ರಾಜೀನಾಮೆ ಸ್ವೀಕರಿಸಿ, ಇಲ್ಲವೆ ಕಾನೂನು ಕ್ರಮ ಎದುರಿಸಿ: ಉಮೇಶ್ ಜಾಧವ್
ಬೆಂಗಳೂರು, ಮಾರ್ಚ್ 14: ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಉಮೇಶ್ ಜಾಧವ್ ಅವರ ರಾಜೀನಾಮೆ ಇನ್ನೂ ಅಂಗೀಕಾರಗೊಂಡಿಲ್ಲ.
ಉಮೇಶ್ ಜಾಧವ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸರ್ವ ತಯಾರಿ ಮಾಡಿಕೊಂಡಿದ್ದು, ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆ ಇನ್ನೂ ಅಂಗೀಕಾರ ಆಗಿಲ್ಲದಿರುವುದು ಅವರಿಗೆ ಆತಂಕ ತಂದಿದೆ.
ನನ್ನ ರಾಜೀನಾಮೆ ಅಂಗೀಕಾರವನ್ನು ಉದ್ದೇಶಪೂರ್ವಕವಾಗಿ ತಡೆಹಿಡಿದಿರುವ ಸಾಧ್ಯದೆ ಇದ್ದು, ಅದೊಂದು ವೇಳೆ ಸತ್ಯವಾಗಿದ್ದರೆ ನಾನೂ ಕಾನೂನು ಹೋರಾಟಕ್ಕೆ ಮುಂದಾಗುತ್ತೇನೆ ಎಂದು ಉಮೇಶ್ ಜಾಧವ್ ಹೇಳಿದ್ದಾರೆ.

ಉಮೇಶ್ ಜಾಧವ್ ಅವರು ಕಲಬುರಗಿ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ವಿರುದ್ಧವಾಗಿ ಬಿಜೆಪಿಯಿಂದ ಲೋಕಸಭೆ ಚುನಾವಣೆಗೆ ಕಣಕ್ಕೆ ಇಳಿಯಲಿದ್ದು, ರಾಜೀನಾಮೆ ಅಂಗೀಕಾರವಾಗದೆ ಸಭಾಧ್ಯಕ್ಷರು ಉಮೇಶ್ ಜಾಧವ್ ವಿರುದ್ಧ ವಿಚಾರಣೆ ಅಥವಾ ಅವರ ಶಾಸಕತ್ವ ರದ್ದು ಮಾಡಿದರೆ ಜಾಧವ್ ಅವರಿಗೆ ಸಮಸ್ಯೆ ಆಗಲಿದೆ.
ಉಮೇಶ್ ಜಾಧವ್ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕಾಂಗ್ರೆಸ್ ಪಕ್ಷವು ದೂರು ದಾಖಲಿಸಿತ್ತು. ದೂರು ದಾಖಲಿಸಿದ ಕೆಲವು ದಿನಗಳ ನಂತರ ಜಾಧವ್ ರಾಜೀನಾಮೆ ನೀಡಿದ್ದರು. ರಾಜೀನಾಮೆ ಅಂಗೀಕಾರ ಮಾಡದ ಸ್ಪೀಕರ್ ಅವರು ಇದೇ ತಿಂಗಳ 12ರಂದು ಅವರನ್ನು ವಿಚಾರಣೆಗೆ ಕರೆದಿದ್ದರು. ಆದರೆ ಚುನಾವಣೆ ನೀತಿ ಸಂಹಿತೆ ಘೋಷಣೆ ಆದ ಕಾರಣ ವಿಚಾರಣೆ ಮುಂದೂಡಲಾಯಿತು.
ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಅಂಗೀಕಾರ ಆಗದಿದ್ದರೂ ಸಹ ಜಾಧವ್ ಅವರು ಲೋಕಸಭೆ ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಆದರೆ ಪಕ್ಷಾಂತರ ನಿಷೇಧದ ಅನ್ವಯ ಶಿಕ್ಷೆಯಾದರೆ ಅವರು ಗೆದ್ದ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ. ಆರು ವರ್ಷ ಯಾವುದೇ ಚುನಾವಣೆಯನ್ನೂ ಎದುರಿಸಲು ಸಾಧ್ಯವಾಗುವುದಿಲ್ಲ.












Click it and Unblock the Notifications