ವಿಧಾನಸೌಧದಲ್ಲೇ ಕೋಟಿ ಕೋಟಿ ಹಣದ ಕರ್ಮಕಾಂಡ!
ಬೆಂಗಳೂರು, ಅಕ್ಟೋಬರ್ 23: ಪ್ರಜಾಪ್ರಭುತ್ವದ ಗರ್ಭಗುಡಿಯಾದ ವಿಧಾನಸೌಧದ ಆವರಣದಲ್ಲಿ ಸಿಕ್ಕಿಬಿದ್ದಿರುವ ವಕೀಲರೊಬ್ಬರ ಕಾರಿನಲ್ಲಿದ್ದ ಕೋಟ್ಯಾಂತರ ರೂಪಾಯಿ ಹಣವು, ಸರ್ಕಾರದ ಅವ್ಯವಹಾರದ ಪ್ರತೀಕವಾಗಿದೆ. ತನ್ನ ಆಡಳಿತದ ಕೊನೆಯ ದಿನಗಳಲ್ಲಿ ಯಾವ ರೀತಿಯ ಆರ್ಥಿಕ ಅಂಧಾಧುಂಭಿ ಲಂಚಬಾಕತನಗಳಲ್ಲಿ ಮುಳುಗಿದೆ ಎಂಬುದರ ನೈಜ ದರ್ಶನವಾಗಿದೆ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಸರ್ಕಾರದ ಶಕ್ತಿ ಕೇಂದ್ರದ ಒಳಗೇ ಇಂತಹ ಲೆಕ್ಕಕ್ಕೆ ಸಿಗದ ಕೋಟ್ಯಾಂತರ ರೂಪಾಯಿಗಳ ಆರ್ಥಿಕ ಚಟುವಟಿಕೆಗಳಿಂದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ತನ್ನ ಆಡಳಿತದ ಕೊನೆಯ ಮೊಳೆಯನ್ನು ಹೊಡೆದುಕೊಳ್ಳುತ್ತಿದೆ. ಇಂತಹ ಅನೈತಿಕ ಚಟುವಟಿಕೆಗಳು ರಾಜ್ಯದ ವಿಧಾನಸಭೆಯಲ್ಲಿ ನಡೆಯುತ್ತಿದೆ ಎಂಬದೇ ರಾಜ್ಯದ ಜನತೆಗೆ ದೊಡ್ಡ ಆಘಾತದ ಸಂಗತಿಯಾಗಿದೆ. [ವಿಧಾನಸೌಧಕ್ಕೆ ಬಂದ ಕಾರಿನಲ್ಲಿ 2.5 ಕೋಟಿ, ಸಚಿವರಿಗೆ ದಕ್ಷಿಣೆ ಕಾಸಾ?]

ರಾಜ್ಯ ಸರ್ಕಾರದ, ಅದರಲ್ಲೂ ಗೃಹ ಇಲಾಖೆಯಂತಹ ಪ್ರಭಾವಿ ಇಲಾಖೆಯ ಪೊಲೀಸ್ ದೂರು ಪ್ರಾಧಿಕಾರದ ಅಧ್ಯಕ್ಷರ ಅಳಿಯನ ಕಾರಿನಲ್ಲಿ ಈ ಮಟ್ಟದ ಹಣ ಪತ್ತೆಯಾಗಿರುವುದು, ಅದು ಮಂತ್ರಿಯೊಬ್ಬರಿಗೆ ಭೂ ವ್ಯವಹಾರಕ್ಕಾಗಿ ನೀಡಲು ತಂದಿದ್ದ ಲಂಚ ಎಂಬ ಮಾತುಗಳು, ರಾಜ್ಯದಲ್ಲಿನ ಪ್ರಜಾಪ್ರಭುತ್ವದ ಅಸ್ಥಿತ್ವತೆಯನ್ನೇ ಪ್ರಶ್ನಿಸುವಂತಿದೆ.
ಈ ಅಕ್ರಮ ಹಣವು, ಬಿಜೆಪಿಯ ಬ್ರಹ್ಮಾಂಡ ಭ್ರಷ್ಟಾಚಾರದಿಂದ ಬೇಸೆತ್ತು, ಸಮಾಜವಾದಿ ಎಂದು ಮಾನ್ಯ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿ ಕಳುಹಿಸಿದ್ದ ರಾಜ್ಯದ ಜನರ ಮುಖಕ್ಕೆ ಮಸಿ ಬಳಿಯುವ, ಅತ್ಯಂತ ನಾಚಿಕೆಗೇಡಿನ ವಿಷಯವಾಗಿದೆ.
ಇದೀಗ ವಯಕ್ತಿಕ ಹಿತಾಸಕ್ತಿಗಳು ಈಗಾಗಲೇ ಇಡೀ ಪ್ರಕರಣದಲ್ಲಿ ಕೈಹಾಕಿದ್ದು, ಸಿಕ್ಕಿಬಿದ್ದಿರುವ ಒಬ್ಬ ಕಳ್ಳ ಇನ್ನೊಬ್ಬ ಕಳ್ಳನ ಹೆಸರನ್ನು ಬಾಯಿ ಬಿಡದಂತೆ ಮಾಡಲು ಕಾಟಾಚಾರದ ಪ್ರಕರಣಗಳನ್ನು ದಾಖಲಿಸಿ ಇಡೀ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಸಲಾಗುತ್ತಿದೆ.
ಈ ಕಾಂಗ್ರೆಸ್ ಸರ್ಕಾರಕ್ಕೆ ಇನ್ನಾದರೂ ಕಿಂಚಿತ್ತು ಜನಸೇವೆ ಮಾಡುವ ಮನಸ್ಸಿದ್ದರೆ, ಈ ಕೂಡಲೇ ಉನ್ನತ ಮಟ್ಟದ ತನಿಖಾ ತಂಡವನ್ನು ರಚಿಸಿ, ಈ ಅಕ್ರಮದಲ್ಲಿ ಭಾಗಿಯಾಗಿರುವ ಮಂತ್ರಿ ಮಹೋದಯರು ಹಾಗೂ ಪ್ರಭಾವಿ ಅಧಿಕಾರಿಗಳ ಭ್ರಷ್ಟತೆಯನ್ನು ಬಯಲುಗೊಳಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.












Click it and Unblock the Notifications