ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯಕ್ಕೆ 2ನೇ ಸ್ಥಾನ, ಆದರೆ ಪರಿಹಾರ ಮಾತ್ರ ಸಿಕ್ಕಿಲ್ಲ
ಬೆಂಗಳೂರು, ಜನವರಿ 2: ಕೇಂದ್ರ ಹಣಕಾಸು ಸಚಿವಾಲಯವು ದೇಶದ ಒಟ್ಟಾರೆ ಆಂತರಿಕ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹದ ಡಿಸೆಂಬರ್ ತಿಂಗಳ ಪಟ್ಟಿಯನ್ನು ಪ್ರಕಟಿಸಿದೆ. ಇದರಲ್ಲಿ ಮಹಾರಾಷ್ಟ್ರದ ನಂತರದ ಸ್ಥಾನ ಕರ್ನಾಟಕದ್ದು. ಆದರೆ ರಾಜ್ಯ ಸರ್ಕಾರಕ್ಕೆ ಜಿಎಸ್ಟಿ ಪರಿಹಾರವಾಗಿ ಕೇಂದ್ರದಿಂದ ಬಿಡುಗಡೆಯಾಗಬೇಕಾದ ಹಣ ಇನ್ನೂ ಬಿಡುಗಡೆಯಾಗಿಲ್ಲ.
ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಕರ್ನಾಟಕಕ್ಕೆ ಸಿಗಬೇಕಿದ್ದ ಜಿಎಸ್ಟಿ ಪರಿಹಾರದ ಸುಮಾರು 3,300 ಕೋಟಿ ರೂ. ಹಣವು ಡಿ.31ರಂದು ಬಿಡುಗಡೆಯಾಗಬೇಕಿತ್ತು. ಇದು ಪುನಃ ವಿಳಂಬವಾಗಿದೆ. ಇದರಿಂದ ರಾಜ್ಯದ ಹಣಕಾಸು ಮತ್ತು ಆಯವ್ಯಯದ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ.
1 ಲಕ್ಷ ಕೋಟಿ ದಾಟಿದ ನವೆಂಬರ್ ತಿಂಗಳ GST ಸಂಗ್ರಹ
ಡಿಸೆಂಬರ್-ಜನವರಿಯ ಜಿಎಸ್ಟಿ ಪರಿಹಾರದ ಹಣವು ಈ ವರ್ಷದ ಮಾರ್ಚ್ ಅಂತ್ಯದೊಳಗೆ ರಾಜ್ಯಕ್ಕೆ ಲಭ್ಯವಾಗಬೇಕಿದೆ. ಆದರೆ ಸತತ ವಿಳಂಬದಿಂದಾಗಿ ಇದು ಕೂಡ ಮತ್ತಷ್ಟು ತಡವಾಗುವ ಸಾಧ್ಯತೆ ಇದೆ. ಹೀಗಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗುವ ಅಪಾಯ ಎದುರಾಗಿದೆ. ರಾಜ್ಯ ಮತ್ತು ಕೇಂದ್ರದ ನಡುವಿನ ಸಂವಹನದ ಕೊರತೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಂಗ್ರಹ
ಜಿಎಸ್ಟಿ ಸಂಗ್ರಹದಲ್ಲಿ ರಾಜ್ಯವಾರು ಪಟ್ಟಿಯಲ್ಲಿ ನೆರೆಯ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 2019ರ ಡಿಸೆಂಬರ್ನಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 2018ರ ಡಿಸೆಂಬರ್ನಲ್ಲಿ 13,524 ಕೋಟಿ ರೂ. ಸಂಗ್ರಹಿಸಿದ್ದ ಮಹಾರಾಷ್ಟ್ರ, ಕಳೆದ ವರ್ಷದ ಡಿಸೆಂಬರ್ನಲ್ಲಿ ಶೇ 22ರಷ್ಟು ಹೆಚ್ಚು ಪ್ರಗತಿ ಸಾಧಿಸಿ, 16,530 ಕೋಟಿ ರೂ ಜಿಎಸ್ಟಿ ಸಂಗ್ರಹಿಸಿದೆ.

6,886 ಕೋಟಿ ರೂ. ಜಿಎಸ್ಟಿ ಸಂಗ್ರಹ
ಕರ್ನಾಟಕವು ಈ ಪಟ್ಟಿಯಲ್ಲಿ ಎರಡನೆಯ ಸ್ಥಾನದಲ್ಲಿದೆ. 2019ರ ಡಿಸೆಂಬರ್ನಲ್ಲಿ ರಾಜ್ಯವು 6,886 ಕೋಟಿ ರೂ. ಜಿಎಸ್ಟಿ ಸಂಗ್ರಹಿಸಿದೆ. 2018ರ ಡಿಸೆಂಬರ್ನಲ್ಲಿ 6,209 ಕೋಟಿ ರೂ. ಸಂಗ್ರಹಿಸಿತ್ತು. ಒಂದು ವರ್ಷದಲ್ಲಿ ರಾಜ್ಯದ ಜಿಎಸ್ಟಿ ಸಂಗ್ರಹ ಸಾಮರ್ಥ್ಯ ಶೇ 11ರಷ್ಟು ಹೆಚ್ಚಾಗಿದೆ. ಕರ್ನಾಟಕಕ್ಕೆ ಪೈಪೋಟಿ ನೀಡಿರುವ ಗುಜರಾತ್, 6,621 ಕೋಟಿ ರೂ ಸಂಗ್ರಹಿಸಿದೆ. ತಮಿಳುನಾಡು 6,422 ಕೋಟಿ ರೂ. ಸಂಗ್ರಹ ಮಾಡಿದೆ.
9 ರಾಜ್ಯಗಳಿಗೆ ಜಿಎಸ್ಟಿ ಪರಿಹಾರ 70,000 ಕೋಟಿ ರುಪಾಯಿ

80,849 ಕೋಟಿ ರೂ. ಸಂಗ್ರಹ
2018ರ ಡಿಸೆಂಬರ್ಗೆ ಹೋಲಿಸಿದರೆ ಇಡೀ ದೇಶದಲ್ಲಿ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಒಳಗೊಂಡಂತೆ 37 ರಾಜ್ಯಗಳಿಂದ ಸಂಗ್ರಹವಾದ ಒಟ್ಟು ಜಿಎಸ್ಟಿ ಮೊತ್ತದಲ್ಲಿ ಕಳೆದ ವರ್ಷ ಶೇ 16ರಷ್ಟು ಹೆಚ್ಚಳವಾಗಿದೆ. 2018ರಲ್ಲಿ 69,983 ಕೋಟಿ ರೂ. ಜಿಎಸ್ಟಿ ಸಂಗ್ರಹವಾಗಿತ್ತು. 2019ರ ಡಿಸೆಂಬರ್ನಲ್ಲಿ 80,849 ಕೋಟಿ ರೂ. ಸಂಗ್ರಹವಾಗಿದೆ.

ಸಿಗುತ್ತಿರುವುದು ಸ್ವೀಕೃತಿ ಪತ್ರ ಮಾತ್ರ
ಆದರೆ ಜಿಎಸ್ಟಿ ಸಂಗ್ರಹಕ್ಕೆ ಅನುಗುಣವಾಗಿ ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಬರಬೇಕಾದ ಪಾಲು ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಬಾಕಿ ಉಳಿದಿರುವ ಹಣವನ್ನು ಬಿಡುಗಡೆ ಮಾಡುವಂತೆ ಕೋರಿ ರಾಜ್ಯದಿಂದ ಪತ್ರ ಬರೆದರೆ, ಅದಕ್ಕೆ ಪ್ರತಿಯಾಗಿ ಸಿಗುತ್ತಿರುವುದು ಸ್ವೀಕೃತಿ ಪತ್ರ ಮಾತ್ರ. ಹಣ ಬಿಡುಗಡೆ ಏಕೆ ವಿಳಂಬವಾಗುತ್ತಿದೆ ಎಂಬ ಸ್ಪಷ್ಟೀಕರಣ ಅಥವಾ ಉತ್ತರ ಸಿಕ್ಕಿಲ್ಲ. ಹಾಗೆಯೇ ಹಣ ಬರುತ್ತದೆ ಎಂದು ನಿರೀಕ್ಷಿಸಬಹುದೇ ಎಂಬ ಬಗ್ಗೆಯೂ ಭರವಸೆ ಸಿಕ್ಕಿಲ್ಲ.
ಪ್ರತಿತಿಂಗಳು 1.10 ಲಕ್ಷ ಕೋಟಿ ಜಿಎಸ್ಟಿ ಸಂಗ್ರಹಿಸಲು ಟಾರ್ಗೆಟ್

ಮಾರ್ಚ್ನಲ್ಲಿ ರಾಜ್ಯ ಬಜೆಟ್ ಮಂಡನೆ
ರಾಜ್ಯ ಸರ್ಕಾರವು ಮಾರ್ಚ್ 5ರಂದು 2020-21ನೇ ಸಾಲಿನ ಹಣಕಾಸು ಬಜೆಟ್ ಮಂಡನೆಗೆ ಉದ್ದೇಶಿಸಿದೆ. ಇದಕ್ಕೆ ಅಗತ್ಯವಿರುವ ಹಣಕಾಸು ರಾಜ್ಯದ ಪಾಲಿನ ಜಿಎಸ್ಟಿಯ ಹಣದಿಂದ ಬರಬೇಕಿದೆ. ಡಿಸೆಂಬರ್ನಲ್ಲಿ ಜಿಎಸ್ಟಿ ಮೊತ್ತದಲ್ಲಿ ಕೇಂದ್ರದ ಪಾಲು (ಸಿಜಿಎಸ್ಟಿ) 19,962 ಕೋಟಿ ಇದ್ದರೆ, ರಾಜ್ಯದ ಪಾಲು (ಎಸ್ಜಿಎಸ್ಟಿ) 26,792 ರೂ. ಇತ್ತು. ಉಳಿದಿದ್ದು ಐಜಿಎಸ್ಟಿ ಮತ್ತು ಸೆಸ್ ಮೊತ್ತವಾಗಿತ್ತು. 2019ರ ನವೆಂಬರ್ನಲ್ಲಿ ಜಿಎಸ್ಟಿ ಸಂಗ್ರಹವು 1,03,492 ಕೋಟಿ ರೂ ಇತ್ತು. ಇದರಲ್ಲಿ 19592 ಕೋಟಿ ರೂ. ಸಿಜಿಎಸ್ಟಿ ಹಾಗೂ 27,144 ಕೋಟಿ ರೂ. ಎಸ್ಜಿಎಸ್ಟಿ ಇತ್ತು. ಕರ್ನಾಟಕ ಮಾತ್ರವಲ್ಲದೆ ಇತರೆ ದೇಶಗಳಿಗೂ ಬರಬೇಕಿರುವ ಜಿಎಸ್ಟಿ ಪಾಲಿನ ಹಣ ಬಿಡುಗಡೆಯಾಗಿಲ್ಲ. ಈ ವಿಳಂಬದ ಬಗ್ಗೆ ಕೇಂದ್ರದಿಂದ ಯಾವ ಉತ್ತರವೂ ಸಿಗುತ್ತಿಲ್ಲ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ಹೇಳುತ್ತಾರೆ.











Click it and Unblock the Notifications