ತಮಿಳುನಾಡು, ಆಂಧ್ರದಲ್ಲಿಲ್ಲ, ಕರ್ನಾಟಕದಲ್ಲೇಕೆ SSLC ಪರೀಕ್ಷೆ? ಟೀಕಿಸುವ ಮುನ್ನ ತಿಳಿಯಿರಿ
ಬೆಂಗಳೂರು, ಜೂನ್ 24: ಕೊರೊನಾ ವೈರಸ್ ಭೀತಿಯಿಂದ ಹಲವು ರಾಜ್ಯಗಳಲ್ಲಿ 10ನೇ ತರಗತಿಯ ಪರೀಕ್ಷೆ ರದ್ದುಗೊಳಿಸಲಾಗಿದೆ. ತಮಿಳುನಾಡು, ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ 10ನೇ ತರಗತಿ ಪರೀಕ್ಷೆ ನಡೆಸುತ್ತಿಲ್ಲ.
Recommended Video
ಈ ಹಿಂದಿನ ಪೂರ್ವ ಪರೀಕ್ಷೆಗಳ ಫಲಿತಾಂಶದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಗ್ರೇಡ್ ನೀಡಿ ಮುಂದಿನ ತರಗತಿಗೆ ಪಾಸ್ ಮಾಡಲಾಗುತ್ತಿದೆ. ಆದರೆ, ಕರ್ನಾಟಕದ ಸರ್ಕಾರ ಮಾತ್ರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ರದ್ದುಗೊಳಿಸಲಿಲ್ಲ, ಮುಂದಕ್ಕೂ ಹಾಕಲಿಲ್ಲ.
SSLC ಪರೀಕ್ಷೆ ಸುದ್ದಿಗೋಷ್ಠಿ: ವಿದ್ಯಾರ್ಥಿಗಳು ತಿಳಿಯಬೇಕಾದ ವಿಷಯಗಳು
ವಿಪಕ್ಷ ನಾಯಕರು ಹಾಗೂ ಕೆಲವು ಪೋಷಕರ ವಿರೋಧದ ನಡುವೆಯೂ ಇಂದಿನಿಂದ ಪರೀಕ್ಷೆ ನಡೆಸುತ್ತಿದೆ. ಹೀಗಾಗಿ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರ ಪ್ರದೇಶ ಸರ್ಕಾರವೇ 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿದೆ. ಆದರೆ, ಕರ್ನಾಟಕ ಮಾತ್ರ ಏಕೆ ಹಠ ಮಾಡಿ ವಿದ್ಯಾರ್ಥಿಗಳ ಜೀವ ಹಾಗೂ ಜೀವನದ ಜೊತೆ ಆಟವಾಡುತ್ತಿದೆ ಎಂಬ ಟೀಕೆಯೂ ವ್ಯಕ್ತವಾಗುತ್ತಿದೆ. ಹೀಗೆ, ರಾಜ್ಯ ಸರ್ಕಾರ ಅಥವಾ ಶಿಕ್ಷಣ ಇಲಾಖೆಯನ್ನು ಟೀಕಿಸುವ ಮುನ್ನಾ ಒಮ್ಮೆ ಈ ಸ್ಟೋರಿ ಓದಿ...
ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಪ್ರಮುಖಘಟ್ಟ
ಕರ್ನಾಟಕದ ಪಾಲಿಗೆ ಎಸ್ಎಸ್ಎಲ್ಸಿ ಎನ್ನುವುದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಶಾಲಾ ಶಿಕ್ಷಣ ಮುಗಿಸಿ ಕಾಲೇಜು ಪ್ರವೇಶ ಮಾಡುವ ಹಂತ. ಭವಿಷ್ಯದಲ್ಲಿ ತಾನು ಯಾವ ಕ್ಷೇತ್ರದಲ್ಲಿ ಓದು ಮುಂದುವರಿಸಬೇಕು ಎಂದು ನಿರ್ಧರಿಸಲು 10ನೇ ತರಗತಿ ಅಂಕಗಳು ಬಹಳ ಪ್ರಮುಖ ಪಾತ್ರವಹಿಸುತ್ತೆ. ವಿದ್ಯಾರ್ಥಿ ಕನಸು, ಭವಿಷ್ಯ, ಉದ್ದೇಶಗಳನ್ನು ನಿರ್ಧರಿಸುವ ಹಂತವೇ ಎಸ್ಎಸ್ಎಲ್ಸಿ. ಆದರೆ, ನೆರೆ ರಾಜ್ಯಗಳ ಪರಿಸ್ಥಿತಿ ಬೇರೆ ಇದೆ.
12ನೇ ತರಗತಿ ಪ್ರಮುಖ ಘಟ್ಟ
ಆಂಧ್ರಪ್ರದೇಶ, ತಮಿಳುನಾಡು ಹಾಗೂ ತೆಲಂಗಾಣದಲ್ಲಿ 10ನೇ ತರಗತಿಗೆ ಅಷ್ಟು ಪ್ರಾಮುಖ್ಯತೆ ಇಲ್ಲ. ಆ ರಾಜ್ಯಗಳಲ್ಲಿ 12ನೇ ತರಗತಿಗೆ (ಕರ್ನಾಟಕದ ದ್ವಿತೀಯ ಪಿಯುಸಿ ದರ್ಜೆ) ಹೆಚ್ಚು ಪ್ರಾಮುಖ್ಯತೆ. ಕರ್ನಾಟಕದಲ್ಲಿ ಎಸ್ಎಸ್ಎಲ್ಸಿ ಹೇಗೋ ಆ ರಾಜ್ಯಗಳಲ್ಲಿ 12ನೇ ಕ್ಲಾಸ್ ಹಾಗೆ. ನೆರೆರಾಜ್ಯಗಳಲ್ಲಿ 10ನೇ ತರಗತಿ ಎನ್ನುವುದು ಹೈ ಸ್ಕೂಲ್ನ ಒಂದು ಹಂತ. ಅಲ್ಲಿ 12ನೇ ತರಗತಿ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. 12ನೇ ಕ್ಲಾಸ್ ಮುಗಿದರೆ ಅಲ್ಲಿ ಕಾಲೇಜು ಪ್ರವೇಶ.
ತಮಿಳುನಾಡಿನಲ್ಲಿ sslc ಪರೀಕ್ಷೆ ರದ್ದು; ಸುರೇಶ್ ಕುಮಾರ್ ಹೇಳಿದ್ದೇನು?
12ನೇ ಕ್ಲಾಸ್ ಪರೀಕ್ಷೆ ರದ್ದುಗೊಂಡಿಲ್ಲ
ಆಂಧ್ರ ಪ್ರದೇಶ, ತಮಿಳುನಾಡು, ತೆಲಂಗಾಣ ಸರ್ಕಾರಗಳು 10ನೇ ತರಗತಿ ಪರೀಕ್ಷೆ ರದ್ದುಗೊಳಿಸಿದೆ. ಎಲ್ಲ ವಿದ್ಯಾರ್ಥಿಗಳನ್ನು 11ನೇ ತರಗತಿಗೆ ಪಾಸ್ ಮಾಡಲಾಗುವುದು. ಆದರೆ, 12ನೇ ಕ್ಲಾಸ್ ಪರೀಕ್ಷೆ ರದ್ದುಗೊಂಡಿಲ್ಲ. ಸದ್ಯಕ್ಕೆ ಮುಂದೂಡಿದ್ದಾರೆ ಅಷ್ಟೇ. 12ನೇ ತರಗತಿ ಪರೀಕ್ಷೆ ಆ ರಾಜ್ಯಗಳಲ್ಲಿಯೂ ನಡೆಯಲಿದೆ. ಸದ್ಯಕ್ಕೆ ತಾತ್ಕಲಿಕವಾಗಿ ಮುಂದೂಡಲಾಗಿದೆ ಅಷ್ಟೇ.
ಹೋಲಿಕೆ ಮಾಡಿ ಟೀಕಿಸುವುದರಲ್ಲಿ ಅರ್ಥವಿಲ್ಲ
ಹಾಗ್ನೋಡಿದ್ರೆ, ಕರ್ನಾಟಕದಲ್ಲಿ ಪ್ರಾಥಮಿಕ ಶಿಕ್ಷಣ ಹಾಗೂ 8ನೇ 9ನೇ ತರಗತಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲಾಗಿದೆ. ಎಸ್ಎಸ್ಎಲ್ಸಿ ಪ್ರಮುಖ ಘಟ್ಟವಾಗಿರುವುದರಿಂದ ಈ ವಿಚಾರದಲ್ಲಿ ಸರ್ಕಾರ ಗಟ್ಟಿ ನಿರ್ಧಾರ ತೆಗೆದುಕೊಂಡಿದೆ. ಹಾಗಾಗಿ, ತೆಲಂಗಾಣ, ತಮಿಳುನಾಡು, ಆಂಧ್ರಪ್ರದೇಶದ ನಿರ್ಧಾರವನ್ನು ಹೋಲಿಕೆ ಮಾಡಿ ಕರ್ನಾಟಕ ಸರ್ಕಾರ ಹಾಗೂ ಶಿಕ್ಷಣ ಇಲಾಖೆಯನ್ನು ಟೀಕಿಸುವುದರಲ್ಲಿ ಅರ್ಥವಿಲ್ಲ.
ಮುಂದೂಡಬೇಕಿತ್ತು ಎಂಬ ಆಗ್ರಹ
ಪ್ರಸ್ತುತ ರಾಜ್ಯದಲ್ಲಿ ಕೊರೊನಾ ವೈರಸ್ ಕೇಸ್ಗಳು ಸಂಖ್ಯೆ ಉಲ್ಬಣವಾಗುತ್ತಿರುವುದರಿಂದ, ಎಸ್ಎಸ್ಎಲ್ಸಿ ಪರೀಕ್ಷೆ ಇನ್ನು ಸ್ವಲ್ಪ ದಿನಗಳವರೆಗೂ ಮುಂದೂಡಬೇಕಿತ್ತು ಎಂಬ ಅಭಿಪ್ರಾಯ ಬಲವಾಗಿದೆ. ಕೆಲವು ಪೋಷಕರ, ವಿಪಕ್ಷ ನಾಯಕರ ಆಗ್ರಹವೂ ಇದೆ ಆಗಿದೆ. ಒಂದು ವೇಳೆ ಪರೀಕ್ಷೆ ಬರೆಯುವ ಸಮಯದಲ್ಲಿ ಸ್ವಲ್ಪ ಹೆಚ್ಚು ಕಡಿಮೆ ಆದರೂ ವಿದ್ಯಾರ್ಥಿಗಳ ಜೀವ ಮತ್ತು ಜೀವನ ಅಪಾಯಕ್ಕೆ ಸಿಲುಕುವ ಸಾಧ್ಯತೆಯೇ ಹೆಚ್ಚು.