ಬೆಂಗಳೂರಲ್ಲಿ ಟೆಕ್ಕಿಯಿಂದ ತಾಯಿ ಹತ್ಯೆ; ಎರಡು ದಿನದಿಂದ ನಾಪತ್ತೆ
ಬೆಂಗಳೂರು, ಫೆಬ್ರವರಿ 04 : ಟೆಕ್ಕಿಯೊಬ್ಬಳು ನಿದ್ರೆ ಮಾಡುತ್ತಿದ್ದ ತಾಯಿಯನ್ನು ಕೊಂದು, ಸಹೋದರನ ಹತ್ಯೆಗೆ ಪ್ರಯತ್ನ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಟೆಕ್ಕಿ ಎರಡು ದಿನದಿಂದ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಬೆಂಗಳೂರಿನ ಕೆ. ಆರ್. ಪುರ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿದ ಅಮೃತಾ ತಾಯಿ ನಿರ್ಮಲಾ (54) ಹತ್ಯೆ ಮಾಡಿದ್ದು, ಸಹೋದರ ಹರೀಶ್ ಹತ್ಯೆಗೆ ವಿಫಲಯತ್ನ ಮಾಡಿದ್ದಾರೆ. ಫೆ.2ರಂದು ಮುಂಜಾನೆ ಈ ಘಟನೆ ನಡೆದಿದೆ.
ಅಮೃತಾ ಮಾರತ್ತಹಳ್ಳಿಯಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಹರೀಶ್ ಕುತ್ತಿಗೆಗೆ ಗಾಯವಾಗಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕೆ. ಆರ್. ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿದ್ದು, ನಾಪತ್ತೆಯಾಗಿರುವ ಅಮೃತಾಳಿಗೆ ಹುಡುಕಾಟ ನಡೆದಿದೆ.
ಘಟನೆ ವಿವರ : ದಾವಣಗೆರೆ ಮೂಲದ ನಿರ್ಮಲಾ ಕೆ. ಆರ್. ಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುತ್ರಿ ಅಮೃತಾ ಮತ್ತು ಪುತ್ರ ಹರೀಶ್ ಜೊತೆ ವಾಸವಾಗಿದ್ದರು. ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದ ಅಮೃತಾಗೆ ಹೈದರಾಬಾದ್ನಲ್ಲಿ ಕೆಲಸ ಸಿಕ್ಕಿತ್ತು.
ಫೆಬ್ರವರಿ 4ರಂದು ಕುಟುಂಬ ಸಮೇತ ಹೈದರಾಬಾದ್ ಪ್ರವಾಸಕ್ಕೆ ತೆರಳಲು ಯೋಜನೆ ಹಾಕಿಕೊಂಡಿದ್ದರು. ಫೆ.2ರ ಮುಂಜಾನೆ ನಿದ್ರೆ ಮಾಡುತ್ತಿದ್ದಾಗ ತಾಯಿಯನ್ನು ಅಮೃತಾ ಹತ್ಯೆ ಮಾಡಿದ್ದಾರೆ. ಬಳಿಕ ಸಹೋದರ ಹತ್ಯೆಗೆ ಪ್ರಯತ್ನ ನಡೆಸಿದ್ದಾರೆ.
ಕುತ್ತಿಗೆಗೆ ಚಾಕು ಚುಚ್ಚಿದಾಗ ಎಚ್ಚರಗೊಂಡ ಸಹೋದರ ಹರೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಯಿಯನ್ನು ನಾನೇ ಕೊಂದೆ ಎಂದು ಅಮೃತಾ ಸಹೋದರನ ಬಳಿ ಹೇಳಿಕೊಂಡಿದ್ದಾಳೆ.
ನಾನು ಸುಮಾರು ಸಾಲ ಮಾಡಿದ್ದೇನೆ. ಭಾನುವಾರ ಸಾಲ ಕೇಳಲು ಎಲ್ಲರೂ ಮನೆಗೆ ಬರುತ್ತಾರೆ. ಇದರಿಂದ ತಾಯಿಗೆ ಅವಮಾನ ಆಗುತ್ತದೆ ಎಲ್ಲರೂ ಸಾಯೋಣ ಎಂದು ಸಹೋದರ ಬಳಿ ಹೇಳಿರುವ ಅಮೃತಾ ಆತನ ಹತ್ಯೆಗೆ ಪ್ರಯತ್ನ ನಡೆಸಿದ್ದಾಳೆ.
ಹರೀಶ್ ಪ್ರತಿರೋಧ ತೋರಿದಾಗ ಮನೆಯಿಂದ ಪರಾರಿಯಾಗಿದ್ದಾಳೆ. ಹರೀಶ್ ಚಿಕ್ಕಮ್ಮನಿಗೆ ಕರೆ ಮಾಡಿ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಅಮೃತಾ ಎಲ್ಲಿದ್ದಾರೆ? ಎಂಬುದು ಇನ್ನೂ ಪತ್ತೆಯಾಗಿಲ್ಲ.