ಮೇಯರ್ ಗಂಗಾಂಬಿಕೆ ಬೆನ್ನಿಗೆ ಬಿದ್ದ 'ಫೇಕ್ನ್ಯೂಸ್ ಗೂಂಡಾಗಳು'
ಬೆಂಗಳೂರು, ಜುಲೈ 21: ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರಿಗೆ ಫೇಕ್ ನ್ಯೂಸ್ ಕಾಟ ಪ್ರಾರಂಭವಾಗಿದೆ. ಆದರೆ ಫೇಕ್ ನ್ಯೂಸ್ ಅನ್ನು ಕಾನೂನಾತ್ಮಕವಾಗಿ ಎದುರಿಸುತ್ತಿದ್ದಾರೆ ಗಂಗಾಂಬಿಕೆ.
ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಗಣೇಶನ ವಿಗ್ರಹಗಳನ್ನು ಇಡಲು ಅವಕಾಶ ನಿರಾಕರಿಸಿದ್ದಾರೆ, ಅವರು ಹಿಂದೂ ಧರ್ಮ ದ್ವೇಷಿ ಆಗಿದ್ದಾರೆ ಎಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು.
'ನಗರದ ರಸ್ತೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲು ಹಿಂದೂಗಳಿಗೆ ಈ ಬಾರಿ ಬಿಡುವುದಿಲ್ಲ' ಎಂದು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಅವರು ಹೇಳಿದ್ದಾರೆ ಎಂದು ಸುಳ್ಳು ಸುದ್ದಿಯನ್ನು 'ಮೋದಿ ಭಕ್ತ' ಎಂಬ ಫೇಸ್ಬುಕ್ ಪೇಜ್ನಲ್ಲಿ ಹಾಕಲಾಗಿತ್ತು. ಅಲ್ಲಿ ಹಲವು ಶೇರ್ ಆಗಿದ್ದ ಪೋಸ್ಟ್ಗೆ ಕೆಟ್ಟ ಭಾಷೆಯ ಕಮೆಂಟ್ಗಳೂ ಸಹ ಬಂದಿದ್ದವು.

ಮೇಯರ್ ಗಂಗಾಂಬಿಕೆ ಅವರು ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕ್ರಮಕ್ಕೆ ಒತ್ತಾಯಿಸಿದ್ದಾರೆ. ಅಷ್ಟೆ ಅಲ್ಲದೆ ನಗರ ಕಮೀಷನರ್ ಅಲೋಕ್ ಕುಮಾರ್ ಅವರನ್ನು ಸಹ ಮೇಯರ್ ಅವರು ಭೇಟಿಯಾಗಿ ದೂರು ನೀಡಿದ್ದಾರೆ.
ಗಣೇಶನ ಹಬ್ಬ ಸಮೀಪಕ್ಕೆ ಬರುತ್ತಿದ್ದಂತೆ ಈ ರೀತಿಯ ಸುಳ್ಳು ಸುದ್ದಿಗಳು ಹೆಚ್ಚಾಗುತ್ತವೆ. ಕಳೆದ ವರ್ಷ ಸಹ ಸರ್ಕಾರವು ಗಣೇಶನ ಹಬ್ಬಕ್ಕೆ ಮೈಕ್ ಹಾಕುವುದನ್ನು ನಿಷೇಧಿಸಿ ಎಂದು ಸುಳ್ಳು ಸುದ್ದಿ ಹರಿದಾಡಿತ್ತು. ಅದರ ನಂತರ ಗಣೇಶನ ಪ್ರತಿಷ್ಠಾಪನೆ ಮಾಡುವ ಸಂಘಗಳು ಭಾರಿ ಮೊತ್ತದ ಠೇವಣಿ ಇಡಬೇಕು ಎಂದು ಸಹ ಸುಳ್ಳು ಸುದ್ದಿ ಹರಿದಾಡಿತ್ತು, ಮತ್ತು ಈ ವಿಷಯವಾಗಿ ಸಿದ್ದರಾಮಯ್ಯ ಅವರನ್ನು ಧರ್ಮ ವಿರೋಧಿ, ಹಿಂದೂ ವಿರೋಧಿ ಎಂದು ಜರಿಯಲಾಗಿತ್ತು.
ಗಣೇಶನ ಹಬ್ಬ ಸೆಪ್ಟೆಂಬರ್ ಮೂರನೇ ತಾರೀಖು ಇದ್ದು, ಗಣೇಶನ ಹಬ್ಬ ಸಮೀಪಿಸುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬದ ಕುರಿತು, ಧರ್ಮದ ಕುರಿತು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ, ಸಾಮಾಜಿಕ ಜಾಲತಾಣ ಬಳಕೆದಾರರು ಎಚ್ಚರಿಕೆಯಿಂದ ಇರುವುದು ಒಳಿತು.












Click it and Unblock the Notifications