Q2: ಕೆನರಾ ಬ್ಯಾಂಕ್ ನಿವ್ವಳ ಲಾಭದಲ್ಲಿ ಭಾರಿ ಕುಸಿತ
ಬೆಂಗಳೂರು, ನ.05: ರಾಷ್ಟ್ರೀಕೃತ ಬ್ಯಾಂಕ್ ಕೆನರಾ ಬ್ಯಾಂಕ್ ತನ್ನ ಎರಡನೇ ತ್ರೈಮಾಸಿಕ ವರದಿಯನ್ನು ಪ್ರಕಟಿಸಿದ್ದು, ಶೇ 16ರಷ್ಟು ನಿವ್ವಳ ಲಾಭದಲ್ಲಿ ಇಳಿಕೆ ಕಂಡಿದೆ. ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ 528.86 ಕೋಟಿ ರು .ನಿವ್ವಳ ಲಾಭವನ್ನು ಗಳಿಸಿದೆ ಎಂದು ಕೆನರಾ ಬ್ಯಾಂಕ್ನ ನಿರ್ದೇಶಕ ರಾಕೇಶ್ಶರ್ಮಾ ತಿಳಿಸಿದ್ದಾರೆ.
ಕಳೆದ ವರ್ಷ ಇದೇ ಅವಧಿಯಲ್ಲಿ 626.84 ಕೋಟಿ ರು ಲಾಭ ಗಳಿಸಿತ್ತು. ನಿವ್ವಳ ಆದಾಯ ವ್ಯತ್ಯಾಸದಲ್ಲಿ ಶೇ 11.7ರಷ್ಟು ಏರಿಕೆ ಕಂಡು 2,646 ಕೋಟಿ ರು ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2,367 ಕೋಟಿ ರು ಗಳಿಸಿತ್ತು. ನಿರ್ವಹಣಾ ಲಾಭ(Operating Profit) ವರ್ಷದಿಂದ ವರ್ಷಕ್ಕೆ ಶೇ.19.54 ರಷ್ಟು ಏರಿಕೆ ಕಂಡು 1,944 ಕೋಟಿ ರು ಬಂದಿದೆ.[ಮೊದಲ ತ್ರೈಮಾಸಿಕದಲ್ಲಿ ನಷ್ಟವೋ ನಷ್ಟ]
ಷೇರುಪೇಟೆಯಲ್ಲಿ : ಬುಧವಾರ ಬಿಎಸ್ ಇಯಲ್ಲಿ 274.30ರು ನಂತೆ ಶೇ 1.84ರಷ್ಟು ಕಳೆದುಕೊಂಡಿದ್ದ ಷೇರುಗಳು, ಗುರುವಾರ ಕೂಡಾ ಇಳಿಮುಖವಾಗಿವೆ. ಇಂಟ್ರಾಡೇನಲ್ಲಿ ಮಧ್ಯಾಹ್ನ 11.55 ರ ವೇಳೆಗೆ 269.90 ರು ನಂತೆ ಶೇ 1.60ರಷ್ಟು ಇಳಿದಿತ್ತು. ಎನ್ ಎಸ್ ಇನಲ್ಲಿ 269.85 ರು ನಂತೆ ಶೇ 1.26 ರಷ್ಟು ಇಳಿಕೆ ಕಂಡಿದೆ.

ಸೆಪ್ಟೆಂಬರ್ 2015ರ ಅಂತ್ಯಕ್ಕೆ ಒಟ್ಟು ಶಾಖೆಗಳ ಸಂಖ್ಯೆ 5,734 ಆಗಿದ್ದು, ಇದುವರೆಗೆ 2.88 ಕೋಟಿ ಡೆಬಿಟ್ ಕಾರ್ಡ್ಗಳನ್ನು ವಿತರಿಸಲಾಗಿದೆ. ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಯೋಜನೆ ಜಾರಿಗೊಳಿಸಿದ್ದಕ್ಕಾಗಿ ಕೇಂದ್ರ ಸರಕಾರ 2014ನೇ ಸಾಲಿನ ಅತ್ಯುತ್ತಮ ಬ್ಯಾಂಕ್ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ರಾಕೇಶ್ ಶರ್ಮಾ ತಿಳಿಸಿದರು. [ಬ್ಯಾಂಕಿಂದ ನಿರುದ್ಯೋಗಿಗಳಿಗೆ ಉಚಿತ ತರಬೇತಿ]
ಪ್ರಧಾನಿ ಮಂತ್ರಿ ಜನಧನ್ ಯೋಜನೆಯಲ್ಲಿ 70.59 ಲಕ್ಷ ಖಾತೆಗಳನ್ನು ತೆರೆಯಲಾಗಿದೆ. ಈ ಯೋಜನೆಯಲ್ಲಿ ತೆರೆಯಲಾದ ಉಳಿತಾಯ-ಚಾಲ್ತಿ ಖಾತೆಗಳಿಂದ ಒಟ್ಟುಗೂಡಿದ ಮೊತ್ತ 1,011 ಕೋಟಿ ರು ಆಗಿದೆ. ಇವರೆಗಿನ ಎಲ್ಲ ಖಾತೆದಾರರಿಗೆ ಡಿಬಿಟ್ ಕಾರ್ಡ್ ಗಳನ್ನು ವಿತರಿಸಲಾಗಿದೆ.
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮಾ ಯೋಜನೆಯಲ್ಲಿ 51.86 ಲಕ್ಷ ನೋಂದಣಿ, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಲ್ಲಿ 43.98 ಲಕ್ಷ ನೋಂದಣಿ ಮಾಡಲಾಗಿದೆ. ಅಟಲ್ ನಿವೃತ್ತಿ ಪಿಂಚಣಿ ಯೋಜನೆಯಡಿ 67,590 ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದರು.












Click it and Unblock the Notifications