ಬೆಂಗಳೂರಲ್ಲಿ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್ ನಿರ್ಮಾಣಕ್ಕೆ ಮುಂದಾದ ಬಿಟಿಪಿ- ನಮ್ಮ ಮೆಟ್ರೋ
ಬೆಂಗಳೂರು, ನವೆಂಬರ್ 06: ಬೆಂಗಳೂರು ಟ್ರಾಫಿಕ್ ಪೊಲೀಸ್ ಮತ್ತು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (ಬಿಎಂಆರ್ಸಿಎಲ್) ಬೆಂಗಳೂರಿನಲ್ಲಿ ಮತ್ತೆ ಪ್ರಿಪೇಯ್ಡ್ ಆಟೋರಿಕ್ಷಾ ಕೌಂಟರ್ (ಸ್ಟಾಂಡ್) ಸ್ಥಾಪಿಸಲು ಮುಂದಾಗಿವೆ.
ನಗರದ ಎಚ್ಎಸ್ಆರ್ ಲೇಔಟ್ ಮತ್ತು ಕೆ.ಆರ್ ಮಾರುಕಟ್ಟೆಯಂತಹ ಹಲವಾರು ಸ್ಥಳಗಳಲ್ಲಿ ಪ್ರಿಪೇಯ್ಡ್ ಆಟೋ ಕೌಂಟರ್ಗಳಿಗಾಗಿ ಸಂಚಾರ ಪೊಲೀಸರು ಹೊಂದಿಸಿರುವ ಕಿಯೋಸ್ಕ್ಗಳು ಸ್ಥಗಿತವಾಗಿವೆ. ನಾಗಸಂದ್ರ ಇನ್ನಿತರ ಮೆಟ್ರೋ ನಿಲ್ದಾಣ ಸುತ್ತಮುತ್ತ ಆಟೋ ಚಾಲಕರು ಕೇವಲ 2ರಿಂದ 3 ಕಿ.ಮೀ. ಪ್ರಯಾಣಕ್ಕೆ 80-100 ಪಡೆಯುತ್ತಾರೆ. ಇದೆಲ್ಲ ಮನಗಂಡು ಬಿಎಂಆರ್ಸಿಎಲ್ ಮತ್ತು ಟ್ರಾಫಿಕ್ ಪೊಲೀಸರು ನಗರದ ವಾಣಿಜ್ಯ ಪ್ರದೇಶಗಳು, ಮೆಟ್ರೋ ನಿಲ್ದಾಣ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಪ್ರಿಪೇಯ್ಡ ಆಟೋ ಕೌಂಟರ್ ತೆರೆಯಲಿದ್ದಾರೆ.
Namma Metro: 2023ಕ್ಕೆ ಸಂಚಾರ ಸಂಪರ್ಕ ಇನ್ನೂ ಸರಳ, ಈ ಮೆಟ್ರೋ ವಿಸ್ತರಣೆ ಮಾರ್ಗಗಳು ಪೂರ್ಣ
ಮುಂದಿನ ಎರಡು ವಾರಗಳಲ್ಲಿ ನಾಗಸಂದ್ರದಲ್ಲಿ ತಲಾ ಎರಡು, ಬೈಯಪ್ಪನಹಳ್ಳಿ, ಬನಶಂಕರಿ ಮತ್ತು ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ತಲಾ ಒಂದು ಕೌಂಟರ್ ಸ್ಥಾಪಿಸಲಾಗುವುದು. ನಾಲ್ಕು ನಿಲ್ದಾಣಗಳಲ್ಲಿ ಬೆಳಗ್ಗೆ 5ಗಂಟೆಯಿಂದ ಆಟೋ ಸೇವೆ ಲಭ್ಯವಿರುತ್ತವೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ನಗರದ ಎಂ.ಜಿ ರಸ್ತೆ ಮತ್ತು ಮೆಜೆಸ್ಟಿಕ್ನಲ್ಲಿ ನಾವು ಈಗಾಗಲೇ ಪ್ರಿಪೇಯ್ಡ್ ಆಟೋ ಕೌಂಟರ್ಗಳನ್ನು ಪುನರಾರಂಭಿಸಿದ್ದೇವೆ. ಮುಂದಿನ ಹಂತಗಳಲ್ಲಿ ಕಮರ್ಷಿಯಲ್ ಸ್ಟ್ರೀಟ್, ಫೋರಂ ಮಾಲ್ ಮತ್ತು ಜಯನಗರದಲ್ಲಿ ಕಿಯೋಸ್ಕ್ಗಳನ್ನು ಮತ್ತೆ ತೆರೆಯುತ್ತೇವೆ ಎಂದು ವಿಶೇಷ ಪೊಲೀಸ್ ಆಯುಕ್ತ (ಸಂಚಾರ) ಎಂ.ಎ.ಸಲೀಂ ಹೇಳಿದರು.
ಇದೇ ತಿಂಗಳ ನಾಲ್ಕು ಕೌಂಟರ್ ಸ್ಥಾಪನೆ
ಫ್ರಿಪೇಯ್ಡ್ ಆಟೋ ಸೇವೆಗೆ ಪೂರಕವಾಗಿ ಸಾಫ್ಟ್ವೇರ್ ತಯಾರಿಸಲಾಗಿದೆ. ಒಂದು ಕಡೆ ಕೌಂಟರ್ ನಿರ್ಮಾಣದ ಕೆಲವು ಪೂರ್ಣಗೊಂಡಿದೆ. ಈ ತಿಂಗಳು ನಾಲ್ಕು ನಿಲ್ದಾಣಗಳಲ್ಲಿ ಪ್ರಿಪೇಯ್ಡ್ ಕೌಂಟರ್ಗಳನ್ನು ಸ್ಥಾಪಿಸಲಿದ್ದೇವೆ. ಮೆಟ್ರೋ ನಿಲ್ದಾಣಗಳಲ್ಲಿ, ಬಿಎಂಆರ್ಸಿಎಲ್ ಗೃಹರಕ್ಷಕರು ಮುಂಜಾನೆ 5 ಗಂಟೆಯಿಂದ ಪ್ರಿಪೇಯ್ಡ್ ಕೌಂಟರ್ಗಳಲ್ಲಿ ಕೆಲಸ ಮಾಡುತ್ತಾರೆ. ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಟ್ರಾಫಿಕ್ ಪೊಲೀಸರು ಗಂಟೆಗೆ ಒಮ್ಮೆ ನಿಲ್ದಾಣಕ್ಕೆ ಭೇಟಿ ನೀಡುತ್ತಾರೆ. ಸಂಜೆ 5 ರಿಂದ ಮಧ್ಯರಾತ್ರಿಯವರೆಗೆ, ಒಬ್ಬ ಟ್ರಾಫಿಕ್ ಪೋಲೀಸ್ ನಮ್ಮ ಮೆಟ್ರೋ ಭದ್ರತಾ ಸಿಬ್ಬಂದಿ ಜತೆ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಬಿಎಂಆರ್ಸಿಎಲ್ ಕಾರ್ಯ ನಿರ್ವಾಹಕ ನಿರ್ದೇಶಕಿ ಕಲ್ಪನಾ ಕಟಾರಿಯಾ ಹೇಳಿದರು.
ಬೆಂಗಳೂರಿನಲ್ಲಿ ಪ್ರೀಪೇಯ್ಡ್ ಕಿಯೋಸ್ಕ್ಗಳು ದಶಕಗಳ ಹಿಂದೆ ಪ್ರಾರಂಭಿಸಲಾಯಿತು. ಆದರೆ ಅದು ಯಶಸ್ವಿಯಾಗದ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದವು. ನಂತರ ಅಗ್ರಿಗೇಟರ್ಗಳ ಆಪ್ ಆಧಾರಿತ ಆಟೋ ಸೇವೆಯಲ್ಲಿ ಚಾಲಕರು ಹೆಚ್ಚು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಯಾಣಿಕರು ದೂರು ನೀಡಿದ್ದರು. ಮುಂದಿನ ದಿನಗಳಲ್ಲಿ ಇಂತಹ ಪರಿಸ್ಥಿತಿ ಬದಲಾಗಲಿದೆ.
ನಗರದ ಜನಸಂದಣಿ ಸ್ಥಳಗಳಲ್ಲಿ ಪ್ರೀಪೆಯ್ಡ ಆಟೋ ಕೌಂಟರ್ಗಳು ಸ್ಥಾಪನೆಯಿಂದ ಪ್ರಯಾಣಿಕರಿಗೆ ಸಹಾಯವಾಗುತ್ತದೆ. ಅವರು ಅಗ್ರಿಗೇಟರ್ಗಳಿಗೆ ಕಮಿಷನ್ ಪಾವತಿಸುವ ಅಗತ್ಯವಿಲ್ಲ ಎಂದು ಆದರ್ಶ ಆಟೊ ಚಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಸಂಪತ್ ತಿಳಿಸಿದರು. ಈ ಪ್ರಿಪೇಯ್ಡ್ ಆಟೋ ಕೌಂಟರ್ಗಳ ಕಲ್ಪನೆಯನ್ನು ಅನೇಕ ಸಂಘ ಸಂಸ್ಥೆಗಳು ಸ್ವಾಗತಿಸಿವೆ.