ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್
ಬೆಂಗಳೂರು, ನವೆಂಬರ್ 20 : ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಗಣಪತಿ ಅವರದ್ದು ಆತ್ಮಹತ್ಯೆಯೊ ಅಥವಾ ಕೊಲೆಯೊ ಎಂಬ ಬಗ್ಗೆ ಅನುಮಾನಗಳು ಏಳತೊಡಗಿವೆ.
ಗಣಪತಿ ಅವರ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯೆ ಡಾ.ಶೈಲಜಾ ಅವರು ಸಿಬಿಐ ಅಧಿಕಾರಿಗಳ ಎದುರು ಸ್ಪೋಟಕ ಮಾಹಿತಿ ಹೊರಹಾಕಿದ್ದು, ಗಣಪತಿ ಅವರ ಆತ್ಮಹತ್ಯೆಯ ಹಿಂದೆ ಕಾಣದ ಕೈಗಳು ಕೆಲಸ ಮಾಡಿರುವ ಅನುಮಾನವನ್ನು ದಟ್ಟವಾಗಿಸಿವೆ.

'ಗಣಪತಿ ಅವರ ಮರಣೋತ್ತರ ಪರೀಕ್ಷೆ ನಡೆಸಿದಾಗ ಆತ್ಮಹತ್ಯೆ ಪ್ರಕರಣವೆಂದು ವರದಿ ನೀಡುವಂತೆ ಒತ್ತಡ ಇತ್ತು' ಎಂದು ಶೈಲಜಾ ಅವರು ಸಿಬಿಐ ಮುಂದೆ ಹೇಳಿಕೆ ನೀಡಿದ್ದಾರೆ.
ಶೈಲಜಾ ಅವರ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಒತ್ತಡ ತಂದಿದ್ದ ಕಾಣದ ಕೈ ಕೆ.ಜೆ.ಜಾರ್ಜ್ ಇರಬಹುದೇ ಎಂದು ಊಹಿಸಲಾಗುತ್ತಿದೆ. ಸಿಬಿಐ ಜಾರ್ಜ್ ಅವರ ಮೇಲೆ ಎಫ್ಐಆರ್ ಕೂಡ ಹಾಕಿರುವುದು ಊಹೆಗೆ ಇನ್ನಷ್ಟು ಪುಷ್ಠಿ ನೀಡಿದೆ.
ಅಧಿವೇಶನದಲ್ಲಿ ಪ್ರತಿಧ್ವನಿ
ಭೋಜನ ವಿರಾಮದ ನಂತರ ಕಲಾಪ ಆರಂಭವಾದ ಕೂಡಲೇ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು ಡಿವೈಎಸ್ಪಿ ಆತ್ಮಹತ್ಯೆ ಪ್ರಕರಣ ತನಿಖೆಯಲ್ಲಾದ ಬೆಳವಣಿಗೆಯನ್ನು ಪ್ರಸ್ತಾಪಿಸಿ ಗದ್ದಲ ಎಬ್ಬಿಸಿದರು.
"ನಾವು ಪದೇ ಪದೇ ಹೇಳುತ್ತಿದ್ದೆವು ಇದು ಆತ್ಮಹತ್ಯೆ ಅಲ್ಲ ಕೊಲೆ ಎಂದು ಆದರೆ ಸರ್ಕಾರ ಸಮರ್ಥನೆ ಮಾಡುತ್ತಲೇ ಬಂದಿತು' ಎಂದು ಅವರು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಈ ಕೂಡಲೇ ಮುಖ್ಯಮಂತ್ರಿಗಳು ರಾಜಿನಾಮೆ ಕೊಡಬೇಕು ಇದರಲ್ಲಿ ಮುಖ್ಯಮಂತ್ರಿಗಳದ್ದೂ ಪಾಲಿದೆ ಎಂದು ಜಗದೀಶ್ ಶೆಟ್ಟರ್ ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಗೃಹಮಂತ್ರ ರಾಮಲಿಂಗಾ ರೆಡ್ಡಿ 'ಮಾಧ್ಯಮಗಳಲ್ಲಿ ಬಂದ ಮಾತ್ರಕ್ಕೆ ನಿಜ ಅಲ್ಲ. ತನಿಖೆ ನಡೆಯುತ್ತಿದೆ, ತನಿಖೆ ಮುಗಿಯಲಿ' ಎಂದರು. ಆದರೆ ಪಟ್ಟು ಸಡಿಲಿಸದ ವಿಪಕ್ಷ ಸದನದ ಬಾವಿಗಿಳಿದು ಪ್ರತಿಭಟನೆ ಪ್ರಾರಂಭಿಸಿದರು.












Click it and Unblock the Notifications