ನೆರೆ ಸಂತ್ರಸ್ತರ ನೆರವಿಗೆ ದೇಣಿಗೆ ನೀಡಿ: ಜನತೆಗೆ ಯಡಿಯೂರಪ್ಪ ಮನವಿ
ಬೆಂಗಳೂರು, ಅಕ್ಟೋಬರ್ 23: ರಾಜ್ಯದಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿಯಿಂದ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ನೆರವಿನ ಹಸ್ತ ಚಾಚುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಪತ್ರ ಬರೆದಿರುವ ಯಡಿಯೂರಪ್ಪ, ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಚೆಕ್ ಅಥವಾ ಡಿಡಿ ಮೂಲಕವಲ್ಲದೆ, ವೆಬ್ಸೈಟ್, ಪೇಟಿಎಂ, ಗೂಗಲ್ ಪೇ ಮತ್ತಿತರ ಸೌಲಭ್ಯಗಳ ಮೂಲಕ ಕೂಡ ನೆರವು ನೀಡಬಹುದು ಎಂದು ಹೇಳಿದ್ದಾರೆ.
ಪರಿಹಾರ ಕಾರ್ಯಗಳಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿ ನೆರೆ ಸಂತ್ರಸ್ತರಿಗೆ ನೆರವಾಗಲು ಮತ್ತು ಬದುಕನ್ನು ಕಟ್ಟಿಕೊಳ್ಳಲು ಸ್ವಪ್ರೇರಣೆಯಿಂದ ದೇಣಿಗೆ ನೀಡಬೇಕೆಂದು ಮನವಿ ಮಾಡುತ್ತೇನೆ. ಈ ದೇಣಿಗೆಯನ್ನು ಜೀವ ಸಂಕುಲದ ಉಳುವಿಗೆ ತಮ್ಮ ಸೇವೆಯೆಂದು ಪರಿಗಣಿಸಲಾಗುವುದು ಎಂದು ತಿಳಿಸಿದ್ದಾರೆ.

ಅಪಾರ ಆಸ್ತಿ-ಪಾಸ್ತಿ ಹಾನಿ
ಕರ್ನಾಟಕ ರಾಜ್ಯದ ಬೆಳಗಾವಿ, ಉತ್ತರ ಕರ್ನಾಟಕ, ಕೊಡಗು ಜಿಲ್ಲೆಗಳನ್ನು ಒಳಗೊಂಡಂತೆ, ಹದಿನೈದು ಹದಿನೈದು ಜಿಲ್ಲೆಗಳಲ್ಲಿ ಇತಿಹಾಸದಲ್ಲಿ ಕಂಡುಕೇಳರಿಯದ ಅತಿವೃಷ್ಟಿ ಸಂಭವಿಸಿ ಜನತೆಯನ್ನು ಸಂಕಷ್ಟಕ್ಕೀಡು ಮಾಡಿದ್ದಲ್ಲದೆ, ಅಪಾರ ಆಸ್ತಿ-ಪಾಸ್ತಿಗೆ ನಷ್ಟವನ್ನುಂಟುಮಾಡಿದೆ. ಆಗಸ್ಟ್ 2019ರಲ್ಲಿ ಆರಂಭವಾದ ಈ ಸಂಕಷ್ಟದಲ್ಲಿ ನೊಂದ ಸಂತ್ರಸ್ತರಿಗೆ ಮಾನವೀಯ ನೆಲೆಗಟ್ಟಿನ ಮೇಲೆ ಅಸಂಖ್ಯಾತ ಸಹೃದಯ ಸಾರ್ವಜನಿಕ ಬಂಧುಗಳು ಸ್ಪಂದಿಸಿ ಸ್ವಪ್ರೇರಣೆಯಿಂದ ದೇಣಿಗೆ ನೀಡಿ, ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಕ್ರಮಗಳಿಗೆ ಸರ್ಕಾರದೊಂದಿಗೆ ಕೈಜೋಡಿಸಿರುವುದನ್ನು ಧನ್ಯತಾಭಾವದಿಂದ ಸ್ಮರಿಸಿದೆ ಎಂದು ಯಡಿಯೂರಪ್ಪ ಪತ್ರದಲ್ಲಿ ಹೇಳಿದ್ದಾರೆ.

ಗಾಯದ ಮೇಲೆ ಬರೆ ಎಳೆದ ಮಳೆ
ಗಾಯದ ಮೇಲೆ ಬರೆ ಎಳೆದಂತೆ ರಾಜ್ಯದಲ್ಲಿ ಮಳೆಯ ರುದ್ರ ನರ್ತನ ಮುಂದುವರಿದಿದೆ. ಹದಿಮೂರು ಜೀವಗಳನ್ನು ಬಲಿತೆಗೆದುಕೊಂಡಿದೆ. ನಮ್ಮ ಸಹೋದರ-ಸಹೋದರಿಯರು ಸರ್ವಸ್ವವನ್ನು ಕಳೆದುಕೊಂಡು ಕಂಗೆಟ್ಟಿರುವ ಇಂತಹ ಸಂಕಷ್ಟದ ಸಂದರ್ಭದಲ್ಲಿ ಅವರ ಜತೆ ನಾವು ನಿಂತು ಅವರ ನೆರವಿಗೆ ಬೇಕಾದ ಎಲ್ಲ ಪುನರ್ ವಸತಿ ಹಾಗೂ ಪುನರ್ ನಿರ್ಮಾಣ ಕ್ರಮಗಳನ್ನು ಕೈಗೊಳ್ಳಬೇಕಿರುವುದು ನಮ್ಮ ಜವಾಬ್ದಾರಿ ಎಂದಿದ್ದಾರೆ.

ದೇಣಿಗೆ ನೀಡುವುದು ಹೇಗೆ?
ಖಾತೆ ಹೆಸರು: Chief Minister Relief Fund Natural Calamity
ಬ್ಯಾಂಕ್ ಹೆಸರು: SBI (State Bank od India)
ಶಾಖೆ: ವಿಧಾನಸೌಧ ಶಾಖೆ
ಖಾತೆ ಸಂಖ್ಯೆ: 37887098605
ಚೆಕ್/ಡಿಡಿ ಕಳುಹಿಸಬೇಕಾದ ವಿಳಾಸ: ನಂ. 235-ಎ, 2ನೇ ಮಹಡಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆ, ವಿಧಾನಸೌಧ, ಬೆಂಗಳೂರು-560001
cmrf.karnataka.gov.in ವೆಬ್ಸೈಟ್ ಮೂಲಕ, ಪೇಟಿಎಂ, ಗೂಗಲ್ ಪೇ, ಅಮೇಜಾನ್ ಪೇ, ಫೋನ್ ಪೇ ಮತ್ತು ಕ್ಯೂ ಆರ್ ಕೋಡ್ ಮೂಲಕ ಸಹ ದೇಣಿಗೆ ನೀಡಲು ಅವಕಾಶವಿದೆ.

ಆದಾಯ ತೆರಿಗೆ ವಿನಾಯಿತಿ
ಈ ರೀತಿ ಸಲ್ಲಿಸುವ ದೇಣಿಗೆಗೆ ಆದಾಯ ತೆರಿಗೆ ಕಾಯ್ದೆ 80 ಜಿ (2) ಅಡಿ ತೆರಿಗೆ ವಿನಾಯಿತಿ ಇದೆ. ಆದಾಯ ತೆರಿಗೆ ವಿಣಾಯಿತಿ ಪಡೆಯಲು ಪ್ಯಾನ್ ಸಂಖ್ಯೆ AAAGC1692P ಅಥವಾ GGGGG 0000G ಅನ್ನು ಬಳಸಬೇಕು. ಆನ್ಲೈನ್ ದೇಣಿಗೆ ಸಲ್ಲಿಕೆಗೆ ಆನ್ಲೈನ್ನಲ್ಲಿಯೇ ರಸೀದಿ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಉಳಿದಂತೆ ಪಾವತಿಸಲಾಗುವ ದೇಣಿಗೆ ಮೊತ್ತಕ್ಕೆ ತ್ವರಿತವಾಗಿ ರಸೀದಿ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸಿಎಸ್ಆರ್ ಅಡಿ ವಿನಾಯಿತಿ ಪಡೆಯಲು ಬಯಸುವ ಕಂಪೆನಿಗಳು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣೆ ಪ್ರಾಧಿಕಾರ ಖಾತೆ ಸಂಖ್ಯೆ 38690610155ಕ್ಕೆ ದೇಣಿಗೆ ಕಳುಹಿಸಬಹುದು ಎಂದು ತಿಳಿಸಿದ್ದಾರೆ.












Click it and Unblock the Notifications