ಮುಗಿಯುತ್ತಿಲ್ಲ ಫುಡ್ ಸ್ಟ್ರೀಟ್ ಕಾಮಗಾರಿ; ವ್ಯಾಪಾರಿಗಳು ಕಂಗಾಲು
ಬೆಂಗಳೂರು, ಸೆಪ್ಟೆಂಬರ್ 12; ಪ್ರತಿದಿನ ಸಾವಿರಾರು ಜನರು ಭೇಟಿ ನೀಡುವ, ಲಕ್ಷಾಂತರ ರೂಪಾಯಿ ವಹಿವಾಟು ನಡೆಯುವ ಹಳೆಯ ಬೆಂಗಳೂರಿನ ಪ್ರಮುಖ ಪ್ರದೇಶ ವಿವಿ ಪುರಂ ಫುಡ್ ಸ್ಟ್ರೀಟ್. ಆದರೆ ಬಿಬಿಎಂಪಿ ಕೈಗೊಂಡ ಕಾಮಗಾರಿಯ ಕಾರಣ ಇಲ್ಲಿನ ವ್ಯಾಪಾರಿಗಳು ನಷ್ಟ ಅನುಭವಿಸುತ್ತಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕರ್ಮರ್ಷಿಯಲ್ ಸ್ಟ್ರೀಟ್, ಚರ್ಚ್ ಸ್ಟ್ರೀಟ್ ಮಾದರಿಯಲ್ಲಿ ಫುಡ್ ಸ್ಟ್ರೀಟ್ ಹೈಟೆಕ್ ಮಾಡುವ ಕಾಮಗಾರಿ ಕೈಗೊಂಡಿದೆ. ಈ ಕಾಮಗಾರಿ ಪೂರ್ಣಗೊಳಿಸಲು ಹಾಕಿಕೊಂಡ ಗಡುವು ಮುಂದೆ ಹೋಗುತ್ತಲೇ ಇದೆ. ಆದರೆ ಕಾಮಗಾರಿ ಮಾತ್ರ ಅಂತಿಮವಾಗಿಲ್ಲ.

'ತಿಂಡಿ ಬೀದಿ' ಎಂದು ಕರೆಯಲಾಗುವ ಫುಡ್ ಸ್ಟ್ರೀಟ್ನಲ್ಲಿ ಸಂಜೆ 4 ಗಂಟೆಯ ಬಳಿಕ ಸಾವಿರಾರು ಜನರು ಸೇರುತ್ತಿದ್ದರು. ವಿವಿಧ ಖಾದ್ಯಗಳನ್ನು ಸವಿಯುತ್ತಿದ್ದರು. ವಾರಾಂತ್ಯದಲ್ಲಿ ಫುಡ್ ಸ್ಟ್ರೀಟ್ ತುಂಬಿ ತುಳುಕುತ್ತಿತ್ತು. ಆದರೆ ಈಗ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ.
ಏನಿದು ಕಾಮಗಾರಿ?; ಫುಡ್ ಸ್ಟ್ರೀಟ್ ಹೈಟೆಕ್ ಮಾಡುವ ಸುಮಾರು 6 ಕೋಟಿ ರೂ. ಮೊತ್ತದ ಕಾಮಗಾರಿಯನ್ನು ಬಿಬಿಎಂಪಿ ಕೈಗೊಂಡಿದೆ. ರಸ್ತೆಯನ್ನು ಅಗಲಗೊಳಿಸುವುದು, ಪಾದಚಾರಿ ಮಾರ್ಗ ನಿರ್ಮಾಣ, ಪ್ರತಿ ಅಂಗಡಿಗೆ ಕೈ ತೊಳೆಯುವ ನೀರು ಸೌಲಭ್ಯ, ಕುಳಿತು ತಿಂಡಿ ತಿನ್ನುವಂತೆ ಮಾಡುವ ವ್ಯವಸ್ಥೆ ಹೀಗೆ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ.
ಅಂದುಕೊಂಡ ಗುರಿಯ ಪ್ರಕಾರ ಈ ಕಾಮಗಾರಿ 2022ರ ಡಿಸೆಂಬರ್ನಲ್ಲಿ ಪೂರ್ಣಗೊಳ್ಳಬೇಕಿತ್ತು. ಆದರೆ ವಿಧಾನಸಭೆ ಚುನಾವಣೆಯ ನೆಪ ಹೇಳಿ 2023ರ ಮೇ ತಿಂಗಳ ಗಡುವು ಕೊಡಲಾಯಿತು. ಬಳಿಕ ಅದು ಜುಲೈ 15ಕ್ಕೆ ಮುಂದಕ್ಕೆ ಹೋಯಿತು. ಈಗ ಸೆಪ್ಟೆಂಬರ್ 15 ಬಂದರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದಾಗಿ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ವಿವಿಧ ಕಾಮಗಾರಿಯ ಕಾರಣ ಫುಡ್ ಸ್ಟ್ರೀಟ್ನಲ್ಲಿ ಧೂಳು ತುಂಬಿದೆ. ರಸ್ತೆಯಲ್ಲಿ ನಿರ್ಮಾಣ ಸಾಮಾಗ್ರಿಗಳಿದ್ದು ಸರಾಗವಾಗಿ ಓಡಾಡಲು ಸಹ ತೊಂದರೆ ಇದೆ. ಪಾರ್ಕಿಂಗ್ ಸಮಸ್ಯೆ ಇದೆ. ಆದ್ದರಿಂದ ಯಾವಾಗಲೂ ಬರುತ್ತಿದ್ದ ಗ್ರಾಹಕರು ಇತ್ತ ಸುಳಿಯುತ್ತಿಲ್ಲ ಎಂಬುದು ವ್ಯಾಪಾರಿಗಳ ಆರೋಪವಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು 15 ದಿನ ಕೊಡಿ ಎಲ್ಲಾ ಕಾಮಗಾರಿ ಪೂರ್ಣಗೊಳಿಸುತ್ತೆವೆ ಎಂದು ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಕಾಮಗಾರಿಗಳು ಅಂತಿಮ ಹಂತದಲ್ಲಿವೆ. ಫುಟ್ಪಾತ್ ಅಭಿವೃದ್ಧಿ ಸೇರಿದಂತೆ ಕೆಲ ಕಾಮಗಾರಿ ಮಾತ್ರ ಬಾಕಿ ಇದೆ. ಗುತ್ತಿಗೆದಾರರು ಕೆಲವು ದಿನ ಕಾಮಗಾರಿ ನಿಲ್ಲಿಸಿದ ಕಾರಣ ತಡವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಜ್ಜನ್ ರಾವ್ ವೃತ್ತದಿಂದ ಮಿನರ್ವ ಸರ್ಕಲ್ ತನಕ ಫುಡ್ ಸ್ಟ್ರೀಟ್ನಲ್ಲಿ ಸುಮಾರು 40ಕ್ಕೂ ಹೆಚ್ಚು ಆಹಾರ ಮಳಿಗೆಗಳಿವೆ. ಇಲ್ಲಿ ಜನರ ಅನುಕೂಲಕ್ಕಾಗಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಆದರೆ ಈ ಕಾಮಗಾರಿಗಳು ಪೂರ್ಣಗೊಳ್ಳಲು ಎಷ್ಟು ದಿನ ಬೇಕು? ಎಂಬುದು ವ್ಯಾಪಾರಿಗಳ ಪ್ರಶ್ನೆಯಾಗಿದೆ.
ಫುಡ್ ಸ್ಟ್ರೀಟ್ನಲ್ಲಿ ನಡೆಯುತ್ತಿರುವ ಕಾಮಗಾರಿ ಹಿನ್ನಲೆಯಲ್ಲಿ ಸಂಜೆ 6 ಗಂಟೆಯ ಬಳಿಕ ಅಂಗಡಿಗಳನ್ನು ಓಪನ್ ಮಾಡಲು ಅವಕಾಶ ನೀಡಲಾಗಿದೆ. ಇಲ್ಲವಾದಲ್ಲಿ ಸಂಜೆ 4 ಗಂಟೆಗೆ ಅಂಗಡಿಗಳು ತೆರೆಯುತ್ತಿದ್ದವು. ಈಗ ಒಂದು ಕಡೆ ಜನರು ಕಡಿಮೆ, ವ್ಯಾಪಾರದ ಸಮಯವು ಕಡಿಮೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ದಕ್ಷಿಣ ವಲಯದ ಆಯಕ್ತ ಜಯರಾಮ್ ರಾಯಪುರ ಕೆಲವು ದಿನಗಳ ಹಿಂದೆ ಫುಡ್ ಸ್ಟ್ರೀಟ್ನಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದ್ದರು. ಬಳಿಕ ಮಾತನಾಡಿದ್ದ ಅವರು, "ಫುಡ್ ಸ್ಟ್ರೀಟ್ನಲ್ಲಿ ಮೂಲ ಸೌಕರ್ಯ ಒದಗಿಸುವ ಮತ್ತು ಹೆಚ್ಚು ಜನರನ್ನು ಆಕರ್ಷಿಸಲು ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ" ಎಂದು ಹೇಳಿದ್ದರು.
"ಸುಮಾರು 200 ಮೀಟರ್ ರಸ್ತೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತಿದೆ. ಒಳಚರಂಡಿ ಸಂಪರ್ಕ, ನೀರು ಸಂಪರ್ಕ, ಮಳೆ ನೀರು ಕಾಲುವೆ, ಕೇಬಲ್ ಲೈನ್ ಡಕ್ಟ್ಗಳ ಚೇಂಬರ್ಗೆ ಸಂಬಂಧಿಸಿದ ಕಾಮಗಾರಿ ಪೂರ್ಣಗೊಂಡಿದೆ" ಎಂದು ತಿಳಿಸಿದ್ದರು.












Click it and Unblock the Notifications