'ಭಾರತವನ್ನಲ್ಲ ಕರ್ನಾಟಕವನ್ನೂ ತೊರೆಯುವುದಿಲ್ಲ'
ಬೆಂಗಳೂರು, ಸೆ.24 : "ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾದರೆ, ಭಾರತ ದೇಶವನ್ನಲ್ಲ ಕರ್ನಾಟಕವನ್ನು ಬಿಟ್ಟು ಹೋಗುವುದಿಲ್ಲ" ಎಂದು ಜ್ಞಾನಪೀಠ ಪುರಸ್ಕೃತ ಸಾಹಿತಿ ಯು.ಆರ್.ಅನಂತಮೂರ್ತಿ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ಮತ್ತು ವರದಿಗಾರರ ಕೂಟ ಆಯೋಜಿಸಿದ್ದ ಪತ್ರಿಕಾ ಸಂವಾದ ಕಾರ್ಯಕ್ರದಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅನಂತಮೂರ್ತಿ, ನರೇಂದ್ರ ಮೋದಿ ಪ್ರಧಾನಿಯಾದರೆ ಭಾರತ ಬಿಟ್ಟು ಹೋಗುವುದಿಲ್ಲ ಎಂದು ಹೇಳುವ ಮೂಲಕ ಹಲವಾರು ದಿನಗಳ ವಿವಾದಗಳಿಗೆ ತೆರೆ ಎಳೆದರು.
"ಕಾರ್ಖಾನೆ ಸ್ಥಾಪಿಸುವ ಅಭಿವೃದ್ಧಿಯ ಬಗ್ಗೆ ನರೇಂದ್ರ ಮೋದಿ ಮಾತನಾಡುತ್ತಿದ್ದಾರೆ. ಆದರೆ ಭಾರತದಂತಹ ದೇಶಕ್ಕೆ ದಲಿತರಿಗೆ, ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡುವಂತಹ ಅಭಿವೃದ್ಧಿ ಅಗತ್ಯವಿದೆ" ಎಂದು ಅನಂತಮೂರ್ತಿ ವಿಶ್ಲೇಷಿಸಿದರು.
ಗುಜರಾತ್ ಗಲಭೆಯಂತಹ ಪ್ರಕರಣಗಳು ದೇಶದಲ್ಲಿ ಮರುಕಳಿಸಬಾರದು. ದೇಶದಲ್ಲಿ ಹಿಂಸೆಯ ಮೂಲಕ ತಮ್ಮ ಹಿತಾಸಕ್ತಿ ಸಾಧಿಸಿಕೊಳ್ಳುವ ಪ್ರಯತ್ನಗಳು ನಡೆಯಬಾರದು ಎಂದು ಅನಂತಮೂರ್ತಿ ಕಾಳಜಿ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಘೋಷಿಸಿದರು. (ಸಂವಾದದಲ್ಲಿ ಅನಂತಮೂರ್ತಿ ಹೇಳಿದ್ದೇನು?)

ಅಭಿವೃದ್ಧಿ ಬೇಡ ಸರ್ವೋದಯ ಬೇಕು
ದೇಶದಲ್ಲಿ ಕಾರ್ಖಾನೆ ಸ್ಥಾಪಿಸುವ ಅಭಿವೃದ್ಧಿ ನಮಗೆ ಬೇಕಾಗಿಲ್ಲ. ದಲಿತರು, ಸಾಮಾನ್ಯ ವರ್ಗದವರಿಗೂ ಅನುಕೂಲವಾಗುವ ಸರ್ವೋದಯದ ಅಗತ್ಯವಿದೆ. ವಿಶ್ವದ ಎಲ್ಲಾ ದೇಶಗಳಲ್ಲೂ ಇಂತಹ ಅಭಿವೃದ್ಧಿ ಜಾರಿಗೆ ಬರಬೇಕು ಎಂದು ಅನಂತಮೂರ್ತಿ ಆಶಯ ವ್ಯಕ್ತಪಡಿಸಿದರು.

ಗುಜರಾತ್ ದಂಗೆಗೆ ಕಾರಣ ಯಾರು?
ಒಂದು ದೇಶದಲ್ಲಿ ಏನಾದರೂ ದಂಗೆ ಸಂಭವಿಸಿದರೆ, ಅದಕ್ಕೆ ದೇಶವನ್ನು ಆಳುವ ರಾಜನು ಕಾರಣನಾಗುತ್ತಾನೆ. ಆದರೆ, ನಾವು ಗುಜರಾತ್ ದಂಗೆಗೆ ಯಾರು ಕಾರಣ? ಎಂದು ನಾವು ಇನ್ನೂ ಹುಡುಕಾಡುತ್ತಿದ್ದೇವೆ. ವಾಜಪೇಯಿ ಅವರಿಗೆ ದಂಗೆಗೆ ಯಾರು ಕಾರಣ ಎಂದು ಸ್ಪಷ್ಟವಾಗಿ ತಿಳಿದಿತ್ತು ಎಂದು ಅನಂತಮೂರ್ತಿ ಹೇಳಿದರು.

ಹಿಂಸೆಯಿಂದ ಹಿತಾಸಕ್ತಿ ಸಾಧಿಸಿಕೊಳ್ಳಬೇಡಿ
ಗುಜರಾತ್ ನಲ್ಲಿ ನಡೆದ ಗಲಭೆ, ಉತ್ತರ ಪ್ರದೇಶದಲ್ಲಿ ಇತ್ತೀಚೆಗೆ ನಡೆದಂತಹ ಹಿಂಸೆಗಳು ದೇಶದಲ್ಲಿ ಮರುಕಳಿಸಬಾರದು. ಹಿಂಸೆಯ ಮೂಲಕ ವ್ಯಕ್ತಿಗಳು ತಮ್ಮ ಹಿತಾಸಕ್ತಿಯನ್ನು ಸಾಧಿಸಿಕೊಳ್ಳುವಂತಹ ಪ್ರವೃತ್ತಿಗಳು ಕಡಿಮೆಯಾಗಬೇಕು ಎಂದು ಅನಂತಮೂರ್ತಿ ಹೇಳಿದರು.

ಅಭಿವೃದ್ಧಿಯನ್ನು ಪ್ರಶ್ನಿಸಿಸಬೇಕು
ವಿವಿಧ ರಾಜಕೀಯ ಪಕ್ಷಗಳು ಹೇಳುವ ಅಭಿವೃದ್ಧಿಯನ್ನು ಪ್ರಶ್ನಿಸಬೇಕು ಎಂದು ಯು.ಆರ್.ಅನಂತಮೂರ್ತಿ ಹೇಳಿದ್ದಾರೆ. ಕಾರ್ಖಾನೆ ಸ್ಥಾಪನೆಯಾಗುವ ಅಭಿವೃದ್ಧಿ ಮನುಷ್ಯ ಮತ್ತು ಭೂಮಿಯನ್ನು ಹಾಳು ಮಾಡುತ್ತದೆ. ಅದು ದೇಶದ ಸಾಮಾನ್ಯ ಜನರಿಗೂ ತಲುಪುವ ಅಭಿವೃದ್ಧಿಯಾಗಿರಲಾರದು ಎಂದು ಅವರು ವಿಶ್ಲೇಷಿಸಿದರು.

ಹಿಂಸೆಗಳಲ್ಲಿ ಯಾರಿಗೂ ಶಿಕ್ಷೆ ಆಗಿಲ್ಲ
ಭಾರತ ವಿಭಜನೆ, ಸಿಖ್ ಗಲಭೆ ಸೇರಿದಂತೆ ಸಾಮೂಹಿಕ ಹಿಂಸೆಗಳು ನಡೆದಾಗ ಯಾರಿಗೂ ಶಿಕ್ಷೆಯಾಗಿಲ್ಲ. ಭಾರತ ವಿಭಜನೆ ಆದಾಗ ಮಹಾತ್ಮ ಗಾಂಧಿ ಅವರಿಗೆ ಮಾತ್ರ ಶಿಕ್ಷೆಯಾಗಿದೆ. ಆದ್ದರಿಂದ ದೇಶಕ್ಕೆ ಹಿಂಸೆ ಬೇಡ. ಜನರಿಗೆ ನೆಮ್ಮದಿಯ ಬದುಕು ಬೇಕು ಎಂದು ಅನಂತಮೂರ್ತಿ ಹೇಳಿದರು.

ನಾನು ವಿದೂಷಕ ನಿದ್ದಂತೆ
ನಾನು ಸತ್ಯ ಹೇಳುವ ವಿದೂಷಕನಂತೆ ಎಂದು ಅನಂತಮೂರ್ತಿ ಹೇಳಿದ್ದಾರೆ. ನನ್ನ ಬರವಣಿಗೆಗಳಲ್ಲೂ ಸತ್ಯ ಹೇಳುವ ಒಂದು ಪಾತ್ರವನ್ನು ಸೃಷ್ಟಿಮಾಡಿರುತ್ತೇನೆ. ನನಗೆ ಅದು ಬಹಳ ಪ್ರಿಯವಾದ ಪಾತ್ರ. ಅಂತೆಯೇ ನಾನು ಕೂಡಾ ಸದಾ ಸತ್ಯವನ್ನು ಹೇಳುತ್ತೇನೆ. ನಾವು ಮೌನಿಯಾಗಿದ್ದರೆ, ಒಂದು ನಾಗರೀಕತೆಯೇ ನಾಶವಾಗುತ್ತದೆ ಎಂದರು.

ಕಾಂಗ್ರೆಸ್ ಗಂಗಾ ನದಿಯಂತೆ
ಕಾಂಗ್ರೆಸ್ ಪಕ್ಷ ಗಂಗಾ ನದಿಯಂತೆ ಎಂದೂ ಭತ್ತದೆ ಹರಿಯುತ್ತಿರುತ್ತದೆ. ಆದ್ದರಿಂದ ಅ ಪಕ್ಷಕ್ಕೆ ನಾನು ಬೆಂಬಲ ನೀಡುತ್ತೇನೆ. ಅದರಲ್ಲಿ ಒಮ್ಮೊಮ್ಮೆ ಹೊಸ ನೀರು ಹರಿಯುತ್ತದೆ ಎಂಬ ಆಶಯವನ್ನು ನಾನು ಹೊಂದಿದ್ದೇನೆ ಎಂದು ಅನಂತಮೂರ್ತಿ ಸಮರ್ಥನೆ ನೀಡಿದರು.

ರಾಹುಲ್ ಗಾಂಧಿ ಪ್ರಧಾನಿ ಆಗಬಹುದೇ
ಕಾಂಗ್ರೆಸ್ ಪಕ್ಷ ಸದ್ಯ ಮಾಡಿರುವ ಎಲ್ಲಾ ಹಗರಣಗಳ ತಪ್ಪನ್ನು ತಿದ್ದುವುದಾಗಿ ಜನರಗೆ ಭರವಸೆ ನೀಡಿದರೆ, ರಾಹುಲ್ ಗಾಂಧಿ ಪ್ರಧಾನಿಯಾಗಬಹುದು ಎಂದು ಅನಂತಮೂರ್ತಿ ಹೇಳಿದರು. ಆದರೆ, ರಾಹುಲ್ ಪ್ರಧಾನಿ ಸ್ಥಾನವನ್ನು ನಿರ್ವಹಿಸುವಷ್ಟು ಸಮರ್ಥರಾಗಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದರು.

ಮೋದಿ ಮತ್ತೊಬ್ಬ ಅಡ್ವಾಣಿ
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತೊಬ್ಬರು ಎಲ್.ಕೆ.ಅಡ್ವಾಣಿ ಇದ್ದಂತೆ. ಅದನ್ನು ಅವರು ಮರೆತಿದ್ದಾರೆ. ಅಡ್ವಾಣಿ ಬಿಜೆಪಿ ಪಕ್ಷವನ್ನು ಕಟ್ಟಿಬೆಳೆಸಿ, ಅಧಿಕಾರಕ್ಕೆ ತಂದರು. ಮೋದಿ ಕೇವಲ ಮಾತಿನ ಮೂಲಕ ಅದನ್ನು ಸಾಧಿಸಲು ಹೊರಟಿದ್ದಾರೆ. ಅಡ್ವಾಣಿಯಂತಹ ಸಾಧನೆಯನ್ನು ಮೋದಿ ಮಾಡಿಲ್ಲ.

ಕಾಂಗ್ರೆಸ್ ಹಗರಣಗಳನ್ನು ಬೆಂಬಲಿಸೋಲ್ಲ
ಕಾಂಗ್ರೆಸ್ ಪಕ್ಷ ಹಗರಣಗಳನ್ನು ಮಾಡಿದರೆ ಅದನ್ನು ಬೆಂಬಲಿಸುವುದಿಲ್ಲ ಎಂದು ಅನಂತಮೂರ್ತಿ ಹೇಳಿದ್ದಾರೆ. ಭೂಮಿ, ಅದಿರನ್ನು ಮಾರಾಟ ಮಾಡಿ ಅಕ್ರಮವಾಗಿ ಹಣ ಗಳಿಸುವುಸುದು ಭ್ರಷ್ಟಾಚಾರದಲ್ಲೇ ಹೆಚ್ಚಿನ ಭ್ರಷ್ಟಾಚಾರ ಇಂತಹವುಗಳನ್ನು ನಾನು ಬೆಂಬಲಸುವುದಿಲ್ಲ ಎಂದು ತಿಳಿಸಿದರು.

ಮಾಧ್ಯಮಗಳು ಮೋದಿ ಹಿಂದೆ ಬಿದ್ದಿವೆ
ಇಂದಿನ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳು ನರೇಂದ್ರ ಮೋದಿಯ ಹಿಂದೆ ಬಿದ್ದಿವೆ. ಇದರ ಹಿಂದೆ ಹಣಗಳಿಸುವ ಉದ್ದೇಶವಿದೆ ಎಂದು ಅನಂತಮೂರ್ತಿ ವಿಶ್ಲೇಷಿಸಿದ್ದಾರೆ. ನರೇಂದ್ರ ಮೋದಿಯನ್ನು ಮುಂದಿಟ್ಟುಕೊಂಡು ಮಾಧ್ಯಮಗಳು ಮಾರುಕಟ್ಟೆ ವಿಸ್ತರಣೆ ಮಾಡಿಕೊಳ್ಳಲು ಮುಂದಾಗುತ್ತಿವೆ. ಅವುಗಳಿಗೆ ನಿಜವಾಗಿ ಮೋದಿಯನ್ನು ಬೆಂಬಲಿಸುತ್ತಿಲ್ಲ ಎಂದು ಹೇಳಿದರು.

ಮೋದಿ, ಸಂಘ ಪರಿವಾರ ಇತಿಹಾಸ ಮರೆತಿವೆ
ರಾಜಕಾರಣದಲ್ಲಿ ನಾಟಕೀಯತೆ ಇರಬಾರದು ವಿವೇಕದಿಂದ ಆಲೋಚಿಸುವ ಕ್ರಮವಿರಬೇಕು ಎಂದು ಭೀಷ್ಮ ಪುರಾತನ ಕಾಲದಲ್ಲೇ ಹೇಳಿದ್ದಾರೆ. ಆದರೆ, ಸಂಘ ಪರಿವಾರ ಮತ್ತು ನರೇಂದ್ರ ಮೋದಿ ಅವರನ್ನು ಮರೆತು ಮಾತನಾಡುತ್ತಿದ್ದಾರೆ ಎಂದು ಅನಂತಮೂರ್ತಿ ಟೀಕಿಸಿದ್ದಾರೆ.

ಹಿಟ್ಲರ್ ನಂತೆ ಮೋದಿ ಕಂಡರೂ ಭಯ
ನೀವು ಮೋದಿಗೆ ಹೆದರಿದ್ದೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅನಂತಮೂರ್ತಿ ಹಿಟ್ಲರ್, ಮುಸಲೋನಿಯಂತೆ ಮೋದಿಯನ್ನು ಕಂಡರೆ ನನಗೆ ಭಯವಿದೆ. ಅದು ಜನಸಾಮಾನ್ಯರ ಕಾಳಜಿ ಕುರಿತಾದ ಭಯ ಎಂದು ಹೇಳಿದರು.

ಕಾಂಗ್ರೆಸ್ ಮುಸ್ಲಿಂರನ್ನು ಒಲೈಸುತ್ತಿಲ್ಲ
ಕಾಂಗ್ರೆಸ್ ಪಕ್ಷ ಮುಸ್ಲಿಂಮರ ಒಲೈಕೆಗೆ ಹೆಚ್ಚಿನ ಗಮನ ನೀಡುತ್ತಿದೆ ಎಂಬುದು ತಪ್ಪು. ಹಿಂದುಳಿದ ಅವರಿಗೆ ವಿಶೇಷ ಸವಲತ್ತುಗಳನ್ನು ನೀಡಿ ಮುಖ್ಯ ವಾಹಿನಿಗೆ ಕರೆತರುತ್ತಿದೆ ಇದನ್ನು ನಾನು ವಿರೋಧಿಸುವುದಿಲ್ಲ ಎಂದು ಅನಂತಮೂರ್ತಿ ಹೇಳಿದ್ದಾರೆ. ಸರ್ಕಾರ ಎಲ್ಲಾ ವರ್ಗದವರಿಗೂ ಅಗತ್ಯ ಸೌಲಭ್ಯ ಒದಗಿಸಬೇಕು ಎಂದು ಅವರು ಹೇಳಿದ್ದಾರೆ.

ಮಾಧ್ಯಮಗಳು ಬಲಪಂಥೀಯವಾಗುತ್ತಿದೆ
ಇಂದು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳು ಬಲಪಂಥೀಯ ಧೋರಣೆ ಅನುಸರಿಸುತ್ತಿವೆ. ಲೇಖಕರು, ಮಾಧ್ಯಮಗಳು ಹಿಂಸೆಗೆ ತಕ್ಷಣ ಪ್ರತಿಕ್ರಿಯೆ ನೀಡಬೇಕು. ಆದರೆ, ಇಂದು ಅಂತಹ ಪ್ರವೃತ್ತಿಗಳು ಕಡಿಮೆ ಆಗಿವೆ.

ಕಾಂಗ್ರೆಸ್ ಬೆಂಬಲಿಸಿ ಎನ್ನಲು ಧೈರ್ಯವಿಲ್ಲ
ಕರ್ನಾಟಕ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಎಂದು ನಾನು ಕರೆ ನೀಡಿದ್ದೆ. ಆದರೆ, ಸದ್ಯ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರವನ್ನು ಬೆಂಬಲಿಸಿ ಎಂದು ಹೇಳುವ ಧೈರ್ಯ ನನಗಿಲ್ಲ ಎಂದು ಅನಂತಮೂರ್ತಿ ಹೇಳಿದರು.












Click it and Unblock the Notifications