ಬೀದರ್: ಕೋವಿಡ್ ಸೋಂಕಿನಿಂದ ಗೆದ್ದು ನಗೆ ಬೀರಿದ ಶತಾಯುಷಿ
ಬೀದರ್, ಮೇ 25: ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಶತಾಯುಷಿ ಶಿವಲಿಂಗಪ್ಪ ಮಲಶೆಟ್ಟೆಪ್ಪ (101) ಅವರ ಮನೋಬಲವು ಈಗ ಅಕ್ಷರಶಃ ಎಲ್ಲರಿಗೂ ಮಾದರಿಯಾಗಿದೆ.
ಮೇ 15ರಂದು ಕೋವಿಡ್ ಸೋಂಕಿತರಾಗಿ ಭಾಲ್ಕಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದ ಶಿವಲಿಂಗಪ್ಪ, ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಸೋಮವಾರ ಬಿಡುಗಡೆಯಾಗಿದ್ದಾರೆ.
ಭಾಲ್ಕಿ ತಾಲೂಕು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಅಬ್ದುಲ್ ಖಾದರ್, ಶಿವಲಿಂಗಪ್ಪರ ಬಿಡುಗಡೆಗೆ ವ್ಯವಸ್ಥೆ ಕಲ್ಪಿಸಿದರು. ಕೋವಿಡ್ ಪಾಸಿಟಿವ್ ಎಂದಾಕ್ಷಣವೇ ಕೆಲವರು ಭಯಭೀತರಾಗುತ್ತಾರೆ. ಆದರೆ, ಇಳಿವಯಸ್ಸಿನ ಶಿವಲಿಂಗಪ್ಪ ಅವರು, ತಮಗೆ ಕೊವಿಡ್ ಬಂದಿದೆ ಎಂದು ಗೊತ್ತಾದರೂ ಅದನ್ನು ಧೈರ್ಯದಿಂದ ಎದುರಿಸಿ, ಸಕಾಲಕ್ಕೆ ಚಿಕಿತ್ಸೆ ಪಡೆದು, ಕೋವಿಡ್ನಿಂದ ಗುಣಮುಖರಾದ ಶತಾಯುಷಿ ವ್ಯಕ್ತಿ ಎಂದೇ ಗಮನ ಸೆಳೆದಿದ್ದಾರೆ.

ವೈದ್ಯರ ಶ್ರಮಕ್ಕೆ ಜಿಲ್ಲಾಧಿಕಾರಿ ಮೆಚ್ಚುಗೆ
ಬೀದರ್ ಜಿಲ್ಲೆಯಲ್ಲಿ ಕಳೆದ ವಾರದಿಂದೀಚೆಗೆ ಬಹಳಷ್ಟು ಕೋವಿಡ್ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಶಿವಲಿಂಗಪ್ಪ ಅವರಂತಹ ಶತಾಯುಷಿಗಳು ಕೋವಿಡ್ದಿಂದ ಗುಣಮುಖರಾಗಿದ್ದು, ಕೋವಿಡ್ ಸೋಂಕಿತರಲ್ಲಿ ಆತ್ಮಸ್ಥೈರ್ಯ ತುಂಬುವಂತಹ ಪ್ರಕರಣವಾಗಿದೆ ಎಂದು ಬೀದರ್ ಜಿಲ್ಲಾಧಿಕಾರಿ ಹೇಳಿದ್ದಾರೆ.
Recommended Video
ಸಾರ್ವಜನಿಕರು ಕೊವಿಡ್ ಲಕ್ಷಣಗಳು ಕಂಡು ಬಂದಕೂಡಲೇ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಆಗ ವೈದ್ಯರಿಗೆ ಬೇಗನೇ ಚಿಕಿತ್ಸೆ ಆರಂಭಿಸಲು ಅನುಕೂಲವಾಗಲಿದೆ. ಬೇಗನೇ ಚಿಕಿತ್ಸೆ ಪಡೆದುಕೊಂಡರೆ ಎಂತದ್ದೇ ಕಾಯಿಲೆ ಇರಲಿ ಗುಣಮುಖರಾಗಲು ಸಾಧ್ಯವಿದೆ ಎಂಬುದಕ್ಕೆ ಭಾಲ್ಕಿ ತಾಲೂಕಿನ ಶಿವಲಿಂಗಪ್ಪ ಜೀವಂತ ಉದಾಹರಣೆಯಾಗಿದ್ದಾರೆ ಎಂದು ಇದೆ ವೇಳೆ ಭಾಲ್ಕಿ ತಾಲೂಕು ಸಾರ್ವಜನಿಕ ಆಸ್ಪತ್ರೆಯ ತಾಲೂಕು ಆರೋಗ್ಯಾಧಿಕಾರಿ ಡಾ.ಗ್ಯಾನೇಶ್ವರ ನೀರಗುಡೆ ತಿಳಿಸಿದ್ದಾರೆ.












Click it and Unblock the Notifications