ಕೆಂಪೇಗೌಡ ಏರ್ಪೋರ್ಟ್ಗೆ ಶೀಘ್ರವೇ ಓಡಲಿದೆ ಮೆಮು ರೈಲು
ಬೆಂಗಳೂರು, ಮಾರ್ಚ್ 21: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸುವ ಪ್ರಯಾಣಿಕರು ಶೀಘ್ರವೇ ಮೆಮು ರೈಲುಗಳ ಮೂಲಕ ಪ್ರಯಾಣಿಸಬಹುದಾಗಿದೆ. ವಿಮಾನ ನಿಲ್ದಾಣದ ಸಮೀಪ ಈಗಾಲೇ ರೈಲ್ವೆ ಹಾಲ್ಟ್ ಸ್ಟೇಷನ್ ಆರಂಭಗೊಂಡಿದೆ.
ದಕ್ಷಿಣ ರೈಲ್ವೆ ವಲಯದ ರೈಲ್ವೆ ಸುರಕ್ಷತಾ ಆಯುಕ್ತರಾದ ಅಭಿ ಕುಮಾರ್ ರೈ ಯಲಹಂಕ-ದೇವನಹಳ್ಳಿ- ಚಿಕ್ಕಬಳ್ಳಾಪುರ 45 ಕಿ. ಮೀ. ವಿದ್ಯುದೀಕರಣಗೊಂಡ ಮಾರ್ಗವನ್ನು ಶನಿವಾರ ಪರಿಶೀಲನೆ ನಡೆಸಿದರು.
ರೈಲ್ವೆ ಸುರಕ್ಷತಾ ಆಯುಕ್ತರು ವೇಗ ಪರೀಕ್ಷೆ ಮೂಲಕ ಹಳಿಯ ತಪಾಸಣೆ ನಡೆಸಿದ್ದಾರೆ. ಗಂಟೆಗೆ 100 ಕಿ. ಮೀ. ವೇಗದಲ್ಲಿ ಪರಿಶೀಲನೆ ಪೂರ್ಣಗೊಂಡಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ. ಶೀಘ್ರವೇ ಈ ಮಾರ್ಗದಲ್ಲಿ ಮೆಮು ರೈಲುಗಳ ಸಂಚಾರಕ್ಕೆ ಅನುಮತಿ ಸಿಗಲಿದೆ.
ಯಲಹಂಕ-ದೇವನಹಳ್ಳಿ-ಚಿಕ್ಕಬಳ್ಳಾಪುರ ಮಾರ್ಗದ ವಿದ್ಯುದೀಕರಣದಿಂದಾಗಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಈ ಮಾರ್ಗದಲ್ಲಿ ಮೆಮು ರೈಲು ಸಂಚಾರ ನಡೆಸಲು ಅವಕಾಶ ನೀಡಲಾಗುತ್ತದೆ.

ರೈಲ್ವೆ ಹಾಲ್ಟ್ ಸ್ಟೇಷನ್ ನಿರ್ಮಾಣ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಉಸ್ತುವಾರಿ ನೋಡಿಕೊಳ್ಳುವ ಬಿಐಎಲ್ ವಿಮಾನ ನಿಲ್ದಾಣ ಸಮೀಪವೇ ರೈಲ್ವೆ ಹಾಲ್ಟ್ ಸ್ಟೇಷನ್ ನಿರ್ಮಾಣ ಮಾಡಿದೆ. ಬೆಂಗಳೂರು ನಗರದಿಂದ ಹಾಲ್ಟ್ ಸ್ಟೇಷನ್ಗೆ ರೈಲು ಸಂಚಾರ ಆರಂಭಿಸಲಾಗಿತ್ತು. ಆದರೆ ಪ್ರಯಾಣಿಕರ ನೀರಸ ಪ್ರತಿಕ್ರಿಯೆ ಕಾರಣ ರೈಲು ಸಂಚಾರ ರದ್ದುಗೊಳಿಸಲಾಗಿದೆ. ಈಗ ಇದೇ ಮಾರ್ಗದಲ್ಲಿ ಮೆಮು ರೈಲು ಸಂಚಾರ ಆರಂಭಿಸುವ ಕುರಿತು ಚರ್ಚೆಗಳು ಆರಂಭವಾಗಿದೆ.

ಅತಿ ಕಡಿಮೆ ದರದಲ್ಲಿ ಸಂಚಾರ
2021ರ ಜನವರಿ 4ರಂದು ನೈಋತ್ಯ ರೈಲ್ವೆ ಬೆಂಗಳೂರು ನಗರಿಂದ ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ಗೆ ರೈಲು ಸಂಚಾರ ಆರಂಭಿತ್ತು. ಪ್ರತಿದಿನ ನಗರದಿಂದ 10 ರೈಲುಗಳು ಈ ನಿಲ್ದಾಣಕ್ಕೆ ಸಂಚಾರ ನಡೆಸುತ್ತಿದ್ದವು. ನಗರರಿಂದ ವಿಮಾನ ನಿಲ್ದಾಣಕ್ಕೆ 10 ರಿಂದ 15 ರೂ. ನಲ್ಲಿ ಸಂಚಾರ ನಡೆಸಬಹುದಾಗಿತ್ತು. ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಸಂಚಾರ ನಡೆಸಲು ಶೆಟರ್ ಬಸ್ಗಳ ವ್ಯವಸ್ಥೆ ಮಾಡಲಾಗಿತ್ತು. ಆದರೆ ಜನರಿಂದ ಸೂಕ್ತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.

3 ಕೋಟಿ ವೆಚ್ಚದಲ್ಲಿ ನಿರ್ಮಾಣ
ಬಿಐಎಎಲ್ ವಿಮಾನ ನಿಲ್ದಾಣದಿಂದ 3.5 ಕಿ. ಮೀ. ದೂರದಲ್ಲಿ ಏರ್ಪೋರ್ಟ್ ರೈಲ್ವೆ ಹಾಲ್ಟ್ ಸ್ಟೇಷನ್ ಅನ್ನು ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿತ್ತು. ರೈಲು ಸಂಪರ್ಕ ಆರಂಭವಾದಾಗ ಅಂದಿನ ರೈಲ್ವೆ ಸಚಿವರು ಟ್ವೀಟ್ ಮಾಡಿ ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಇದು ಮಹತ್ವದ ಮೈಲುಗಲ್ಲು ಎಂದು ಹೇಳಿದ್ದರು. ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಸುಮಾರು 28,000 ಉದ್ಯೋಗಿಗಳಿಗೆ ಇದು ಸಹಾಯಕವಾಗಲಿದೆ ಎಂದು ಹೇಳಿತ್ತು. ಈ ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ಸೌಲಭ್ಯವನ್ನು ಸಹ ಕಲ್ಪಿಸಲಾಗಿತ್ತು. ಆದರೆ ಅಪಾರ ನಿರೀಕ್ಷೆಯೊಂದಿಗೆ ಆರಂಭಿಸಿದ್ದ ವಿಮಾನ ನಿಲ್ದಾಣದ ರೈಲು ಸೇವೆಗೆ ನೀರಸ ಪ್ರತಿಕ್ರಿಯೆ ಸಿಕ್ಕಿತು. ಕೋವಿಡ್ ಲಾಕ್ಡೌನ್ ಘೋಷಣೆಯಾಗುತ್ತಲೇ ರೈಲು ಸೇವೆ ಸಹ ಸ್ಥಗಿತಗೊಳಿಸಲಾಯಿತು.

ರೈಲಿನ ಸಮಯ ಸರಿ ಇಲ್ಲ ಎಂಬುದು ದೂರು
ಕೆಂಪೇಗೌಡ ವಿಮಾನ ನಿಲ್ದಾಣದ ರೈಲು ಸೇವೆಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಲು ಸಮಯವೇ ಕಾರಣ ಎಂದು ತಿಳಿದುಬಂದಿತ್ತು. ಬಿಐಎಲ್ ಮತ್ತು ನೈಋತ್ಯ ರೈಲ್ವೆ ಸರಿಯಾಗಿ ಮಾರ್ಗದ ಸಮೀಕ್ಷೆ ನಡೆಸಿ ರೈಲುಗಳನ್ನು ಓಡಿಸುತ್ತಿಲ್ಲ ಎಂದು ಪ್ರಯಾಣಿಕರು ದೂರಿದ್ದರು. 2021ರ ಜನವರಿಂದ ಏಪ್ರಿಲ್ ತನಕ 2098 ಜನರು ಮಾತ್ರ ಏರ್ ಪೋರ್ಟ್ ಹಾಲ್ಟ್ ಸ್ಟೇಷನ್ಗೆ ಸಂಚಾರ ನಡೆಸಿದ್ದರು. ಆದ್ದರಿಂದ ಅಂತಿಮವಾಗಿ ರೈಲು ಸಂಚಾರ ರದ್ದುಗೊಳಿಸಲಾಯಿತು. ಈಗ ಇದೇ ಮಾರ್ಗದಲ್ಲಿ ಮೆಮು ರೈಲು ಸಂಚಾರ ನಡೆಸಲಿವೆ ಎಂಬ ಸುದ್ದಿಗಳು ಹಬ್ಬಿವೆ.












Click it and Unblock the Notifications