ಸುಮಲತಾ ಅಂಬರೀಶ್, ಸಿದ್ದರಾಮಯ್ಯ ಭೇಟಿ: ಮಂಡ್ಯ ಟಿಕೆಟ್ ಚರ್ಚೆ
ಬೆಂಗಳೂರು, ಫೆಬ್ರವರಿ 20: ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿರುವ ಸುಮಲತಾ ಅಂಬರೀಶ್ ಅವರು ಇಂದು ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿ ಲೋಕಸಭೆ ಚುನಾವಣೆ ಬಗ್ಗೆ ಮಾತನಾಡಿದರು.
ಸಿದ್ದರಾಮಯ್ಯ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂಬರೀಶ್ ಅವರು ಕಾಂಗ್ರೆಸ್ ಜೊತೆಗೆ ಇದ್ದವರು, ಹಾಗಾಗಿ ನನ್ನ ರಾಜಕೀಯ ಪ್ರವೇಶಕ್ಕೆ ಕಾಂಗ್ರೆಸ್ ಮುಖಂಡರ ಅಭಿಪ್ರಾಯ ಪಡೆಯುವುದು ಮುಖ್ಯ ಎನಿಸಿದ್ದ ಕಾರಣ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದೇನೆ ಎಂದು ಸುಮಲತಾ ಹೇಳಿದರು.
ಮಂಡ್ಯ ಜನರ ಅಪೇಕ್ಷೆ ಏನಿದೆ, ಅಂಬರೀಶ್ ಅಭಿಮಾನಿಗಳು ಚುನಾವಣೆಗೆ ನಿಲ್ಲುವಂತೆ ಮಾಡುತ್ತಿರುವ ಒತ್ತಾಯದ ಬಗೆಗೆ ಸಿದ್ದರಾಮಯ್ಯ ಅವರಿಗೆ ತಿಳಿಸಿದ್ದೇನೆ ಎಂದು ಸುಮಲತಾ ಹೇಳಿದರು.
ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳಲಾಗುತ್ತಿದೆ, ಸೀಟು ಹಂಚಿಕೆ ಚರ್ಚೆಗಳು ನಡೆಯುತ್ತಿವೆ, ಯಾರಿಗೆ ಯಾವ ಕ್ಷೇತ್ರ ಎಂಬುದು ಚರ್ಚೆ ಆಗಬೇಕಿದೆ ಹಾಗಾಗಿ ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ, ಇತರ ಮುಖಂಡರ ಜೊತೆ ಚರ್ಚಿಸಿ ಅಭಿಪ್ರಾಯ ತಿಳಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಸುಮಲತಾ ಅಂಬರೀಶ್ ಹೇಳಿದರು.

ಜನರು ಹೇಳಿದಂತೆ ಕೇಳುತ್ತೇನೆ:ಸುಮಲತಾ
ಒಂದೊಮ್ಮೆ ಮಂಡ್ಯ ಕ್ಷೇತ್ರವು ಜೆಡಿಎಸ್ ಪಾಲಾದರೆ ಏನು ಮಾಡುತ್ತೀರಿ? ಎಂಬ ಪ್ರಶ್ನೆಗೆ ಉತ್ತರಿಸಿದ ಸುಮಲತಾ, ಈಗಲೇ ಅದರ ಬಗ್ಗೆ ಯೋಚಿಸುವುದು ಸರಿ ಅಲ್ಲ, ಆದರೆ ಆಗೊಮ್ಮೆ ಅಂತಹಾ ಪರಿಸ್ಥಿತಿ ಬಂದರೆ, ಜನರೇ ನಾನು ರಾಜಕೀಯಕ್ಕೆ ಬರಬೇಕೆಂದು ಅಪೇಕ್ಷಿಸಿದ್ದು, ಅಂತಹಾ ಪರಿಸ್ಥಿತಿ ಬಂದರೆ ಆಗಲೂ ಜನರನ್ನೇ ಕೇಳಿ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದರು.

'ಕಾಂಗ್ರೆಸ್ ನಾಯಕರಿಗೂ ಆಸೆ ಇದೆ'
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಉಳಿಯಬೇಕು, ಅಂಬರೀಶ್ ಅವರು ಕಟ್ಟಿದ ಕಾಂಗ್ರೆಸ್ ಪರಂಪರೆ ಮುಂದುವರೆಯಬೇಕು ಎಂಬ ಆಸೆ ಕಾಂಗ್ರೆಸ್ ಮುಖಂಡರಿಗೆ ಇದೆ, ಹಾಗಾಗಿ ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಕಣಕ್ಕಿಳಿಸುತ್ತಾರೆ ಎಂಬ ಭರವಸೆ ಇದೆ ಎಂದು ಸುಮಲತಾ ಹೇಳಿದರು.

'ಯೋಧ ಗುರು ಕುಟುಂಬಕ್ಕೆ ಜಮೀನು ಹಸ್ತಾಂತರ'
ನಾಳೆ ಮಂಡ್ಯಕ್ಕೆ ಭೇಟಿ ನೀಡುತ್ತಿರುವ ಬಗ್ಗೆ ಮಾತನಾಡಿದ ಸುಮಲತಾ ಅವರು, ಮೃತ ಗುರು ಅವರ ಹುಟ್ಟೂರಿಗೆ ನಾಳೆ ಭೇಟಿ ನೀಡುತ್ತಿದ್ದು, ಇದು ರಾಜಕೀಯ ಭೇಟಿ ಅಲ್ಲ, ಅವರಿಗೆ ಅರ್ಧ ಎಕರೆ ಜಮೀನು ಕೊಡುತ್ತೇವೆ ಎಂದು ಮಾತುಕೊಟ್ಟಿದ್ದೆವು, ಅದರಂತೆ ನಾಳೆ ಅದನ್ನು ಕೊಡಲಿದ್ದೇವೆ, ಇದು ರಾಜಕೀಯ ಭೇಟಿ ಅಲ್ಲ, ಭೇಟಿ ಸಂದರ್ಭದಲ್ಲಿ ರಾಜಕೀಯ ಮಾತನಾಡುವುದಿಲ್ಲ ಎಂದಿದ್ದಾರೆ.

ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ?
ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸುಮಲತಾ ಅವರು, ಮಂಡ್ಯದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಅಂಬರೀಶ್ ಅಭಿಮಾನಿಗಳು ಒತ್ತಾಯ ಮಾಡುತ್ತಿರುವ ಬಗ್ಗೆ ಹೇಳಿದ್ದಾರೆ, ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಇದೇ ಕ್ಷೇತ್ರದಿಂದ ಕುಮಾರಸ್ವಾಮಿ ಅವರು ಮಗ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸುವ ಉಮೇದಿನಲ್ಲಿದ್ದಾರೆ ಎನ್ನಲಾಗಿದೆ.












Click it and Unblock the Notifications