ವಿಧಾನಸೌಧ ವಜ್ರಮಹೋತ್ಸವದಿಂದ ಅಂತರ ಕಾಯ್ದುಕೊಂಡ ಜೆಡಿಎಸ್
ಬೆಂಗಳೂರು, ಅಕ್ಟೋಬರ್ 25: ವಿಧಾನಸೌಧದ ವಜ್ರಮಹೋತ್ಸವಕ್ಕೆ ಕೋಟಿ-ಕೋಟಿ ಹಣ ಖರ್ಚು ಮಾಡುತ್ತಿರುವುದರಿಂದ ಕಳೆದ ವಾರದಿಂದಲೂ ಆಕ್ಷೇಪಗಳು ವ್ಯಕ್ತವಾಗಿದ್ದವು. ಇನ್ನು ಎಲ್ಲಾ ಶಾಸಕರಿಗೆ ಚಿನ್ನ ಹಾಗೂ ವಿಧಾನಸೌಧದ ಸಿಬ್ಬಂದಿಗೆ ಬೆಳ್ಳಿ ತಟ್ಟೆ ನೀಡಲಾಗುತ್ತಿದೆ ಎಂಬ ಸುದ್ದಿ ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು.
ಗ್ಯಾಲರಿ:ವಿಧಾನಸೌಧ ವಜ್ರಮಹೋತ್ಸವಕ್ಕೆ ಭರ್ಜರಿ ತಯಾರಿ
ಇವೆಲ್ಲವುಗಳನ್ನು ಗಮನಿಸಿದ ಸರ್ಕಾರ ಕೊನೆಗಳಿಗೆಯಲ್ಲಿ ಚಿನ್ನ, ಬೆಳ್ಳಿ ನೀಡುವುದುನ್ನು ಕೈಬಿಟ್ಟಿತು. ಅಷ್ಟೇ ಅಲ್ಲದೇ ವಜ್ರಮಹೋತ್ಸವದ ಖರ್ಚನ್ನು ಕೊಂಚ ಕಡಿಮೆಗೊಳಿಸಿತ್ತು. ಆದರೂ ಕೆಲವರು ಇಷ್ಟೊಂದು ಹಣ ಖರ್ಚ ಮಾಡುವುದಾದರೂ ಅಗತ್ಯ ಇತ್ತೆ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಪೂರಕವೆಂಬಂತೆ ಜೆಡಿಎಸ್ ರಾಜ್ಯಾದ್ಯಕ್ಷ ಎಚ್, ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿ ಯಾವುದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ. ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಪಾಲನೆ ಸರಿಯಾಗಿಲ್ಲವೆಂದು ಜೆಡಿಎಸ್ ರಾಜ್ಯಾದ್ಯಕ್ಷ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ ಎಲ್ಲಾ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಫೋಟೋ ಸೆಷನ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ನಿರ್ಗಮಿಸಿದರು.

ಮೊದಲನೇ ಸಾಲಿನಲ್ಲಿ ಎಚ್ ಡಿಕೆಗೆ ಕುರ್ಚಿ ಇರಲಿಲ್ಲ
ಜಗದೀಶ್ ಶೆಟ್ಟರ್ ಅವರಿಗೆ ಮೊದಲ ಸಾಲಿನಲ್ಲಿ ಕುರ್ಚಿ ಹಾಕಲಾಗಿತ್ತು. ಅದೇ ರೀತಿ ಜೆಡಿಎಸ್ ನ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರಿಗೆ ಕುರ್ಚಿ ಹಾಕಬೇಕಿತ್ತು. ಆದರೆ, ಹಾಕಿರಲಿಲ್ಲ. ಅಷ್ಟೇ ಅಲ್ಲದೇ ಜೆಡಿಎಸ್ ಸದಸ್ಯರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಕೂಡ ಇರಲಿಲ್ಲ. ಇದರಿಂದ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿ ಅಲ್ಲಿಂದ ಕಾಲ್ಕಿತ್ತರು.

ಗಾಂಧಿ ಪ್ರತಿಮೆ ಎದುರು ಫೋಟೋ ಸೆಷನ್
ವಿಧಾನಸೌಧದ ವಜ್ರಮಹೋತ್ಸವದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ 300 ಮಂದಿ ಶಾಸಕರ ಜತೆ ಫೋಟೋ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಇದರಲ್ಲಿ ಯಾವ ಜೆಡಿಎಸ್ ಸದಸ್ಯರು ಪಾಲ್ಗೊಳ್ಳಲಿಲ್ಲ.

ಬಸವರಾಜ ಹೊರಟ್ಟಿಗೆ ಕೂಡಲು ಆಸನ ಇರಲಿಲ್ಲ
ಜೆಡಿಎಸ್ ನ ಅತ್ಯಂತ ಹಿರಿಯ ವಿಧಾನಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅವರಿಗೂ ಕುಳಿತುಕೊಳ್ಳಲು ಕುರ್ಚಿ ಇರಲಿಲ್ಲ. ಇದರಿಂದ ಆಕ್ರೋಶಗೊಂಡ ಜೆಡಿಎಸ್ ಶಾಸಕರು ಫೋಟೋ ಸೆಷನ್ ನಲ್ಲಿ ಪಾಲ್ಗೊಳ್ಳದೆ ಕುಮಾರಸ್ವಾಮಿ ಜತೆ ಅಲ್ಲಿಂದ ನಿರ್ಗಮಿಸಿದರು.

ಎಲ್ಲಾ ಕಾರ್ಯಕ್ರಮಗಳನ್ನು ಬಹಿಷ್ಕರಿಸಿದ ಜೆಡಿಎಸ್
ವಿಧಾನ ಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಅವರು ಮಾಡಿದ ಭಾಷಣದ ವೇಳೆ ಮಾತ್ರ ಪಾಲ್ಗೊಂಡಿದ್ದ ಜೆಡಿಎಸ್ ಸದಸ್ಯರು ಇನ್ನುಳಿದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳದೆ ಬಹಿಷ್ಕರಿಸಿದರು.

ಗುಟುಕು ನೀರು ಕುಡಿಯದಂತೆ ಎಚ್ಡಿಕೆ ಸೂಚನೆ
ವಜ್ರಮಹೋತ್ಸವದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರ ಊಟಕ್ಕೆ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿರುವುದಕ್ಕೆ ಜೆಡಿಎಸ್ ರಾಜ್ಯಾದ್ಯಕ್ಷ ಎಚ್,ಡಿ ಕುಮಾರಸ್ವಾಮಿ ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದರಿಂದ ತಮ್ಮ ಪಕ್ಷದ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಯಾವುದೇ ರೀತಿಯಾಗಿ ಊಟ ಮಾಡುವಂತಿಲ್ಲ. ಅಷ್ಟೇ ಅಲ್ಲದೇ ಗುಟುಕು ನೀರು ಕುಡಿಯಬಾರದು ಎಂದು ಕುಮಾರಸ್ವಾಮಿ ಸೂಚಿಸಿದ್ದರು.












Click it and Unblock the Notifications