಗುವ ಹಿಮವದ್ ಗೋಪಾಲಸ್ವಾಮಿ ಬೆಟ್ಟ, ತೆರಕಣಾಂಬಿ ಸಮೀಪದ ಹುಲಿಗಿನಮುರಡಿ ವೆಂಕಟರಮಣಸ್ವಾಮಿ ಬೆಟ್ಟದಲ್ಲಿ ವಿಶೇಷ ಪೂಜೆಗಳನ್ನು ಮಾಡಲಾಗುತ್ತಿದೆ.

ಪ್ರವಾಸಿಗರ ಹಿಂಡು ಇಲ್ಲಿಗೆ ಭೇಟಿ ನೀಡಿ, ಸ್ವಾಮಿಯ ದರ್ಶನ ಪಡೆದುಕೊಳ್ಳುತ್ತಾರೆ. ಗೋಪಾಲಸ್ವಾಮಿ ಬೆಟ್ಟದ ರಸ್ತೆ ನಿರ್ಮಾಣ ಕಾಮಗಾರಿಯಿಂದಾಗಿ ಪ್ರಯಾಣದ ಅವಧಿ ಹೆಚ್ಚಾಗುತ್ತಿದ್ದು, ಪ್ರವಾಸಿಗರು ಕಿರಿಕಿರಿ ಅನುಭವಿಸುವಂತಾಗಿದೆ. ಬಂಡೀಪುರ ಹಾಗೂ ಸುತ್ತಮುತ್ತ ವಸತಿ ದೊರಕದ ಪ್ರವಾಸಿಗರು ಗುಂಡ್ಲುಪೇಟೆ ಪಟ್ಟಣದ ಹೋಟೆಲ್ ಗಳಲ್ಲಿ ತಂಗುತ್ತಿದ್ದಾರೆ.[ಬಂಡೀಪುರದ 'ರಾಜಾ ಹುಲಿ' ಬಂದರೆ ಎಂಥ ಗಾಡಿಯೂ ಸೈಡಿಗೆ]

ಮುದುಮಲೈ, ಊಟಿ ಕಡೆಗೆ: ಕೆಲವರು ಬಂಡೀಪುರದಲ್ಲಿ ಸಫಾರಿಯಲ್ಲಿ ಪಾಲ್ಗೊಂಡು, ನಂತರ ಮುದುಮಲೈ ಹಾಗೂ ಊಟಿಯ ಕಡೆಗೆ ತೆರಳುತ್ತಿದ್ದಾರೆ. ಕೇರಳದ ಗುರುವಾಯೂರಿಗೆ ಹೋಗುವ ಪ್ರವಾಸಿಗರ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗಿದೆ. ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಮಾತ್ರ ದಾಖಲೆ ಪ್ರಮಾಣದಲ್ಲಿದೆ.












Click it and Unblock the Notifications