ಡಿನೋಟಿಫಿಕೇಷನ್ ಕೇಸ್ : ಎಚ್ಡಿ ರೇವಣ್ಣಗೆ ಹಿನ್ನಡೆ
ಬೆಂಗಳೂರು, ಜು.3: 'ಡಿನೋಟಿಫಿಕೇಶನ್ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ. ಅನಗತ್ಯವಾಗಿ ತಮ್ಮನ್ನು ಸಿಲುಕಿಸಿದ್ದಾರೆ. ಹಾಗಾಗಿ ಲೋಕಾಯುಕ್ತದಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಪಡಿಸಬೇಕು' ಎಂದು ಅಕ್ರಮ ಡಿನೋಟಿಫಿಕೇಶನ್ ಪ್ರಕರಣ ರದ್ದುಪಡಿಸುವಂತೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರು ಹೈಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿ ವಜಾಗೊಂಡಿದೆ.
ಉತ್ತರಹಳ್ಳಿ ಹೋಬಳಿ ಬಳಿ ಇರುವ 10.17 ಎಕರೆ ಜಾಗವನ್ನು 2005ರ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಮುಖ್ಯಮಂತ್ರಿ ಧರಂಸಿಂಗ್ ಡಿನೋಟಿಫೈ ಮಾಡಿದ್ದರು. ಅದೇ ಸಮಯದಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಎಚ್. ಡಿ. ರೇವಣ್ಣ 2.20 ಎಕರೆ ಜಾಗವನ್ನು ಅತ್ತಿಗೆ ಕವಿತಾ ಬಾಲಕೃಷ್ಣ ಅವರಿಗೆ ನೋಂದಣಿ ಮಾಡಿಸಿದ್ದಾರೆ ಎಂದು ರಾಯಸಂದ್ರ ರವಿ ಅಲಿಯಾಸ್ ರವಿಕುಮಾರ್ ಎಂಬುವರು ದೂರು ನೀಡಿದ್ದರು.
ಕಾನೂನು ಬಾಹಿರವಾಗಿ ಈ ಜಾಗವನ್ನು ಕುಟುಂಬದವರಿಗೆ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿ ರವಿಕುಮಾರ್ ಎಂಬುವರು ಲೋಕಾಯುಕ್ತದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಧರಂಸಿಂಗ್, ಕವಿತಾ ಬಾಲಕೃಷ್ಣ ಹಾಗೂ ಎಚ್. ಡಿ. ರೇವಣ್ಣ ಸೇರಿ 13 ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಆದೇಶಿಸಲಾಗಿತ್ತು.

ಲೋಕಾಯುಕ್ತ ಕೋರ್ಟಿನಲ್ಲಿ ನಡೆಯುತ್ತಿರುವ ವಿಚಾರಣೆಗೆ ತಡೆಯಾಜ್ಞೆ ನೀಡುವಂತೆ ಈ ಹಿಂದೆ ಎಚ್. ಡಿ. ರೇವಣ್ಣ ಹೈಕೋರ್ಟ್ ಮೆಟ್ಟಲೇರಿದ್ದರು. ಅರ್ಜಿ ಪುರಸ್ಕರಿಸಿದ ನ್ಯಾಯಾಲಯ ಮಧ್ಯಂತರ ಆದೇಶದಲ್ಲಿ ವಿಚಾರಣೆಗೆ ತಡೆಯಾಜ್ಞೆ ನೀಡಿತು.
ದೂರು ರದ್ದುಪಡಿಸುವಂತೆ ಕೋರಿದ ಅರ್ಜಿ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಬುಧವಾರ ಅರ್ಜಿ ವಜಾಗೊಳಿಸಿದೆ. ಅರ್ಜಿ ವಜಾಗೊಂಡ ಹಿನ್ನೆಲೆಯಲ್ಲಿ ವಿಚಾರಣೆಗೆ ತಡೆಯಾಜ್ಞೆ ನೀಡಿದ್ದ ಆದೇಶ ತೆರವುಗೊಂಡಿದ್ದು ಲೋಕಾಯುಕ್ತ ಕೋರ್ಟ್ನಲ್ಲಿ ವಿಚಾರಣೆ ಮುಂದುವರಿಯಲಿದೆ.
ಆರೋಪವೇನು?: ಈ ದೂರಿನ ಪ್ರಕಾರ ಭೂಮಿಯನ್ನು ಬಿಡಿಎ 1996ರಲ್ಲಿಯೇ ನೋಟಿಫೈ ಮಾಡಲಾಗಿತ್ತು. ಆದರೆ, ಧರಂಸಿಂಗ್ ಆಡಳಿತಾವಧಿಯಲ್ಲಿ ಈ ಭೂಮಿಯನ್ನು ಅಂದಿನ ಲೋಕೋಪಯೋಗಿ ಸಚಿವ ರೇವಣ್ಣ ಅವರ ಆದೇಶದ ಮೇರೆಗೆ 10 ಎಕರೆ 17 ಗುಂಟೆ ಭೂಮಿಯನ್ನು ಡಿನೋಟಿಫೈ ಮಾಡಲಾಗಿದೆ. ಡಿನೋಟಿಫೈ ಆಗಿ ಎರಡು ತಿಂಗಳಲ್ಲೇ ಈ ಭೂಮಿಯನ್ನು ಕವಿತಾ ಎಂಬ ಹೆಸರಿನಲ್ಲಿ ಖರೀದಿಸಲಾಗಿದ್ದು, ಇದರಲ್ಲಿ 2.11 ಎಕರೆ ಪ್ರದೇಶವನ್ನು ಖಾಸಗಿ ರಿಯಲ್ ಎಸ್ಟೇಟ್ ಕಂಪನಿಗೆ 3.5 ಕೋಟಿ ರು ಲಾಭದೊಂದಿಗೆ ಮಾರಾಟ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications