ಐಎಂಎ ಮೇಲೆ ಮುಂದುವರೆದ ಎಸ್ಐಟಿ ದಾಳಿ: ಭಾರಿ ಪ್ರಮಾಣದ ಚಿನ್ನ ವಶ
ಬೆಂಗಳೂರು, ಜೂನ್ 20: ಐಎಂಎ ವಂಚನೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ರಾಜ್ಯ ಎಸ್ಐಟಿ (ವಿಶೇಷ ತನಿಖಾ ತಂಡ)ವು ಇಂದೂ ಸಹ ಐಎಂಎ ಆಭರಣ ಮಳಿಗೆಗಳ ಮೇಲೆ ದಾಳಿ ಮುಂದುವರೆಸಿದೆ.
ಇಂದು ಶಿವಾಜಿನಗರದ ಐಎಂಎ ಚಿನ್ನಾಭರಣ ಮೇಲೆ ದಾಳಿ ನಡೆಸಿದ ಎಸ್ಐಟಿಯು ಭಾರಿ ಪ್ರಮಾಣದ ಚಿನ್ನಾಭರಣವನ್ನು ವಶಪಡಿಸಿಕೊಂಡಿದೆ.
ಬೀಗ ಹಾಕಿದ್ದ ಶಿವಾಜಿನಗರದ ಐಎಂಎ ಚಿನ್ನಾಭರಣ ಅಂಗಡಿಯ ಬೀಗ ಮುರಿದು ಒಳ ಪ್ರವೇಶಿಸಿದ ಎಸ್ಐಟಿ ತಂಡವು, ಷೋಕೋಸಿನಲ್ಲಿಟ್ಟದ್ದ ಚಿನ್ನದ ಜೊತೆಗೆ ದಾಸ್ತಾನು ಮಾಡಿಡಲಾಗಿದ್ದ ಚಿನ್ನವನ್ನೂ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಹಲವು ವ್ಯಾಪಾರಿಗಳಿಂದ ಕೆಜಿಗಟ್ಟಲೆ ಚಿನ್ನವನ್ನು ಐಎಂಎ ಖರೀದಿಸಿತ್ತು, ಎನ್ನಲಾಗಿದ್ದು, ಚಿನ್ನದ ಬಿಸ್ಕತ್ತುಗಳು, ವಜ್ರದ ಹರಳುಗಳನ್ನು ಎಸ್ಐಟಿಯು ವಶಪಡಿಸಿಕೊಂಡು ತನ್ನ ಸುಪರ್ಧಿಗೆ ತೆಗೆದುಕೊಂಡಿದೆ.
ಜೂನ್ 18ರಂದು ಜಯನಗರದಲ್ಲಿರುವ ಐಎಂಎ ಆಭರಣ ಮಳಿಗೆ ಮೇಲೆ ಹಾಗೂ ಐಎಂಎ ಮಾಲೀಕ ಮನ್ಸೂರ್ ಖಾನ್ನ ಮೂರನೇ ಹೆಂಡತಿ ಮನೆ ಮೇಲೆ ದಾಳಿ ನಡೆಸಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ಆಸ್ತಿ ಪತ್ರಗಳನ್ನು ಎಸ್ಐಟಿ ವಶಕ್ಕೆ ಪಡೆದುಕೊಂಡಿದೆ.
ಇಂದು ಜಾರಿ ನಿರ್ದೇಶನಾಲಯವು ಮನ್ಸೂರ್ ಖಾನ್ಗೆ ಸಮನ್ಸ್ ನೀಡಿದ್ದು, ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಆದರೆ ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿ ಆಗಿದ್ದು, ಅವರು ಹಾಜರಾಗುವುದು ಅಸಾಧ್ಯ ಎನ್ನಲಾಗಿದೆ.












Click it and Unblock the Notifications