ಯಡಿಯೂರಪ್ಪ ಸರ್ಕಾರ ಪತನದ ಬಗ್ಗೆ ಕುಮಾರಸ್ವಾಮಿ ಭವಿಷ್ಯ
ಬೆಂಗಳೂರು, ಅಕ್ಟೋಬರ್ 01: ಬಿಜೆಪಿ ರಾಜ್ಯ ಸರ್ಕಾರ ಪತನದ ಬಗ್ಗೆ ನಿಕಟಪೂರ್ವ ಸಿಎಂ ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಅನುದಾನ ಕಡಿತಕ್ಕೆ ಸಂಬಂಧಿಸಿದಂತೆ ಇಂದು ನಡೆದ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ, 'ಯಡಿಯೂರಪ್ಪ ಸರ್ಕಾರದ ಅವಧಿ ಎರಡು ತಿಂಗಳು ಅಷ್ಟೆ' ಎಂದು ಹೇಳಿದ್ದಾರೆ.
'ಯಡಿಯೂರಪ್ಪ ಇನ್ನು ಮುಂದೆ ಎಷ್ಟು ದಿನ ಆಡಳಿತ ಮಾಡುತ್ತಾರೆ ಎಂದು ನೀವೆ ನೋಡುತ್ತೀರಂತೆ' ಎಂದು ಮಾರ್ಮಿಕವಾಗಿ ಹೇಳಿದ ಅವರು, 'ಯಡಿಯೂರಪ್ಪ ಅಧಿಕಾರಕ್ಕೆ ಬಂದ ಎರಡು ತಿಂಗಳ ಒಳಗಾಗಿ ಎಷ್ಟೆಲ್ಲಾ ನಡೆದಿದೆ ಎಂದು ಗೊತ್ತಿಲ್ಲವೆ' ಎಂದು ಅವರು ಹೇಳಿದರು.

'ನಾನು ಯಾವುದೇ ಕುತಂತ್ರ ರಾಜಕಾರಣಕ್ಕೆ ತಲೆ ಬಗ್ಗಿಸುವವನಲ್ಲ, ನಾನು ತಲೆ ಬಗ್ಗಿಸಿದರೆ ಅದು ಜನರ ಅಭಿವೃದ್ಧಿಗಾಗಿ ಮಾತ್ರ' ಎಂದು ಹೇಳಿದರು.
'ಇಂದು ಸಾಂಕೇತಿಕವಾಗಿ ಅಷ್ಟೆ ಪ್ರತಿಭಟನೆ ಮಾಡಿದ್ದೇವೆ, ಸರ್ಕಾರವು ಇದೇ ದ್ವೇಷ ಭಾವ ಮುಂದುವರೆಸಿದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು' ಎಂದು ಅವರು ಎಚ್ಚರಿಕೆ ನೀಡಿದರು.
'ನೆರೆಯಿಂದಾಗಿ ಲಕ್ಷ-ಲಕ್ಷ ಜನ ಮನೆ ಕಳೆದುಕೊಂಡಿದ್ದಾರೆ, ಸರ್ಕಾರ ಅವರಿಗೆ ಸೂಕ್ತ ನೆರವು ನೀಡಿಲ್ಲ, ಅಮೆರಿಕಕ್ಕೆ ಹೋಗಿ ಭಾಷಣ ಬಿಗಿಯುವ ಮೋದಿಗೆ ಕರ್ನಾಟಕಕ್ಕೆ ಬರಲು ಸಮಯವಿಲ್ಲ, ಕೇಂದ್ರವು ರಾಜ್ಯದ ಬಗ್ಗೆ ನಿರ್ಲಕ್ಷ್ಯ ತೋರಿದ್ದಾರೆ' ಎಂದು ಅವರು ಆರೋಪಿಸಿದ್ದಾರೆ.
ಟೆಲಿಪೋನ್ ಕದ್ದಾಲಿಕೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 'ಸಿಬಿಐ ಮಾತ್ರ ಅಲ್ಲ, ಯಾರಿಂದಲೂ ಏನು ಮಾಡಲು ಸಾಧ್ಯವಿಲ್ಲ. ಆದಿಚುಂಚನಗಿರಿ ಮಠದ ಶ್ರೀಗಳ ಆದೇಶದಂತೆಯೇ ಅಮೆರಿಕಕ್ಕೆ ಹೋಗಿದ್ದೆ. ಅದೇ ಸ್ವಾಮೀಜಿಯವರ ದೂರವಾಣಿ ಕದ್ದಾಲಿಕೆ ಮಾಡಲು ಹೇಗೆ ಸಾಧ್ಯ? ನನ್ನ ಮತ್ತು ಶ್ರೀಗಳ ನಡುವಿನ ಸಂಬಂಧ ಹಾಳು ಮಾಡಲು ಈ ಕುತಂತ್ರ ನಡೆಸಿದ್ದಾರೆ' ಎಂದು ಆರೋಪಿಸಿದರು.












Click it and Unblock the Notifications