ಮಾಜಿ ಸಿಎಂ ಎಸ್ಎಂಕೆ ಮನೆಯಲ್ಲಿ ತಾಂಬೂಲ ಶಾಸ್ತ್ರ ಮುಗಿಸಿದ ಡಿಕೆಶಿ ಕುಟುಂಬ
ಬೆಂಗಳೂರು, ಜೂ. 14: ರಾಜಕೀಯ ಗುರು-ಶಿಷ್ಯರು ಎಂದೇ ಕರೆಯಲ್ಪಡುವ ಮಾಜಿ ಸಿಎಂ ಎಸ್.ಎಂ. ಕೃಷ್ಣಾ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಇದೀಗ ಬೀಗರಾಗುತ್ತಿದ್ದಾರೆ. ಎಸ್ಎಂಕೆ ಮೊಮ್ಮಗ (ದಿ. ಸಿದ್ದಾರ್ಥ್ ಪುತ್ರ) ಅಮಾತ್ಯ ಹಾಗೂ ಡಿ.ಕೆ. ಶಿವಕುಮಾರ್ ಪುತ್ರಿ ಐಶ್ವರ್ಯ ಮದುವೆ ಮಾಡಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಈ ಹಿಂದೆಯೆ ಬಂದಿತ್ತು.
ಇದೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಪುತ್ರಿ ಐಶ್ವರ್ಯಾ ಹಾಗೂ ಎಸ್ಎಂಕೆ ಅಳಿಯ ದಿ. ಸಿದ್ದಾರ್ಥ ಅವರ ಪುತ್ರ ಅಮಾತ್ಯ ವಿವಾಹಕ್ಕೆ ಮುನ್ನುಡಿಯಾಗಿ ಹುಡುಗನನ್ನು ನೋಡುವ (ತಾಂಬೂಲ) ಶಾಸ್ತ್ರವನ್ನು ಡಿಕೆಶಿ ಕುಟುಂಬ ಮಾಡಿದೆ. ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಡಿ.ಕೆ. ಶಿವಕುಮಾರ್ ಕುಟುಂಬ ಭೇಟಿ ನೀಡಿತ್ತು. ಬಾಗಿಲಿಗೆ ಬಂದು ನೆಂಟರನ್ನು ಎಸ್ಎಂಕೆ ದಂಪತಿ ಸ್ವಾಗತಿಸಿದ್ದಾರೆ. ಬೀಗತನದಿಂದ ಮಾಜಿ ಸಿಎಂ ಎಸ್ಎಂಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಕುಟುಂಬದಲ್ಲಿ ಸಂಭ್ರಮ ಮೂಡಿದೆ. ಬೆಳಗ್ಗೆಯಷ್ಟೆ ಕೆಪಿಸಿಸಿ ಕಚೇರಿಯಲ್ಲಿ ಹೋಮ ಹವನದಲ್ಲಿ ಡಿಕೆಶಿ ಭಾಗವಹಿಸಿದ್ದರು.

ಈ ಹಿಂದೆಯೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ಅವರ ಆಪ್ತ ಬಳಗದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗುರತಿಸಿಕೊಂಡಿದ್ದರು. ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿಯನ್ನು ಹಿಡಿದಿದ್ದಾಗ ಡಿ.ಕೆ. ಶಿವಕುಮಾರ್ ಅವರನ್ನು ಶಾಡೊ ಸಿಎಂ ಎಂದೇ ಕರೆಯಲಾಗುತ್ತಿತ್ತು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ಹೈಕಮಾಂಡ್ ಜೊತೆಗಿನ ವೈಮನಸ್ಸಿನಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಸ್ಎಂಕೆ ಬಿಜೆಪಿ ಸೇರಿದ್ದರು.

ಕಾಂಗ್ರೆಸ್ ಪಕ್ಷವನ್ನು ಎಸ್.ಎಂ. ಕೃಷ್ಣ ಅವರು ತೊರೆದ ಮೇಲೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಎಸ್ಎಂಕೆ ಸಂಪರ್ಕ ಕಡಿದುಕೊಂಡಿರಲಿಲ್ಲ. ಎಸ್ಎಂಕೆ ಅಳಿಯ ಸಿದ್ಧಾರ್ಥ ಅವರು ಆತ್ಮಹತ್ಯೆ ಮಾಡಿಕೊಂಡಾಗಲೂ ಎಸ್ಎಂಕೆ ಅವರಿಗೆ ಧೈರ್ಯ ತುಂಬಿದ್ದು ಇದೇ ಡಿಕೆಶಿ. ಇದೀಗ ರಾಜಕೀಯ ಗುರುವಿನ ಮೊಮ್ಮಗನಿಗೆ ಪುತ್ರಿಯನ್ನು ವಿವಾಹ ಮಾಡಿಕೊಡುವ ಮೂಲಕ ಎರಡು ರಾಜಕೀಯ ಕುಟುಂಬಗಳು ನೆಂಟಸ್ತನ ಬೆಳೆಸಿವೆ.













Click it and Unblock the Notifications