ಜೆಡಿಎಸ್ ಬಚಾವೋ ಸರ್ಜರಿಗೆ ಮುಂದಾದ ದೇವೇಗೌಡ
Recommended Video

ಬೆಂಗಳೂರು, ಸೆಪ್ಟೆಂಬರ್ 22: ಪಕ್ಷಕ್ಕೆ ಎದುರಾಗಿರುವ ರಾಜಕೀಯ ಬಿಕ್ಕಟ್ಟನ್ನು ಹೇಗೆ ಸಮರ್ಥವಾಗಿ ಎದುರಿಸಬೇಕು ಅನಾಯಾಸವಾಗಿ ಬಂದೊಲಿದ ಅಧಿಕಾರವನ್ನು ರಾಜ್ಯದ ಜನತೆಯ ಒಳಿತಿಗೆ ಹಾಗೂ ಪಕ್ಷದ ಬಲವರ್ಧನೆಗೆ ಸದುಪಯೋಗ ಮಾಡಿಕೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಶನಿವಾರ ಹಾಸನದಲ್ಲಿ ನಡೆಯುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕರಿಗೆ ಮನವರಿಕೆ ಮಾಡಲಿದ್ದಾರೆ.
ಆ ಮೂಲಕ ಆಪರೇಶನ್ ಕಮಲದ ಭೀತಿಯಲ್ಲಿರುವ ಜೆಡಿಎಸ್-ಕಾಂಗ್ರೆಸ್ ಮೈತ್ರಿಪಕ್ಷದ ಸಮ್ಮಿಶ್ರ ಸರ್ಕಾರವನ್ನು ದೀರ್ಘಕಾಲ ಮುನ್ನಡೆಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ದೇವೇಗೌಡರ ನೇರ ಪ್ರವೇಶ ಮಾಡಿದ್ದು, ಎಲ್ಲ 36 ಶಾಸಕರಿಗೆ ರಾಜಕೀಯ ರಣನೀತಿಯನ್ನು ಬೋಧನೆ ಮಾಡಲಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯೂ ಸೇರಿದಂತೆ ಪಕ್ಷದ ಎಲ್ಲ 36 ಶಾಸಕರಲ್ಲಿ ಆತ್ಮವಿಶ್ವಾಸ ವೃದ್ಧಿಸುವ ಪ್ರಯತ್ನ ಇದಾಗಿದ್ದು, ಈ ಮೂಲಕ ಅಧೈರ್ಯಗೊಂಡ ದಳಪಡೆಯನ್ನು ಪುನಶ್ಚೇತನಗೊಳಿಸಲು ಮುಂದಾಗಿದ್ದಾರೆ.
ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಸಚಿವ ಸಂಪುಟ ರಚನೆ, ಅಧಿಕಾರಿಗಳ ವರ್ಗಾವಣೆ, ಸಾಲ ಮನ್ನಾ ಯೋಜನೆಯಿಂದ ವಿವಿಧ ಇಲಾಖೆಗಳಿಗೆ ಅನುದಾನ ಕಡಿತ ಆಗಿರುವುದು ಸೇರಿದಂತೆ ನಾನಾ ಕಾರಣಗಳಿಗಾಗಿ ಅನಾಸಕ್ತಿ ತಾಳಿದ ಹಾಗೂ ಅಸಮಾಧಾನಗೊಂಡ ಜೆಡಿಎಸ್ ಶಾಸಕರನ್ನು ಈತನಕ ಪಕ್ಷದ ವರಿಷ್ಠರು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬ ಅಪವಾದ ಇತ್ತು. ಇದರ ನೇರ ಲಾಭವನ್ನು ಪಡೆಯಲು ಬಿಜೆಪಿ ಹಲವು ಮಾರ್ಗಗಳನ್ನು ಅನುಸರಿಸಲು ಮುಂದಾಗಿತ್ತು.

ಒಂದು ಹಂತದಲ್ಲಿ ಇದೆಲ್ಲವನ್ನೂ ಹಗುರವಾಗಿ ತೆಗೆದುಕೊಂಡಿದ್ದ ಸ್ವತಃ ಸಿಎಂ ಕುಮಾರಸ್ವಾಮಿ, ಸರ್ಕಾರ ಎಷ್ಟು ದಿನ ಇರುತ್ತದೋ ಗೊತ್ತಿಲ್ಲ ಎನ್ನುವ ಹಗುರ ಮಾತು ಆಡಿದ್ದರು. ಆದರೆ ಸರ್ಕಾರದ ಬೇರುಗಳು ಅಲ್ಲಾಡುತ್ತಿವೆ ಎಂಬುದು ಸಂಪೂರ್ಣ ಮನವರಿಕೆ ಆಗುತ್ತಿದ್ದಂತೆಯೇ ಎಲ್ಲ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮಾತು ಆರಂಭಿಸಿದ್ದರು.
ಇದೆಲ್ಲದರ ಪರಿಣಾಮವೇ ಶಾಸಕರು ಕಾಯಾ, ವಾಚಾ, ಮನಸಾ ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ತವರು ಜಿಲ್ಲೆ ಹಾಸನದಲ್ಲೇ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.ಜೆಡಿಎಲ್ಪಿ ಅಜೆಂಡಾ ಏನು?
ಪಕ್ಷ ಉಳಿದರೆ ನಾವು ಉಳಿಯುತ್ತೇವೆ ಎಂಬ ಸಂದೇಶ ರವಾನೆ ಮಾಡುವ ಮೂಲಕ ಆಪರೇಶನ್ ಕಮಲಕ್ಕೆ ಒಳಗಾಗದಂತೆ ಶಾಸಕರನ್ನು ಮನವೊಲಿಸುವುದು, ಅಕ್ಟೋಬರ್ 4ರಂದು ನಡೆಯುವ ವಿಧಾನ ಪರಿಷತ್ ಚುನಾವಣೆಗೆ ಪಕ್ಷದ ಅಭ್ಯರ್ಥಿ ಆಯ್ಕೆ ಮಾಡುವುದು.
ಚುನಾವಣೆಯಲ್ಲಿ ಒಮ್ಮತದಿಂದ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದು, ಮುಂಬರುವ ಲೋಕಸಭಾ ಚುನಾವಣೆಗೆ ಕಾರ್ಯತಂತ್ರ ರೂಪಿಸುವುದು, ಕುಮಾರಸ್ವಾಮಿ ಅವರ ಜನಪ್ರಿಯ ಯೋಜನೆಗಳನ್ನು ಜನರಿಗೆ ಹೇಗೆ ಮನದಟ್ಟು ಮಾಡಬೇಕು ಎಂಬುದನ್ನು ಸಾರುವುದು, ಶಾಸಕರ ವೈಯಕ್ತಿಕ ನಿರೀಕ್ಷೆಗಳು.
ಸರ್ಕಾರದಿಂದ ಬಯಸುವ ಯೋಜನೆಗಳಿಗೆ ಸಚಿವರು ಕೂಡಲೆ ಪ್ರತಿಸ್ಪಂದನೆ ಮಾಡುವಂತೆ ತಿಳಿವಳಿಕೆ ನೀಡುವುದು, ಎಲ್ಲಕ್ಕಿಂತ ಹೆಚ್ಚಾಗಿ ಸರ್ಕಾರ ಮತ್ತು ಪಕ್ಷದ ಘನತೆಗೆ ಯಾವುದೇ ಧಕ್ಕೆ ಬಾರದಂತೆ ಕೆಲಸ ಮಾಡಲು ಪ್ರೇರೇಪಿಸುವುದು.












Click it and Unblock the Notifications