ಕೊರೊನಾ ಸೈಡ್ ಎಫೆಕ್ಟ್ಗೆ ರೌಡಿಶೀಟರ್ ಬಲಿ; ಪೊಲೀಸ್ ತನಿಖೆಯಿಂದ ಬಯಲು!
ಬೆಂಗಳೂರು, ಏ. 27: ದೇಶದಲ್ಲಿ ಕೊರೊನಾ ವೈರಸ್ ಸೃಷ್ಟಿಸಿರುವ ಆತಂಕದಿಂದ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಅಷ್ಟೇ ಅಲ್ಲ ಕಠೋರ ಅಪರಾಧಿಗಳು ಕೂಡ ಮನೆ ಸೇರಿದ್ದಾರೆ. ಗಣನೀಯ ಸಂಖ್ಯೆಯಲ್ಲಿ ಅಪರಾಧ ಚಟುವಟಿಕೆಗಳು ಕಡಿಮೆಯಾಗಿವೆ. ಆದರೆ ಹಲವು ಅಪರಾಧಿಗಳು ಮಾತ್ರ ಯಾವುದಕ್ಕೂ ತಲೆ ಕೆಡೆಸಿಕೊಂಡಿಲ್ಲ. ಕೊರೊನಾ ವೈರಸ್ಗಿಂತ ಭೀಕರವಾಗಿ ತಮ್ಮ ಅಪರಾಧವನ್ನು ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊರ ವಲಯದಲ್ಲಿ ನಡೆದಿದ್ದ ರೌಡಿಶೀಟರ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಗೆ ಕಾರಣವನ್ನು ಪತ್ತೆ ಮಾಡಿದ್ದಾರೆ. ಇಡೀ ಜಗತ್ತಿಗೆ ಕಂಠಕ ತಂದಿರುವ ಕೊರೊನಾ ವೈರಸ್ನ ಸೈಡ್ ಎಫೆಕ್ಟ್ಗೆ ರೌಡಿಶೀಟರ್ ಬಲಿಯಾಗಿದ್ದಾನೆ.
ಲಾಕ್ಡೌನ್ ಮಧ್ಯೆ ಏಪ್ರಿಲ್ 21ರ ರಾತ್ರಿ ಹೆಸರಘಟ್ಟ ಬಳಿಯ ಮಕ್ತೂರಿನಲ್ಲಿ ಸಾದರಹಳ್ಳಿಯ ರೌಡಿ ಶೀಟರ್ ಪ್ರಕಾಶ್ ಅಲಿಯಾಸ್ ಲೂಸ್ ಕೊಲೆಯಾಗಿತ್ತು. ಕೊಲೆಯಾಗಿದ್ದ ಪ್ರಕಾಶನಿಗಿದ್ದ ಚಟಗಳಿಂದಲೇ ಆತನ ಕೊಲೆಯಾಗಿರುವುದು ಪ್ರಾಥಮಿಕ ವಿಚಾರಣೆಯಿಂದ ತಿಳಿದು ಬಂದಿದೆ. ಸೋಲದೇವನಹಳ್ಳಿ ಪೊಲೀಸ್ ಠಾಣೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದು ಪ್ರಕಾಶನ ಸ್ನೇಹಿತರಾದ ಲೊಕೇಶ್, ನಿಖಿಲ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ರೌಡಿಶೀಟರ್ ಜೀವಕ್ಕೆ ಕುತ್ತು ತಂದ ಇಸ್ಪೆಟ್ ಆಡುವ ಚಟ!
ರಾಜಾನುಕುಂಟೆ ಪೊಲೀಸ್ ಠಾಣೆಯ ರೌಡಿಶೀಟರ್ ಸಾದರಹಳ್ಳಿ ಪ್ರಕಾಶ್ ಅಲಿಯಾಸ್ ಲೂಸ್ ನಿರಂತರವಾಗಿ ಇಸ್ಪೆಟ್ ಆಡುವ ಚಟವನ್ನು ಹೊಂದಿದ್ದ. ಅವನ ಸ್ನೇಹಿತರು ಕೂಡ ಇಸ್ಪೆಟ್ ಆಡುವ ಚಟವನ್ನು ಹೊಂದಿದ್ದವರೆ ಇದ್ದರು. ಅವರಲ್ಲೊಬ್ಬ ಲೊಕೇಶ್ ಎಂಬುವನು ಲಾಕ್ಡೌನ್ ಹಿನ್ನೆಲೆಯಲ್ಲಿ ಎಲ್ಲಿ ಇಸ್ಪೆಟ್ ಆಡ್ತಾರೆ? ಎಲ್ಲಿ ಮದ್ಯ ಸಿಗುತ್ತದೆ ನಿರಂತರವಾಗಿ ಕಾಡುತ್ತಿರುತ್ತಿದ್ದ. ಅದರಿಂದಾಗಿ ಇಬ್ಬರಲ್ಲಿಯೂ ಭಿನ್ನಾಭಿಪ್ರಾಯ ಹೆಚ್ಚಾಗಿತ್ತು. ಅದೇ ಹಿನ್ನೆಲೆಯಲ್ಲಿ ಸಂಚು ರೂಪಿಸಿದ್ದ ಪ್ರಕಾಶ್, ನನಗೆ ಎಣ್ಣೆ ಸಿಕ್ಕಿದೆ, ಪಾರ್ಟಿ ಮಾಡೋಣ ಬಾ ಎಂದು ರೌಡಿ ಶೀಟರ್ ಲೊಕೇಶ್ನನ್ನು ಕರೆದು ಗಾಡಿಯಲ್ಲಿ ಹತ್ತಿಸಿಕೊಂಡು ಹೋಗಿ ಮುಸ್ಕೂರು ಗ್ರಾಮದ ಹತ್ತಿರ ಚಾಕುವಿನಿಂದ ಇರುದು ಕೊಲೆ ಮಾಡಿದ್ದಾರೆ.

ಇಸ್ಪೆಟ್ ಹಣದ ವಿಚಾರದಲ್ಲಿ ಆಗಿತ್ತು ವೈಮನಸ್ಸು!
ಮೊದಲಿನಿಂದಲೂ ಪ್ರಕಾಶ್ ಹಾಗೂ ಲೊಕೇಶ್ ಇಬ್ಬರು ಇಸ್ಪೆಟ್ ಆಡುತ್ತಿದ್ದರು. ಜೂಜಿನಲ್ಲಿ ಗೆದ್ದಿದ್ದ ಹಣದ ವಿಚಾರದಲ್ಲಿ ಇಬ್ಬರಿಗೂ ವೈಮನಸ್ಸು ಇತ್ತು. ಜೊತೆಗೆ ಲಾಕ್ಡೌನ್ ಸಂದರ್ಭದಲ್ಲಿ ಮದ್ಯ ಎಲ್ಲಿ ಸಿಗುತ್ತದೆ ಎಂದು ಪ್ರಕಾಶನಿಗೆ ಲೊಕೇಶ್ ದುಂಬಾಲು ಬಿದ್ದಿದ್ದ. ತನಗೆ ಗೊತ್ತಿಲ್ಲ ಎಂದಿದ್ದ ಪ್ರಕಾಶ್ ವಿರುದ್ಧ ಲೊಕೇಶ್ ಸಿಟ್ಟಿಗೆದ್ದಿದ್ದ. ಮದ್ಯ ಹಾಗೂ ಇಸ್ಪೆಟ್ ಅಡ್ಡೆಗಳ ಬಗ್ಗೆ ಗೊತ್ತಿದ್ದು ಪ್ರಕಾಶ್ ಅವುಗಳು ಸಿಗುವ ಸ್ಥಳಗಳನ್ನು ಹೇಳುತ್ತಿಲ್ಲ ಎಂದು ಕೊಲೆ ಸಂಚು ರೂಪಿಸಿದ್ದ ಎಂದು ಪೊಲೀಸರು ತನಿಖೆಯಲ್ಲಿ ಪತ್ತೆ ಮಾಡಿದ್ದಾರೆ.

ಚಾಕುವಿನಿಂದ ಇರಿದು ಕೊಲೆ
ಏ.21ರ ರಾತ್ರಿ ತನಗೆ ಮದ್ಯ ಸಿಕ್ಕಿದೆ, ಇಸ್ಪೀಟ್ ಆಡುವ ಜಾಗ ಗೊತ್ತು ಎಂದು ಪ್ರಕಾಶನನ್ನು ಲೊಕೇಶ್ ಕರೆಸಿಕೊಂಡು ಚಾಕುವಿನಿಂದ ಸೊಂಟಕ್ಕೆ ಇರಿದು ಕೊಲೆಗೈಯ್ಯಲಾಗಿತ್ತು. ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಮಾಡಿ ನಂತರ ಶವವನ್ನ ಸ್ಥಳದಲ್ಲೇ ಎಸೆದು ಆರೋಪಿಗಳು ಪರಾರಿಯಾಗಿದ್ದರು.

ಕೊರೊನಾ ವೈರಸ್ ಸೈಡ್ ಎಫೆಕ್ಟ್
ಕೊರೊನಾ ವೈರಸ್ ಜನ ಸಮಾನ್ಯರಿಗೆ ಜೀವ ಉಳಿಸಿಕೊಳ್ಳುವ ಆತಂಕ ಸೃಷ್ಟಿಸಿದೆ. ಆದರೆ ಮದ್ಯ ವ್ಯಸನಿಗಳು ಹಾಗೂ ಜೂಜುಕೋರರಿಗೆ ಮತ್ತೊಂದು ರೀತಿಯ ಸಂಕಷ್ಟವನ್ನು ತಂದಿದೆ. ಕೊರೊನಾ ವೈರಸ್ ಹರಡುತ್ತಿರುವ ಸಂದರ್ಭದಲ್ಲಿ ಅದರ ಸೈಡ್ ಎಫೆಕ್ಟ್ಗೆ ರೌಡಿ ಶೀಟರ್ ಬಲಿಯಾಗಿದ್ದಾನೆ.












Click it and Unblock the Notifications