ಜಿಎಸ್ ಟಿ ಅಡಿ ಪೆಟ್ರೋಲಿಯಂ ಉತ್ಪನ್ನ ತರಲು ಸರಕಾರ ಒಪ್ಪಲ್ಲ ಏಕೆ?
ಬೆಂಗಳೂರು, ಸೆಪ್ಟೆಂಬರ್ 19: ಪೆಟ್ರೋಲ್- ಡೀಸೆಲ್ ಜಿಎಸ್ ಟಿ ಅಡಿಯಲ್ಲಿ ಬರಬಹುದು ಎಂಬ ಯಾವ ನಿರೀಕ್ಷೆ ಇಟ್ಟುಕೊಳ್ಳುವುದು ಸಾಧ್ಯವಿಲ್ಲ. ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರೇನೋ ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್-ಡೀಸೆಲ್ ಬರಬೇಕು ಅನ್ನುತ್ತಿದ್ದಾರೆ. ಆದರೆ ಅಂಥ ಯಾವ ಬೇಡಿಕೆಯನ್ನೂ ಕೇಂದ್ರವಾಗಲಿ ಅಥವಾ ರಾಜ್ಯವಾಗಲಿ ಪರಿಗಣಿಸುವ ಸಾಧ್ಯತೆ ಇಲ್ಲ.
ಜಿಎಸ್ ಟಿ ಅಡಿಯಲ್ಲಿ ಪೆಟ್ರೋಲ್ ಬಂದರೆ ಲೀಟರ್ ಗೆ ಬರೀ 38 ರುಪಾಯಿ
ಒಂದು ವೇಳೆ ಜಿಎಸ್ ಟಿ ಅನ್ವಯಿಸಿದರೆ ಏನಾಗುತ್ತದೆ ಅಂತೀರಾ? ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಶೇ 50ರಷ್ಟು ಕಡಿಮೆಯಾಗುತ್ತದೆ. ಉದಾಹರಣೆಗೆ ಸೋಮವಾರದ ಪೆಟ್ರೋಲ್ ಬೆಲೆ 71.62 ಇತ್ತು. ಒಂದು ವೇಳೆ ಜಿಎಸ್ ಟಿ ಅಡಿಯಲ್ಲಿ ತಂದು ಶೇ 28 ರಷ್ಟು ತೆರಿಗೆ ಹಾಕಿದರೂ ಪೆಟ್ರೋಲ್ ಬೆಲೆ ಲೀಟರ್ ಗೆ ರು. 44.04 ಆಗುತ್ತದೆ. ಇನ್ನು ಶೇ 12ರ ದರದಲ್ಲಿ ಹಾಕಿದರೆ ಲೀಟರ್ ಗೆ ರು.38.49 ಆಗುತ್ತದೆ.
ಈ ವಿಚಾರದಲ್ಲಿ ಅಂದರೆ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಕೆಳಗೆ ತರುವುದಕ್ಕೆ ಯಾವುದೇ ಕಾನೂನು ತೊಡಕುಗಳಿಲ್ಲ. ಜಿಎಸ್ ಟಿ ಕೌನ್ಸಿಲ್ ಅದನ್ನು ಈಗಾಗಲೇ ಹೊಸ ತೆರಿಗೆ ಅಡಿಗೆ ತಂದಿದ್ದಾರೆ. ಆದರೆ ಆ ರೀತಿ ತೆರಿಗೆ ವಿಧಿಸುವುದನ್ನು ಮುಂದೂಡಲಾಗಿದೆ. ಜತೆಗೆ ಕರ್ನಾಟಕ ಸರಕಾರಕ್ಕೆ ಅದು ಬೇಕಿಲ್ಲ. ಏಕೆಂದರೆ ಹೀಗೆ ಮಾಡುವುದರಿಂದ ತಿಂಗಳಿಗೆ ಸಾವಿರ ಕೋಟಿ ಆದಾಯ ತೈಲಕ್ಕೆ ವಿಧಿಸುವ ತೆರಿಗೆಯಿಂದ ಬರುತ್ತಿದೆ.
ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ
ಇದು ನಿಮಗೆ ಗೊತ್ತಿರಲಿ, ಪೆಟ್ರೋಲ್ ಗೆ ಶೇ 97.54ರಷ್ಟು ತೆರಿಗೆ ಹಾಕಲಾಗುತ್ತಿದೆ. ಅದರಲ್ಲಿ ಶೇ 67.54ರಷ್ಟು ಕೇಂದ್ರ ಅಬಕಾರಿ ಸುಂಕ ಮತ್ತು ಶೇ 30ರಷ್ಟು ರಾಜ್ಯ ಮಾರಾಟ ತೆರಿಗೆ (ಕರ್ನಾಟಕದಲ್ಲಿ ಇಷ್ಟು) ಬೀಳುತ್ತಿದೆ. ಒಂದು ವೇಳೆ ಪೆಟ್ರೋಲ್- ಡೀಸೆಲ್ ಅನ್ನು ಜಿಎಸ್ ಟಿ ಕೆಳಗೆ ತಂದುಬಿಟ್ಟರೆ ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಇದರಿಂದ ಬರುತ್ತಿರುವ ಆದಾಯ ಶೇ 50ರಷ್ಟು ಕುಸಿದು ಹೋಗುತ್ತದೆ.
ಜಿಎಸ್ ಟಿ ಅಡಿಯಲ್ಲಿ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಪ್ರವೇಶ ತೆರಿಗೆ ತೆಗೆದಿರುವುದರಿಂದ ಕರ್ನಾಟಕ ಸರಕಾರಕ್ಕೆ ಬರಬೇಕಾದ 200 ಕೋಟಿ ಆದಾಯ ತಪ್ಪಿದೆ.
ಜಿಎಸ್ ಟಿ ಕೌನ್ಸಿಲ್ ಗೆ ಪತ್ರ
ಪೆಟ್ರೋಲ್-ಡೀಸೆಲ್ ಅನ್ನು ಜಿಎಸ್ ಟಿ ಅಡಿ ತರಬೇಕು ಎಂದು ಕೇಂದ್ರ ಸಚಿವ ಪ್ರಧಾನ್ ಅವರು ಹೇಳಿರುವುದು ಸರಿಯಿದೆ. ಇದರಿಂದ ಗ್ರಾಹಕರಿಗೆ ಅನುಕೂಲವಾಗುತ್ತದೆ. ನಾವು ಕೂಡ ಈ ಬಗ್ಗೆ ಕೇಂದ್ರ ಹಣಕಾಸು ಸಚಿವಾಲಯ ಹಾಗೂ ಜಿಎಸ್ ಟಿ ಕೌನ್ಸಿಲ್ ಗೆ ಪತ್ರ ಬರೆದಿದ್ದೇವೆ.
ಆದರೆ, ರಾಜ್ಯ ಹಾಗೂ ಕೇಂದ್ರಕ್ಕೆ ಹೀಗಾಗುವುದು ಬೇಡ. ಪೆಟ್ರೋಲಿಯಂ ಉತ್ಪನ್ನಗಳಿಂದ ಬರುತ್ತಿರುವ ಆದಾಯ ಕಳೆದುಕೊಳ್ಳಲು ಇಷ್ಟಪಡಲ್ಲ ಎಂದು ಆಲ್ ಇಂಡಿಯಾ ಪೆಟ್ರೋಲಿಯಂ ಡೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಎಂ.ಪ್ರಭಾಕರ್ ರೆಡ್ಡಿ ಹೇಳಿದ್ದಾರೆ.
ಫಲಿತಾಂಶವನ್ನು ನೀಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ
ಆದಾಯದ ಮೂಲ ಬಹಳ ಮುಖ್ಯ. ಹೊಸ ತೆರಿಗೆ ಪದ್ಧತಿ ಫಲಿತಾಂಶವನ್ನು ನೀಡುವುದಕ್ಕೆ ಸಮಯ ತೆಗೆದುಕೊಳ್ಳುತ್ತದೆ. ಈ ಹಂತದಲ್ಲಿ ರಾಜ್ಯ ಸರಕಾರವಾಗಲಿ ಅಥವಾ ಕೇಂದ್ರ್ ಸರಕಾರವಾಗಲಿ ಈ ವಿಚಾರವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎನ್ನುತ್ತಾರೆ ವಾಣಿಜ್ಯ ತೆರಿಗೆ ಆಯುಕ್ತರಾದ ರಿತ್ವಿಕ್ ರಂಜನಂ ಪಾಂಡೆ.
ಶೇ 73ರಷ್ಟು ಮಂದಿ ಮಾತ್ರ ಜುಲೈನಲ್ಲಿ ತೆರಿಗೆ ಪಾವತಿ
ಜಿಎಸ್ ಟಿ ಅಡಿಯಲ್ಲಿ ನೋಂದಣಿ ಮಾಡಿಸಿದ 4.6 ಲಕ್ಷ ವ್ಯಾಪಾರಿಗಳು- ವರ್ತಕರ ಪೈಕಿ ಶೇ 73ರಷ್ಟು ಮಂದಿ ಮಾತ್ರ ಜುಲೈನಲ್ಲಿ ತೆರಿಗೆ ಪಾವತಿಸಿದ್ದಾರೆ. ಜಿಎಸ್ ಟಿಎನ್ ಪೋರ್ಟಲ್ ನಲ್ಲಿನ ಸಮಸ್ಯೆಯಿಂದಾಗಿ ಹೀಗಾಗಿದೆ. ಈ ಬುಧವಾರದಂದು ಆಗಸ್ಟ್ ತಿಂಗಳ ತೆರಿಗೆ ಪಾವತಿಸುವುದಕ್ಕೆ ಕೊನೆ ದಿನ. ಈ ತಿಂಗಳ ಪ್ರಮಾಣ ಇನ್ನೂ ಕಡಿಮೆ ಆಗಬಹುದು. ಏಕೆಂದರೆ ಇನ್ನೂ ತಾಂತ್ರಿಕ ಸಮಸ್ಯೆ ನಿವಾರಣೆಯಾಗಿಲ್ಲ. ಪೋರ್ಟಲ್ ಮೇಲಿನ ಒತ್ತಡ ಹೆಚ್ಚಾಗಿದೆ.
ರಾಜ್ಯಗಳು ಇನ್ನೂ ಸಿದ್ಧವಾಗಿಲ್ಲ
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್ ಟಿ ಅಡಿ ತರುವುದಕ್ಕೆ ರಾಜ್ಯಗಳು ಇನ್ನೂ ಸಿದ್ಧವಾಗಿಲ್ಲ ಎಂದಿದ್ದಾರೆ ತೆಲಂಗಾಣ ಸರಕಾರದ ಆರ್ಥಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಕೆ.ರಾಮಕೃಷ್ಣ ರಾವ್. ಅಲ್ಲಿ ಜುಲೈ ತಿಂಗಳಲ್ಲಿ ಜಿಎಸ್ ಟಿ ಸಂಗ್ರಹದಲ್ಲಿ 300 ಕೋಟಿ ಕೊರತೆಯಾಗಿದೆ.