ಬಿಬಿಎಂಪಿಯಲ್ಲಿನ ಮೈತ್ರಿ 5 ವರ್ಷ ಅಂದ್ರು ದೇವೇಗೌಡ್ರು!
ಬೆಂಗಳೂರು, ನವೆಂಬರ್ 05 : 'ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ಗೆ ಐದು ವರ್ಷಗಳ ಕಾಲ ಬೆಂಬಲ ನೀಡುತ್ತೇವೆ' ಎಂದು ಎಚ್.ಡಿ.ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ಬುಧವಾರ 'ನಾವು ಬೆಂಬಲ ಕೊಟ್ಟಿರುವುದು ಕೇವಲ ಒಂದು ವರ್ಷಕ್ಕೆ ಮಾತ್ರ' ಎಂದು ಕುಮಾರಸ್ವಾಮಿ ಹೇಳಿದ್ದರು.
ಬೆಂಗಳೂರಿನಲ್ಲಿ ಬಿಬಿಎಂಪಿ ಮೈತ್ರಿ ಕುರಿತು ಮಾತನಾಡಿರುವ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಅವರು, 'ಯಾರೋ ಒಬ್ಬರು ಕಾಂಗ್ರೆಸ್ ಶಾಸಕರು ಜೆಡಿಎಸ್ನ ಬಿಬಿಎಂಪಿ ಸದಸ್ಯರ ಜೊತೆ ನಡೆದುಕೊಂಡ ರೀತಿಯಿಂದ ಮೈತ್ರಿಗೆ ಧಕ್ಕೆ ಯಾಗುವುದಿಲ್ಲ' ಎಂದು ಹೇಳಿದರು.[ಕಾಂಗ್ರಸ್ಸಿಗೆ ಎಚ್ಡಿಕೆ ಕೇಳಿದ 5 ಪ್ರಶ್ನೆಗಳು]

'ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮೇಯರ್, ಬೆಂಗಳೂರು ಉಸ್ತುವಾರಿ ಸಚಿವರು ತಕರಾರು ತೆಗೆದಿಲ್ಲ. ಯಾವುದೋ ಶಾಸಕನ ವಿಚಾರಕ್ಕೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. 5 ವರ್ಷಗಳ ಕಾಲ ಎರಡೂ ಪಕ್ಷಗಳ ಮೈತ್ರಿ ಅಭಾದಿತವಾಗಿರುತ್ತದೆ' ಎಂದು ದೇವೇಗೌಡರು ಸ್ಪಷ್ಟಪಡಿಸಿದರು. [ಮೈತ್ರಿ ಮುರಿಯುವ ಮಾತನಾಡಿದ ಎಚ್ಡಿಕೆ]
ಕುಮಾರಸ್ವಾಮಿ ಅವರಿಗೆ ಕಾಳಜಿ ಇದೆ : 'ಬೆಂಗಳೂರು ನಗರದ ಅಭಿವೃದ್ಧಿ ಬಗ್ಗೆ ಕುಮಾರಸ್ವಾಮಿ ಅವರಿಗೆ ಅಪಾರವಾದ ಕಾಳಜಿ ಇದೆ. ಆದ್ದರಿಂದ, ಬಿಬಿಎಂಪಿ ಸರಿಯಾಗಿ ಕೆಲಸ ಮಾಡಲಿ ಎಂದು ಈ ರೀತಿ ಹೇಳಿಕೆ ನೀಡಿದ್ದಾರೆ' ಎಂದು ದೇವೇಗೌಡರು ತಿಳಿಸಿದರು. [ಬಿಬಿಎಂಪಿಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಜಯ]
ಎಚ್ಡಿಕೆ ಏನು ಹೇಳಿದ್ದರು? : ಬುಧವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಎಚ್.ಡಿ.ಕುಮಾರಸ್ವಾಮಿ ಅವರು, ಬಿಬಿಎಂಪಿಯಲ್ಲಿನ ಕಾಂಗ್ರೆಸ್ ಆಡಳಿತದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದರು. 'ಜೆಡಿಎಸ್ ಸದಸ್ಯರಿಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲ' ಎಂದು ದೂರಿದ್ದರು.
'ಇಂತಹ ಆಡಳಿತ ಮುಂದುವರೆದರೆ ನೀಡಿರುವ ಬೆಂಬಲದ ಬಗ್ಗೆ ಮರುಪರಿಶೀಲನೆ ನಡೆಸಬೇಕಾಗುತ್ತದೆ. ನಾವು ಬೆಂಬಲ ಕೊಟ್ಟಿರುವುದು ಕೇವಲ ಒಂದು ವರ್ಷಕ್ಕೆ ಮಾತ್ರ. ಇದನ್ನು ಅರ್ಥ ಮಾಡಿ ಕೊಂಡರೆ ಒಳ್ಳೆಯದು' ಎಂದು ಕಾಂಗ್ರೆಸ್ ನಾಯಕರಿಗೆ ಕಿವಿಮಾತು ಹೇಳಿದ್ದರು.
ಅಂದಹಾಗೆ 2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆದರೆ, ಜೆಡಿಎಸ್ ಬೆಂಬಲ ಪಡೆದ ಕಾಂಗ್ರೆಸ್ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.












Click it and Unblock the Notifications