ಹೊಸೂರಿನಲ್ಲಿ ವಿಪ್ರೋ ಉದ್ಯೋಗಿ ಆತ್ಮಹತ್ಯೆ

ಮೃತಪಟ್ಟವರನ್ನು 47 ವರ್ಷ ವಯಸ್ಸಿನ ಎಲ್ ಕೃಷ್ಣನ್ ಹಾಗೂ ಆತನ ತಾಯಿ 78 ವರ್ಷದ ಸೀತಾ ಲಕ್ಷ್ಮಣ್ ಎಂದು ಗುರುತಿಸಲಾಗಿದೆ. ಹುಡ್ಕೋ ಪೊಲೀಸರ ಪ್ರಕಾರ ಸೀತಾ ಅವರು ತಿರುನಲ್ವೇಲಿ ಜಿಲ್ಲೆಯವರಾಗಿದ್ದು ಚೆನ್ನನ ಅಂಬತ್ತೂರಿನಲ್ಲಿ ಪತಿ ಲಕ್ಷ್ಮಣನ್ ಜತೆ ವಾಸವಾಗಿದ್ದರು. ದಂಪತಿ ಪುತ್ರ ಕೃಷ್ಣನ್ ಅವರು ಚೆನ್ನೈನಲ್ಲಿ ಖಾಸಗಿ ಕಂಪನಿಯಲ್ಲಿ ವೃತ್ತಿಯಲ್ಲಿದ್ದರು ನಂತರ ವಿಪ್ರೋಗೆ ಸೇರಿಕೊಂಡರು.
ಕೃಷ್ಣನ್ ಅವರು ಹೇಮ ಎಂಬುವವರನು ಮದುವೆಯಾದರು. ಇವರಿಗೆ ಆದಿತ್ಯಾ ಹೆಸರಿನ 14 ವರ್ಷದ ಮಗ ಇದ್ದಾನೆ. ಬೆಂಗಳೂರಿನ ಕೆಆರ್ ಪುರಂನಲ್ಲಿ ತಾಯಿ ಜತೆ ಇವರು ವಾಸವಾಗಿದ್ದರು. ಇತ್ತೀಚೆಗೆ ಕೃಷ್ಣನ್ ತಾಯಿ ಸೀತಾಗೆ ಹುಷಾರಿಲ್ಲದ್ದಂತಾಯಿತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗಿತ್ತು. ಕಚೇರಿ ಮುಗಿಸಿಕೊಂಡು ಸಂಜೆ ಆಸ್ಪತ್ರೆಗೆ ತೆರಳಿದ ಕೃಷ್ಣನ್ ಮತ್ತೆ ಮನೆಗೆ ಹಿಂತಿರುಗಿರಲಿಲ್ಲ.
ಮಂಗಳವಾರ ಹೊಸೂರಿನ ಲಾಡ್ಜ್ ಮ್ಯಾನೇಜರ್ ರೂಮೊಂದರಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ನೋಡಿದಾಗ ತಾಯಿ, ಮಗ ಮೃತಪಟ್ಟಿರುವುದು ಕಂಡು ಬಂದಿದೆ. ಕೃಷ್ಣನ್ ಜೇಬಿನಲ್ಲಿದ್ದ ಕ್ರೆಡಿಟ್ ಕಾರ್ಡ್ ಮೂಲಕ ಅವರ ವಿವರ ತಿಳಿದು ಕೊಂಡು ಪತ್ನಿ ಹೇಮಾಗೆ ವಿಷಯ ಮುಟ್ಟಿಸಿದ್ದಾರೆ.
ಲಾಡ್ಜ್ ರೂಮಿನಲ್ಲಿ ಕೃಷ್ಣನ್ ಬರೆದಿಟ್ಟಿರುವ ಸೂಸೈಡ್ ನೋಟ್ ಪೊಲೀಸರಿಗೆ ಸಿಕ್ಕಿದೆ. ನನ್ನ ಸಾವಿಗೆ ಯಾರೂ ಕಾರಣರಲ್ಲ. ನಾವು ಯಾರಿಗೂ ಹೊರೆಯಾಗಲು ಸಿದ್ಧರಿಲ್ಲ ಎಂದು ಬರೆಯಲಾಗಿದೆ. ಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಆಟೋಪ್ಸಿ ವರದಿ ಪಡೆದಿರುವ ಪೊಲೀಸರು ಐಪಿಸಿ ಸೆಕ್ಷನ್ 174 ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೃಷ್ಣನ್ ಅವರಿಗೆ ಯಾವುದೇ ಆರ್ಥಿಕ ಸಂಕಷ್ಟ ಇರಲಿಲ್ಲ ಅವರ ಸಾವಿಗೆ ಯಾರು ಕಾರಣರಲ್ಲ ಎಂದು ಹೇಮಾ ಹೇಳಿಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಹುಡ್ಕೋ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications