ನಮ್ಮ ಮೆಟ್ರೋದಲ್ಲಿ ನಿಲ್ಲದ ಹಿಂದಿ ಹೇರಿಕೆ, ಟ್ವೀಟ್ ಅಭಿಯಾನ
ಬೆಂಗಳೂರು, ಜೂನ್ 20 : ಪ್ರಾದೇಶಿಕ ಭಾಷಾ ನೀತಿಯನ್ನು ಗಾಳಿಗೆ ತೂರಿ 'ನಮ್ಮ ಮೆಟ್ರೋ' ರೈಲಿನಲ್ಲಿ ಹಿಂದಿ ಹೇರಿಕೆಯಾಗುತ್ತಿದೆ.
ಚೆನ್ನೈ, ಕೊಲ್ಕತ್ತಾ, ದೆಹಲಿ ಮುಂತಾದ ಕಡೆ ಇರುವ ಮೆಟ್ರೋ ಎರಡು ಭಾಷೆಯ ನೀತಿ ಇರುವಾಗ ಇಲ್ಲಿ ಮಾತ್ರ ಮೂರು ಸೇರಿಸುವುದು ಏಕೆ ಎಂಬ ಕೂಗು ಮತ್ತೆ ಎದ್ದಿದೆ.
ಜೂನ್ 20 ಸಂಜೆ 6 ರಿಂದ ನಮ್ಮ ಮೆಟ್ರೋನಲ್ಲಿ ಅನಾವಶ್ಯಕವಾಗಿ ಬಳಸಲಾಗುತ್ತಿರುವ ಹಿಂದಿ ಭಾಷೆಯನ್ನು ವಿರೋಧಿಸಿ ಬನವಾಸಿ ಬಳಗವು ಟ್ವಿಟರ್ ಅಭಿಯಾನವನ್ನು ಆಯೋಜಿಸಿದೆ. #nammametrohindibeda ಹಾಗೂ #nammametrokannadasaaku ಹ್ಯಾಷ್ ಟ್ಯಾಗ್ ನಲ್ಲಿ ಟ್ವೀಟ್ ಮಾಡಿ ಈ ಹೋರಾಟಕ್ಕೆ ಬೆಂಬಲ ಸೂಚಿಸಿ. ಹಿಂದಿ ಹೇರಿಕೆಯ ವಿರುದ್ಧ ದನಿ ಎತ್ತಲು ಹಾಗು ಸಮಾನ ಭಾಷಾ ನೀತಿಗಾಗಿ ಆಗ್ರಹಿಸಿ ಈ ಹೋರಾಟವನ್ನು ಬೆಂಬಲಿಸುವಂತೆ ಬನವಾಸಿ ಬಳಗ ಮನವಿ ಮಾಡಿದೆ.
ನಮ್ಮ ಮೆಟ್ರೋ ನಮ್ಮದಾಗೇ ಉಳಿಯಬೇಕು ಎಂದರೆ ಅಲ್ಲಿ ಅನವಶ್ಯಕ ಹಿಂದಿ ಹೇರಿಕೆ ನಿಲ್ಲಬೇಕು. ಹಿಂದಿ ಹೇರಿಕೆಯ ಪ್ರಮಾಣ ತಗ್ಗಿದೆ, ಆದರೆ ನಿಂತಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ, ಮೆಟ್ರೋ ಅಧಿಕಾರಿಗಳ ಗಮನ ಸೆಳೆದು, ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ ಸಾರ್ವಭೌಮತ್ವ ಎತ್ತಿ ಹಿಡಿಯಲು ಒತ್ತಾಯಿಸುವ ಈ ಟ್ವಿಟರ್ ಅಭಿಯಾನ ಆಯೋಜಿಸಲಾಗಿದೆ.

ಹಿಂದಿ ಹೇರಿಕೆ ನಿಲ್ಲಲಿ
ಹಿಂದಿನಿಂದಲೂ ದೇಶವನ್ನೆಲ್ಲ ಹಿಂದಿಮಯ ಮಾಡಬೇಕು ಅನ್ನುವ ಹಿಂದೀವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುವಂತೆ ನಮ್ಮ ಊರಿನ ವ್ಯವಸ್ಥೆಗಳನ್ನೆಲ್ಲ ಒಂದೊಂದಾಗಿ ಹಿಂದಿಯಲ್ಲಿ ಕಲ್ಪಿಸುತ್ತಾ ಹೋದರೆ ಮುಂದೊಂದು ದಿನ ಮುಂಬೈನಲ್ಲಿ ಮರಾಠಿಗಾದ ಸ್ಥಿತಿಯೇ ಬೆಂಗಳೂರಿನಲ್ಲಿ ಕನ್ನಡಕ್ಕಾಗಬಹುದು. ಹೀಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಕನ್ನಡಿಗರೆಲ್ಲರ ಮೇಲಿದೆ.

ಸಂಸದ ಪ್ರತಾಪ್ ಸಿಂಹರ ಬೆಂಬರ
ನಮ್ಮ ಮೆಟ್ರೋ, ಬಿಎಂಆರ್ ಸಿಎಲ್ ನಿರ್ಮಾಣದ ನಿಲ್ದಾಣ, ನಾಮಫಲಕಗಳಲ್ಲಿ ಬರೀ ಇಂಗ್ಲೀಷ್ ಅಥವಾ ಹಿಂದಿ ಭಾಷೆ ಮಾತ್ರ ಬಳಕೆ ಮಾಡಿದ್ದರೆ ಫೋಟೊ ತೆಗೆದು ನನಗೆ ಇಮೇಲ್([email protected]) ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದರು. ಇದಾದ ಬಳಿಕ, ಹಿಂದಿ ಹೇರಿಕೆ ಪ್ರಮಾಣ ತಗ್ಗಿತ್ತು

ವಸಂತ್ ಶೆಟ್ಟಿ ಅನುಭವ
* ಸ್ಟೇಶನ್ ಒಳಗೆ ಮತ್ತು ರೈಲಿನೊಳಗೆ ಘೋಷಣೆಗಳಲ್ಲಿ ಕನ್ನಡ, ಇಂಗ್ಲಿಷ್ ಎರಡೇ ಇದೆ.
* ಟಿಕೇಟ್ ಕೌಂಟರ್ ಬಳಿಯ ಡಿಸ್ಪ್ಲೇ ಅಲ್ಲಿ ಹಿಂದಿ ತೂರಿಕೊಂಡಿದೆ.
* ಸ್ಟೇಶನ್ ಹೆಸರುಗಳಲ್ಲಿ ಹಿಂದಿ ತೂರಿಕೊಂಡಿದೆ.
*ಸ್ಟೇಶನ್ ಒಳಗಿನ ಬಹುತೇಕ ಬೋರ್ಡುಗಳೂ ಕನ್ನಡ, ಇಂಗ್ಲಿಷ್ ಎರಡರಲ್ಲೇ ಇವೆ.
*ರೈಲಿನ ಒಳಗೆ ಬಹುತೇಕ ಕಡೆ ಹಿಂದಿ ನುಸುಳಿದೆ.
* ಭದ್ರತೆಗೆ ಈಗ ರಾಜ್ಯ ರಿಸರ್ವ್ ಯ ಪೋಲಿಸ್ ಸಿಬ್ಬಂದಿ ನೇಮಿಸಿರುವುದರಿಂದ ಎಲ್ಲೆಡೆ ಕನ್ನಡ ಕಾಣಿಸುತ್ತ, ಕೇಳಿಸುತ್ತ ಇತ್ತು. ಇದು ಬಹಳಷ್ಟು ಜನರಿಗೆ ಅನುಕೂಲಕರವಾಗಿತ್ತು ಅನ್ನುವುದನ್ನು ಗಮನಿಸಿದೆ.
*ಕನ್ನಡ ಬಾರದ ಸೆಕ್ಯುರಿಟಿ ಗಾರ್ಡಗಳು ಈಗಲೂ ಅಲ್ಲಲ್ಲಿ ಇದ್ದಾರೆ.

ಮೆಟ್ರೋ ಶುರುವಾದಾಗಿನಿಂದಲೂ ಕಾಯಿಲೆ
ಮೆಟ್ರೋ ಶುರುವಾದಾಗಿನಿಂದಲೂ ನಿರಂತರವಾಗಿ ಹಿಂದಿ ಹೇರಿಕೆಯ ವಿರುದ್ಧ ಹಲವು ಪ್ರತಿಭಟನೆಗಳು ಆಗಿದ್ದವು. ಅದರಲ್ಲೂ ಕರವೇ ಇದರ ಮುಂಚೂಣಿಯಲ್ಲಿತ್ತು. ಇದರ ಫಲವಾಗಿ ಈಗ ಅದು ಸಾಕಷ್ಟು ತಗ್ಗಿದೆ, ಆದರೂ ಕರ್ನಾಟಕ ಸರ್ಕಾರದ ಈ ಯೋಜನೆಯಲ್ಲಿ ಹಿಂದಿ ಹೇರಿಕೆಯನ್ನು ಪೂರ್ತಿಯಾಗಿ ತೆಗೆಸುವವರೆಗೂ ನಮ್ಮ ವಿರೋಧ ಮುಂದುವರೆಯಬೇಕು. ಒಮ್ಮೆ ಮೆಟ್ರೋದಲ್ಲಿ ಬಿಟ್ಟು ಬಿಟ್ಟರೆ ನಾಳೆ ಬಿ.ಎಂ.ಟಿ.ಸಿಗೂ ಆನಂತರ ಕೆ.ಎಸ್.ಆರ್.ಟಿ.ಸಿಗೂ ಕೊನೆಯಲ್ಲಿ ಇಡೀ ರಾಜ್ಯ ಸರ್ಕಾರದ ಆಡಳಿತಕ್ಕೆ ಹಿಂದಿಯ ಕಾಯಿಲೆ ತಗಲುತ್ತದೆ.












Click it and Unblock the Notifications