ರಿಲಯನ್ಸ್ ನಿರ್ದೇಶಕ ಸ್ಥಾನಕ್ಕೆ ಅನಿಲ್ ಅಂಬಾನಿ ರಾಜೀನಾಮೆ
ನವದೆಹಲಿ, ನವೆಂಬರ್ 16: ರಿಲಯನ್ಸ್ ಕಮ್ಯುನಿಕೇಷನ್ಸ್ನ ಅಧ್ಯಕ್ಷ ಅನಿಲ್ ಅಂಬಾನಿ ಅದರ ನಿರ್ದೇಶಕ ಸ್ಥಾನದಿಂದ ಕೆಳಗಿಳಿದಿದ್ದಾರೆ. ಅವರೊಂದಿಗೆ ಇನ್ನೂ ನಾಲ್ವರು ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಛಾಯಾ ವಿರಾಣಿ, ರೀನಾ ಕರಾನಿ, ಮಂಜರಿ ಕಕ್ಕರ್ ಮತ್ತು ಸುರೇಶ್ ರಾಘವಾಚಾರ್ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ರಿಲಯನ್ಸ್ ಕಮ್ಯುನಿಕೇಷನ್ಸ್ನ ಹೇಳಿಕೆ ತಿಳಿಸಿದೆ.
ಸುರೇಶ್ ರಾಘವಾಚಾರ್ ಅವರು ನ.13ರಂದೇ ರಾಜೀನಾಮೆ ನೀಡಿದ್ದರು. ರೀನಾ ಕರಾನಿ ನ.14ರಂದು ರಾಜೀನಾಮೆ ಕೊಟ್ಟಿದ್ದರೆ, ಅನಿಲ್ ಅಂಬಾನಿ ಹಾಗೂ ಇನ್ನಿಬ್ಬರು ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಇದಕ್ಕೂ ಮೊದಲು ಮಣಿಕಂಠನ್ ವಿ ಅವರು ಕಂಪೆನಿಯ ನಿರ್ದೇಶಕ ಸ್ಥಾನ ಹಾಗೂ ಮುಖ್ಯ ಹಣಕಾಸು ಅಧಿಕಾರಿ ಸ್ಥಾನವನ್ನು ಅ.4ರಂದು ತ್ಯಜಿಸಿದ್ದರು.

ನಷ್ಟದಲ್ಲಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ದಿವಾಳಿ ಗೊತ್ತುವಳಿ ಪ್ರಕ್ರಿಯೆಗೆ (ಸಿಐಆರ್ಪಿ) ಒಳಗಾಗಿದ್ದು, ಮಣಿಕಂಠನ್ ಅವರ ರಾಜೀನಾಮೆ ಮತ್ತು ಡಿ. ವಿಶ್ವನಾಥ್ ಅವರನ್ನು ಕಾರ್ಯಕಾರಿ ನಿರ್ದೇಶಕ ಹಾಗೂ ಸಿಎಫ್ಓಆಗಿ ನೇಮಕ ಮಾಡಿರುವುದನ್ನು ಕಮಿಟಿ ಆಫ್ ಕ್ರೆಡಿಟರ್ಸ್ (ಸಿಒಸಿ) ಅನುಮೋದನೆಗೆ ಕಳುಹಿಸಲಾಗಿದೆ. ಸಿಒಸಿ ಒಪ್ಪಿಗೆ ಬಳಿಕ ಮುಂದಿನ ಮಾಹಿತಿಗಳನ್ನು ಷೇರು ಪೇಟೆಗೆ ಒದಗಿಸಲಾಗುತ್ತದೆ ಎಂದು ಕಂಪೆನಿ ತಿಳಿಸಿದೆ.
ನ.15ರಂದು ತನ್ನ 2020ರ ಹಣಕಾಸು ವರ್ಷದ ಎರಡನೇ ತ್ರೈಮಾಸಿಕ ವರದಿ ನೀಡಿದ್ದ ರಿಲಯನ್ಸ್ ಕಮ್ಯುನಿಕೇಷನ್ಸ್, 30,158 ಒಟ್ಟು ನಷ್ಟದ ಮಾಹಿತಿ ನೀಡಿದೆ. ಮೊದಲ ತ್ರೈಮಾಸಿಕ ಅವಧಿಯಲ್ಲಿ 366 ಕೋಟಿ ನಷ್ಟವನ್ನು ಅದು ತೋರಿಸಿತ್ತು.












Click it and Unblock the Notifications