ಕಾಂಗ್ರೆಸ್ಸಿನಲ್ಲಿ ಸರಣಿ ರಾಜೀನಾಮೆ, ಎಲ್ಲದ್ದಕ್ಕೂ ಓಕೆ ಎಂದ ರಾಹುಲ್
ಭೋಪಾಲ್, ಜೂನ್ 28: ಮಧ್ಯಪ್ರದೇಶದ ಉಸ್ತುವಾರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೀಪಕ್ ಬಬಾರಿಯಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ದೀಪಕ್ ರಾಜೀನಾಮೆ ಬೆನ್ನಲ್ಲೇ ದೇಶದ ಹಲವೆಡೆ ಕಾಂಗ್ರೆಸ್ ಉಸ್ತುವಾರಿ, ಪದಾಧಿಕಾರಿಗಳು, ಕಾರ್ಯದರ್ಶಿಗಳ ಸ್ಥಾನ ಮಾನ ಬದಲಾವಣೆಗೆ ಚಾಲನೆ ಸಿಕ್ಕಿದೆ.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರದಂದು ಮೊದಲಿಗೆ ದೀಪಕ್ ಅವರ ರಾಜೀನಾಮೆಗೆ ಸಮ್ಮತಿಸಿ ಸಹಿ ಹಾಕಿದ್ದಾರೆ. ಮೇ 25ರ ಬಳಿಕ ಅಧ್ಯಕ್ಷ ಪದವಿ ಬೇಡ ಎಂದಿರುವ ರಾಹುಲ್ ಅವರು ಇದೇ ಮೊದಲ ಬಾರಿಗೆ ತಮ್ಮ ಕಚೇರಿ ಕೆಲಸದಲ್ಲಿ ಮಗ್ನರಾಗಿದ್ದರು.
ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರನ್ನು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲಾಗಿದ್ದು, ಮೋಹನ್ ಮಾರ್ಕಂ ಅವರನ್ನು ಆ ಸ್ಥಾನದಲ್ಲಿ ಕೂರಿಸಲಾಗಿದೆ.

ರಾಜ್ಯಸಭಾ ಸಂಸದ ವಿವೇಕ್ ಟಂಕಾ ಅವರು ಕೂಡಾ ತಮ್ಮ ಕಾನೂನು ಸಮಿತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ದೇಶದ ಅನೇಕ ಪ್ರದೇಶ ಕಾಂಗ್ರೆಸ್ ಸಮಿತಿಗಳನ್ನು ಸಂಪೂರ್ಣ ಬದಲಾಯಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ಸಿಕ್ಕಿದೆ. ಕರ್ನಾಟಕದಲ್ಲೂ ಎಲ್ಲಾ ಸಮಿತಿಗಳನ್ನು ವಜಾಗೊಳಿಸಲಾಗಿದ್ದು, ಹೊಸದಾಗಿ ನೇಮಕಾತಿ ನಡೆಯಬೇಕಿದೆ.
ಮೇ 23ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರ ಬಂದ ಬಳಿಕ ಕಾಂಗ್ರೆಸ್ ಹೀನಾಯ ಸೋಲು ಕಂಡಿದ್ದರಿಂದ ರಾಹುಲ್ ಗಾಂಧಿ ನೊಂದಿದ್ದರು. ಮೇ 25ರಂದು ಕರೆಯಲಾಗಿದ್ದ ಕಾಂಗ್ರೆಸ್ ಕಾರ್ಯಕಾರಿ ಸಭೆಯಲ್ಲಿ ತಮ್ಮ ನಿರ್ಧಾರವನ್ನು ಅವರು ಪ್ರಕಟಿಸಿದ್ದರೂ, ಸಭೆ ಒಪ್ಪಿರಲಿಲ್ಲ. ಅಲ್ಲದೆ, ಇಡೀ ದೇಶದಾದ್ಯಂತ ಎಲ್ಲ ಹಂತಗಳಲ್ಲಿಯೂ ಬದಲಾವಣೆಗಳನ್ನು ಜಾರಿಗೆ ತರುವಂತೆ ಅವರನ್ನು ಕೋರಿದ್ದರು. ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಅಧ್ಯಕ್ಷ ಸ್ಥಾನ ಪಡೆಯುವುದಿಲ್ಲ.ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಈ ರೇಸಿನಿಂದ ಹೊರಗಿಡುವಂತೆ ರಾಹುಲ್ ಗಾಂಧಿ ಸೂಚಿಸಿದ್ದರು.












Click it and Unblock the Notifications