ಬ್ಯಾಂಕ್ ಖಾತೆ ತೆರೆಯಲು ರೇಷನ್ ಕಾರ್ಡ್ ಬಳಸುವಂತಿಲ್ಲ
ಬೆಂಗಳೂರು, ಜು. 23 : ಬ್ಯಾಂಕುಗಳಲ್ಲಿ ಖಾತೆಗಳನ್ನು ತೆರೆಯಲು ಇನ್ನು ಮುಂದೆ ಪಡಿತರ ಚೀಟಿಯನ್ನು ನೀಡುವಂತಿಲ್ಲ. ಇಡೀ ದೇಶದಲ್ಲಿ ಖಾತೆ ತೆರೆಯಲು ಆಧಾರ್ ಕಾರ್ಡ್ ಗಳನ್ನು ಪ್ರಮುಖವಾದ ದಾಖಲೆಯಾಗಿ ಗ್ರಾಹಕರು ನೀಡಬೇಕಾಗುತ್ತದೆ. ಈ ಕುರಿತು ಆರ್ ಬಿಐ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ.
ಬ್ಯಾಂಕ್ ಖಾತೆ ತೆರೆಯುವ ಕುರಿತು ಆರ್ ಬಿಐ ಜು.17ರಂದು ಸುತ್ತೋಲೆ ಹೊರಡಿಸಿದ್ದು, ಆಧಾರ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ಬಳಸಬಹುದಾಗಿದೆ ಎಂದು ಹೇಳಿದೆ. ಉಳಿದಂತೆ ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ನರೇಗಾ ಕಾರ್ಡ್ ಅನ್ನು ಬಳಿಸಿ ಖಾತೆ ತೆರೆಯಬಹುದಾಗಿದೆ.

ಆದ್ದರಿಂದ ಇನ್ನು ಮುಂದೆ ರಾಜ್ಯ ಸರ್ಕಾರ ನೀಡುವ ಪಡಿತರ ಚೀಟಿ ನೀಡಿ ಬ್ಯಾಂಕ್ ಖಾತೆಯನ್ನು ತೆರೆಯುವಂತಿಲ್ಲ. ಕೇಂದ್ರ ಸರ್ಕಾರದ ನೀಡಿರುವ ಗುರುತಿನ ಚೀಟಿಯನ್ನು ನೀಡಿ ಬ್ಯಾಂಕ್ ಖಾತೆ ತೆರಯಬಹುದಾಗಿದೆ. ಆದ್ದರಿಂದ ಮುಂದೆ ಬ್ಯಾಂಕ್ ಗಳು ಸಹ ಪಡಿತರ ಚೀಟಿಯನ್ನು ವಿಳಾಸ ಧೃಡೀಕರಣಕ್ಕಾಗಿ ಬಳಸಿಕೊಳ್ಳುವಂತಿಲ್ಲ. [ಆಧಾರ್ ಯೋಜನೆ ರದ್ದಾಗೋಲ್ಲ]
ಆಧಾರ್ ಕಾರ್ಡ್ ಇಲ್ಲದ ಜನರು ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್, ಪಾಸ್ ಪೋರ್ಟ್, ನರೇಗಾ ಕಾರ್ಡ್ ಗಳನ್ನು ಬಳಸಿಕೊಂಡು ಖಾತೆ ತೆರೆಯಬಹುದಾಗಿದೆ. ಆದರೆ, ಇಡೀ ದೇಶದಲ್ಲಿ ಎಲ್ಲೇ ಬ್ಯಾಂಕ್ ಖಾತೆ ತೆರೆಯಬೇಕಾದರೆ, ಆಧಾರ್ ಕಾರ್ಡ್ ಇದ್ದರೆ ಸಾಕಾಗುತ್ತದೆ.
ಆಧಾರ್ ರದ್ದಾಗೋಲ್ಲ : ಯುಪಿಎ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಪತ್ರ ಯೋಜನೆ(UIDAI)ಯನ್ನು ರದ್ದುಗೊಳಿಸುವುದಿಲ್ಲ ಎಂದು ಹೊಸ ಸರ್ಕಾರ ಈಗಾಗಲೇ ಭರವಸೆ ನೀಡಿದೆ. ಲೋಕಸಭೆಯಲ್ಲಿ ಈ ವಿಷಯದ ಕುರಿತು ಲಿಖಿತ ಉತ್ತರ ನೀಡಿರುವ ಯೋಜನಾ ಸಚಿವ ರಾವ್ ಇಂದ್ರಜಿತ್ ಸಿಂಗ್ ಅವರು, ಯೋಜನೆಯನ್ನು ರದ್ದುಗೊಳಿಸಬೇಕೆಂಬ ಯಾವುದೇ ಪ್ರಸ್ತಾವನೆ ಸರ್ಕಾರದ ಪರಿಶೀಲನೆಯಲ್ಲಿ ಇಲ್ಲ ಎಂದು ತಿಳಿಸಿದ್ದಾರೆ.












Click it and Unblock the Notifications