ಮಹಾರಾಷ್ಟ್ರ, ಕರ್ನಾಟಕ ಗಡಿ ವಿವಾದ ಕುರಿತು ಯಡಿಯೂರಪ್ಪ ಸಭೆ
ಬೆಂಗಳೂರು, ಜನವರಿ 1: ಮಹಾರಾಷ್ಟ್ರ- ಕರ್ನಾಟಕ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಶೀಘ್ರವೇ ಸಭೆ ಕರೆಯಲಿರುವುದಾಗಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.
ಸಿಎಂ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸುಪ್ರೀಂಕೋರ್ಟ್ ನಲ್ಲಿ ಕಾನೂನು ಹೋರಾಟ ನಡೆಸುವ ಕುರಿತು ಸಿಎಂ ಸಭೆ ನಡೆಸುತ್ತಿದ್ದಾರೆ. ಮುಖ್ಯನ್ಯಾಯಮೂರ್ತಿ ಮಂಜುನಾಥ ನೇತೃತ್ವದಲ್ಲಿ ಒಂದು ಸಮಿತಿ ಇದೆ.ಆ ಸಮಿತಿ ಹಾಗೂ ಅಡ್ವೊಕೇಟ್ ಜನರಲ್ ಹಾಗೂ ಆ ಭಾಗದ ಹಿರಿಯ ಸಚಿವರ ಜೊತೆ ಸಿಎಂ ಸಭೆ ನಡೆಸಲಿದ್ದಾರೆ.
ರಾಜ್ಯದಲ್ಲಿ ಶಾಂತ ವಾತಾವರಣ ಮರಳಿದೆ: ಬಸವರಾಜ ಬೊಮ್ಮಾಯಿ
ಸಭೆ ನಡೆಸಿ ಕಾನೂನಾತ್ಮಕ ಕ್ರಮವನ್ನು ಜರುಗಿಸುತ್ತೇವೆ.ಅತ್ಯುತ್ತಮವಾದ ರಾಜ್ಯ ಪ್ರತಿನಿಧಿಸುವ ಒಬ್ಬ ವಕೀಲರನ್ನು ಕೂಡ ಕಾನೂನು ಹೋರಾಟಕ್ಕೆ ನೇಮಕ ಮಾಡ್ತೇವೆ.ಈಗಾಗಲೇ ಮಹಾಜನ್ ವರದಿ ಪ್ರಕಾರ ವಿಷಯ ಬಗೆಹರಿದಿದೆ. ಆದರೆ ರಾಜಕೀಯಕ್ಕಾಗಿ ಮಹಾರಾಷ್ಟ್ರ ಸಿಎಂ ಪದೇ ಪದೇ ಈ ಖ್ಯಾತೆ ತೆಗೆಯುತ್ತಿದ್ದಾರೆ.
ಹಿಂದೆ ಶರದ್ ಪವಾರ್ ಅವರು ಈ ರೀತಿ ಖ್ಯಾತೆ ತೆಗೆಯುತ್ತಿದ್ರು.ಆ ಮೇಲೆ ಮಹಾರಾಷ್ಟ್ರ ಕರ್ನಾಟಕ ಗಡಿ ಸಮಸ್ಯೆ ಇಲ್ಲಿಗೆ ಮುಗೀತು ಅಂತಾ ಹೇಳಿಕೆ ಕೊಟ್ಟಿದ್ದರು. ಈಗ ಆ ಹೇಳಿಕೆಯನ್ನು ಉದ್ದವ್ ಠಾಕ್ರೆಗೆ ನೆನಪು ಮಾಡಿಕೊಡ್ತೇನೆ.
ಬೆಂಗಳೂರಿನಲ್ಲಿ ಬ್ರಿಗೇಡ್ ರಸ್ತೆ ಸೇರಿ ಕೆಲವೆಡೆ ಪಾನಮತ್ತರಾಗಿ ಕೆಲವು ಯುವಕರು ಅಸಭ್ಯವಾಗಿ ವರ್ತಿಸಿದ್ದಾರೆ, ಕೆಲವು ಅಹಿತಕರ ಘಟನೆಗಳು ಮಾಧ್ಯಮಗಳಲ್ಲೂ ಬಂದಿದೆ. ಆ ಘಟನೆಗಳ ಕುರಿತು ವಿವರ ಸಂಗ್ರಹ ಮಾಡುತ್ತೇವೆ, ಇವತ್ತು ಹಿರಿಯ ಅಧಿಕಾರಿಗಳ ಸಭೆ ಇದೆ.ಅನುಚಿತವಾಗಿ ನಡೆದುಕೊಂಡ ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ.
ಮಹಾರಾಷ್ಟ್ರ ಗಡಿ ವಿವಾದ ವಿಚಾರ, ಕಾನೂನು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡಲು ಸೂಚನೆ.ಈಗಾಗಲೇ ಬೆಳಗಾವಿಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇನೆ ಎಂದರು.