ಗೌರಿ ಲಂಕೇಶ್ ಹತ್ಯೆ ಕೇಸಲ್ಲಿ ಸಿಕ್ಕಿದೆ ಬಿಗ್ ಲೀಡ್
ಬೆಂಗಳೂರು, ಫೆಬ್ರವರಿ 24: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ತಂಡಕ್ಕೆ ಹತ್ಯೆ ಪ್ರಕರಣ ಭೇಧಿಸಲು ಪ್ರಮುಖ ಸಾಕ್ಷ್ಯವೊಂದು ದೊರೆತಿದೆ.
ಗೌರಿ ಹತ್ಯೆಕೋರರಿಗೆ ಸಹಾಯ ಮಾಡಿದ್ದಾನೆ ಎನ್ನಲಾಗಿರುವ ಕೆ.ಟಿ.ನವೀನ್ ಅಲಿಯಾಸ್ ಹೊಟ್ಟೆಮಂಜ ಎಂಬುವನನ್ನು ಸೇರಿ ನಾಲ್ವರನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ.
ಗೌರಿ ಲಂಕೇಶ್ ಹತ್ಯೆ: ಸಿಸಿಟಿವಿ ಕ್ಯಾಮೆರಾದಲ್ಲಿದ್ದುದು ಹಂತಕನಾ..?!
ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತನೂ ಆಗಿರುವ ಮಂಡ್ಯ ಜಿಲ್ಲೆ ಕದಲೂರು ಗ್ರಾಮದ ನವೀನ್, ಫೆ.18ರಂದು ಮೆಜೆಸ್ಟಿಕ್ಗೆ ಬಂದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿ ಪಡೆದ ಸಿಸಿಬಿ ಇನ್ಸ್ಪೆಕ್ಟರ್ ಬಿ.ರಾಜು ನೇತೃತ್ವದ ತಂಡ, ಆತನನ್ನು ವಶಕ್ಕೆ ಪಡೆದು ನಾಡಪಿಸ್ತೂಲ್ ಹಾಗೂ 'ಪಾಯಿಂಟ್ 32' ರಿವಾಲ್ವರ್ನ ಐದು ಜೀವಂತ ಗುಂಡುಗಳನ್ನು ಜಪ್ತಿ ಮಾಡಿತ್ತು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ನವೀನ್ ಬಳಿ ಪಿಸ್ತೂಲ್ ಸಿಕ್ಕಿದ್ದರಿಂದ ಹಾಗೂ ಆತ ಸಂಘಟನೆಯೊಂದರ ಕಾರ್ಯಕರ್ತನಾಗಿದ್ದರಿಂದ ಅನುಮಾನಗೊಂಡ ಎಸ್ಐಟಿ ಅಧಿಕಾರಿಗಳು, ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೆ, ಆತ ನೀಡಿದ ಮಾಹಿತಿ ಆಧರಿಸಿ ಗುರುವಾರ ರಾತ್ರಿ ಮಂಗಳೂರಿನ ಮೂವರು ಯುವಕರನ್ನು ಬಂಧಿಸಿ ನಗರಕ್ಕೆ ಕರೆತಂದಿದ್ದಾರೆ.
ಎಸ್ಐಟಿಯಿಂದ ಗೌರಿ ಲಂಕೇಶ್ ಹಂತಕರ ಪತ್ತೆ: ಸಿಎಂ
'ನವೀನ್ನನ್ನು ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಿ, ನ್ಯಾಯಾಲಯದ ಅನುಮತಿ ಮೇರೆಗೆ 9 ದಿನ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಆತ ಯಾವ ಉದ್ದೇಶಕ್ಕಾಗಿ ನಗರಕ್ಕೆ ಬಂದಿದ್ದ ಹಾಗೂ ಶಸ್ತ್ರಾಸ್ತ್ರ ಕೊಟ್ಟವರು ಯಾರು ಎಂಬ ನಿಟ್ಟಿನಲ್ಲಿ ವಿಚಾರಣೆ ನಡೆಸುತ್ತಿದ್ದೇವೆ. ಈವರೆಗೆ 'ಪಾಯಿಂಟ್ 32'ನ 15 ಜೀವಂತ ಗುಂಡುಗಳನ್ನು ಜಪ್ತಿ ಮಾಡಿದ್ದೇವೆ' ಎಂದು ಎಸ್ಐಟಿ ತಂಡದ ಸಿಬ್ಬಂದಿ ಹೇಳಿದ್ದಾರೆ.
ಗೌರಿ ಹಂತಕರ ಬಗ್ಗೆ ನವೀನ್ಗೆ ಪೂರ್ತಿ ಮಾಹಿತಿ ಇದೆ. ಈತ ಕೃತ್ಯದಲ್ಲಿ ಈತ ನೇರವಾಗಿ ಭಾಗಿಯಾಗಿಲ್ಲ. ಆದರೆ, ಅವರು ನಗರಕ್ಕೆ ಬರಲು ಹಾಗೂ ಕೃತ್ಯ ಎಸಗಿ ಪರಾರಿಯಾಗಲು ಸಹಾಯ ಮಾಡಿದ್ದಾನೆ. ಹತ್ಯೆಗೈದ ಬಳಿಕ ಹಂತಕರು ಒಮ್ಮೆಯೂ ಈತನನ್ನು ಸಂಪರ್ಕಿಸಿಲ್ಲ. ಹೀಗಾಗಿ, ಅವರನ್ನು ಪತ್ತೆ ಮಾಡುವುದು ಎಸ್ಐಟಿಗೆ ಕಷ್ಟವಾಗಿದೆ ಎಂದು ಎಸ್ಐಟಿ ತಂಡದವರು ಪತ್ರಿಕೆಗಳಿಗೆ ಹೇಳಿದ್ದಾರೆ.