ಮೆಟ್ರೋ : ಚಿಕ್ಕಪೇಟೆಗೆ ತಲುಪಿದ 'ಕಾವೇರಿ'
ಬೆಂಗಳೂರು, ಅ. 18 : ನಮ್ಮ ಮೆಟ್ರೋ ಯೋಜನೆ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದು, ವಾಣಿ ವಿಲಾಸ್ ಆಸ್ಪತ್ರೆ ಮುಂಭಾಗ ವರ್ಷದ ಹಿಂದೆ ಕಾರ್ಯಾಚರಣೆ ಪ್ರಾರಂಭಿಸಿದ್ದ ‘ಕಾವೇರಿ' ಸುರಂಗ ಕೊರೆಯುವ ಯಂತ್ರ ಶುಕ್ರವಾರ ಸಂಜೆ ಚಿಕ್ಕಪೇಟೆಯ ನೆಲದಡಿ ನಿಲ್ದಾಣದಿಂದ ಹೊರಬಂದಿದೆ.
ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲಾ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಟಿಬಿಎಂ ಯಂತ್ರ ಯಶಸ್ವಿಯಾಗಿ ಹೊರಬಂದ ಕ್ಷಣಕ್ಕೆ ಸಾಕ್ಷಿಯಾಗಿದ್ದರು. 45 ದಿನಗಳ ಬಳಿಕ ಚಿಕ್ಕಪೇಟೆಯ ಬಳಿಯಿಂದ ಮೆಜೆಸ್ಟಿಕ್ ಕಡೆಗೆ ಕಾವೇರಿ ಟಿಬಿಎಂ ಕೆಲಸ ಆರಂಭ ಮಾಡಲಿದೆ.

ಶುಕ್ರವಾರ ಸಂಜೆ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರದೀಪ್ ಸಿಂಗ್ ಖರೋಲಾ ಅವರು, ವಾಣಿ ವಿಲಾಸ್ ಆಸ್ಪತ್ರೆ ಮುಂಭಾಗದಿಂದ ಸುರಂಗ ಕೊರೆಯಲು ಆರಂಭಿಸಿದೆವು, ಈ ಪ್ರದೇಶದಲ್ಲಿ ಹಳೆಯ ಕಟ್ಟಡಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಅವುಗಳಿಗೆ ಹಾನಿ ಆಗದಂತೆ ಸುರಂಗ ನಿರ್ಮಿಸುವುದು ನಮ್ಮ ಗುರಿಯಾಗಿತ್ತು. ಅದು ಯಶಸ್ವಿಯಾಗಿದೆ ಎಂದರು. [2015ರ ಫೆಬ್ರವರಿಗೆ ಪೀಣ್ಯ-ನಾಗಸಂದ್ರ ಮೆಟ್ರೋ ಸಂಚಾರ]
ಸುರಂಗ ಮಾರ್ಗದಲ್ಲಿ ರೈಲು ಸೇವೆ ಆರಂಭಿಸುವ ಮೊದಲು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ನೆಲದಾಳದ ನಿಲ್ದಾಣಗಳಲ್ಲಿ ಅಗ್ನಿ ಶಾಮಕ, ಆಮ್ಲಜನಕ ಪೂರೈಕೆ ಮೊದಲಾದ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದ ಬಳಿಕ ರೈಲು ಸಂಚಾರ ಆರಂಭಿಸುವ ಬಗ್ಗೆ ಆಲೋಚನೆ ನಡೆಸಲಾಗುತ್ತದೆ ಎಂದು ಹೇಳಿದರು. [ಮೆಟ್ರೋ ಮತ್ತಷ್ಟು ನಿಧಾನ]
2015ರ ಕೊನೆಗೆ ಮೆಟ್ರೋ ರೈಲು : ನಮ್ಮ ಮೆಟ್ರೋ ಯೋಜನೆಯ ಮೊದಲ ಹಂತದ ಎಲ್ಲ ಮಾರ್ಗಗಳಲ್ಲಿ 2015ರ ಡಿಸೆಂಬರ್ ವೇಳೆಗೆ ರೈಲುಗಳು ಸಂಚರಿಸಲಿವೆ ಎಂದು ಪ್ರದೀಪ್ ಸಿಂಗ್ ಖರೋಲಾ ತಿಳಿಸಿದರು. ಮುಂಬರುವ ಜೂನ್- ಜುಲೈ ಹೊತ್ತಿಗೆ ಉತ್ತರ- ದಕ್ಷಿಣ ಕಾರಿಡಾರ್ನ ಸುರಂಗ ಮಾರ್ಗ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಬಳಿಕ ಹಳಿ ಅಳವಡಿಕೆ, ಪರೀಕ್ಷಾರ್ಥ ರೈಲು ಸಂಚಾರ ನಡೆಸಿ ವಾಣಿಜ್ಯ ಸಂಚಾರ ಆರಂಭಿಸಲಾಗುವುದು ಎಂದರು.












Click it and Unblock the Notifications