ಬೆಂಗಳೂರು: ಚಾಕುವಿನಿಂದ ಪತಿ ಮೇಲೆ ಪತ್ನಿ ಹಲ್ಲೆ, ಪತಿಯ ದೂರು ಸ್ವೀಕರಿಸಿದ ಪ್ರಧಾನಿ ಕಚೇರಿ
ಬೆಂಗಳೂರು, ಡಿಸೆಂಬರ್ 04: ತನ್ನ ಪತ್ನಿ ದಿನವೂ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು ಸಹಾಯ ಹಾಗೂ ರಕ್ಷಣೆ ಕೋರಿದ್ದ ಬೆಂಗಳೂರಿನ ವ್ಯಕ್ತಿಗೆ ಪ್ರಧಾನಮಂತ್ರಿ ಕಾರ್ಯಾಲಯ ಸ್ಪಂದಿಸಿ ದೂರನ್ನು ಸ್ವೀಕರಿಸಿದೆ.
ಬೆಂಗಳೂರಿನ ಯದುನಂದನ್ ಆಚಾರ್ಯ ಎಂಬುವವರು ಸಾಮಾಜಿಕ ಮಾಧ್ಯಮಗಳ ತಮಗೆ ಆಗುತ್ತಿದ್ದ ಕಿರುಕುಳ ಬೆದರಿಕೆ ಕುರಿತು ಹಂಚಿಕೊಂಡಿದ್ದರು. ಈ ಕುರಿತು ಟ್ವಿಟ್ ಮಾಡಿದ್ದ ಅವರು, ಪ್ರಧಾನಿ ಕಾರ್ಯಾಲಯ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕೇಂದ್ರ ಕಾನೂನು ಸಚಿವ ಮತ್ತು ನ್ಯಾಯಮೂರ್ತಿ ಕಿರಣ್ ರಿಜಿಜು ಅವರಿಗೆ ಟ್ಯಾಗ್ ಮಾಡಿದ್ದರು.
ಈ ರೀತಿ ಪತ್ನಿಯಿಂದ ಕಿರುಕುಳ, ದೈಹಿಕ ಹಲ್ಲೆಯಾದಾಗ ಯಾರೊಬ್ಬರು ನನ್ನ ಸಹಾಯಕ್ಕೆ ಬರಲಿಲ್ಲ. ನಾನು ಪುರಷನಾಗಿದ್ದರಿಂದ ಯಾರು ನನ್ನ ಸಹಾಯಕ್ಕೆ ಧಾವಿಸಿಲ್ಲ ಎಂದು ಬರೆದುಕೊಂಡಿದ್ದಾರೆ. ಇಂತಹ ಕೆಲಸಗಳಿಂದ ನಾರಿಶಕ್ತಿ ಹೆಚ್ಚುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ. ಇತ್ತೀಚೆಗೆ ಚಾಕುವಿನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾಳೆ. ಅದರಿಂದ ನನ್ನ ಕೈ ಗಾಯವಾಗಿದ್ದು, ರಕ್ತಸ್ರಾವವಾಗಿತ್ತು. ತಮಗೆ ಪತ್ನಿಯಿಂದ ಜೀವ ಬೆದರಿಕೆಯು ಇದೆ ಎಂದು ಫೋಟೊ ಪೋಸ್ಟ್ ಮಾಡಿದ್ದಾರೆ.
ಈ ಘಟನೆ ಸಂಬಂಧ ಪತ್ನಿ ವಿರುದ್ಧ ಅವಳ ಮೇಲೆ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಾಕಬಹುದೇ? ಇಲ್ಲ ಎಂದು ಯದುನಂದನ್ ಆಚಾರ್ಯ ಅಳಲು ತೋಡಿಕೊಂಡಿದ್ದಾರೆ.
ಪೊಲೀಸರ ಕಾನೂನು ಕ್ರಮದ ಭರವಸೆ
ಘಟನೆ ಹಾಗೂ ತಮ್ಮ ಪತ್ನಿಯ ದೌರ್ಜನ್ಯ, ಹಲ್ಲೆ ಕುರಿತು ಎಂಜಿನಿಯರ್ ಆಗಿರುವ ಯದುನಂದನ್ ಆಚಾರ್ಯ ಅಕ್ಟೋಬರ್ ನಲ್ಲೇ ಟ್ವಿಟ್ನಲ್ಲಿ ಬರೆದುಕೊಂಡಿದ್ದರು. ರಕ್ತಸ್ರಾವದ ಗಾಯಗೊಂಡ ಕೈ ಪೋಟೊ ಹಂಚಿಕೊಂಡಿದ್ದರು. ಈ ಸಂಬಂಧ ಇತ್ತೀಚೆಗಷ್ಟೇ ಆಚಾರ್ಯ ಅವರಿಗೆ ಪ್ರಧಾನಿ ಕಾರ್ಯಾಲಯ ಸ್ಪಂದಿಸಿ, ದೂರು ಸ್ವೀಕರಿಸಿದೆ.
ಇತ್ತ ಟ್ವೀಟ್ಗೆ ಪ್ರತಿಕ್ರಿಯಿಸಿದ ಬೆಂಗಳೂರು ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ ಅವರು ಪೊಲೀಸ್ ಠಾಣೆಗೆ ಭೇಟಿ ನೀಡಿ ಕುಂದುಕೊರತೆಗಳನ್ನು ಪರಿಹರಿಸುವಂತೆ ಕೇಳಿಕೊಂಡಿದ್ದಾರೆ. ಘಟನೆ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಈ ಘಟನೆ ಮೂಲಕ ಯದುನಂದನ್ ಆಚಾರ್ಯ ಅವರು ವಿವಿಧ ರೀತಿಯಲ್ಲಿ ಹಲವರ ಬೆಂಬಲ ಪಡೆದಿದ್ದಾರೆ. ಅದಲ್ಲದೇ ಕಿರುಕುಳಕ್ಕೊಳಗಾದ ಗಂಡಂದಿರ ಸಮಸ್ಯೆಯನ್ನು ಪರಿಹರಿಸುವ ಅಗತ್ಯವನ್ನು ಸಮಾಜಕ್ಕೆ ಎತ್ತಿ ತೋರಿಸಿದ್ದಾರೆ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೂದು ಸ್ವೀಕರಿಸಿರುವ ಪ್ರಧಾನಿ ಕಾರ್ಯಾಲಯ ಪರಿಹಾರ ಕ್ರಮ ಏನು ಸೂಚಿಸಲಿದೆ ಕಾಯು ನೋಡಬೇಕಿದೆ.