ಗೋಡೆ ಒಡೆಸಿ ಸಿಎಂ ಕೆಂಗಣ್ಣಿಗೆ ಗುರಿಯಾದ ಆಂಜನೇಯ
ಬೆಂಗಳೂರು, ಜ.7 : ಕಚೇರಿ ವಿಸ್ತರಣೆ ಮಾಡುವ ಉದ್ದೇಶದಿಂದ ವಿಧಾನಸೌಧದ ಗೋಡೆ ಒಡೆಸಿದ ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಸಿಎಂ ಸಿದ್ದರಾಮಯ್ಯ ಅವರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಆಂಜನೇಯ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಸಿಎಂ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಈ ಗೋಡೆ ಒಡೆಯವು ಕಾರ್ಯವನ್ನು ನಿಲ್ಲಿಸಿ ಎಂದು ತಾಕೀತು ಮಾಡಿದ್ದಾರೆ.
ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ವಿಧಾನಸೌಧದ ಮೂರನೇ ಮಹಡಿಯ 340, 341, 341ಎ ಕೊಠಡಿಗಳ ನಡುವಿನ ಗೋಡೆಗಳನ್ನು ಒಡೆದು ಕಚೇರಿಯನ್ನು ವಿಸ್ತರಿಸಲು ಮುಂದಾಗಿದ್ದರು. ಮಾಧ್ಯಮಗಳ ಮೂಲಕ ಈ ವಿಷಯ ಹೊರಗೆ ಬರುತ್ತಿದ್ದಂತೆ ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದವು. [ಗೋಡೆ ಒಡೆಸಿದ ಸಚಿವ ಆಂಜನೇಯ]

ಇದರಿಂದ ಮುಜುಗರಕ್ಕೆ ಒಳಗಾದ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸಕ್ಕೆ ಭಾನುವಾರ ರಾತ್ರಿ ಸಚಿವ ಆಂಜನೇಯ ಅವರನ್ನು ಕರೆಸಿಕೊಂಡು ಮಾಹಿತಿ ಪಡೆದಿದ್ದಾರೆ. ನಿಮ್ಮ ವರ್ತನೆಯಿಂದ ಸರ್ಕಾರ ಮುಜುಗರದ ಸನ್ನಿವೇಶ ಎದುರಿಸಬೇಕಾಗಿ ಬಂದಿದೆ. ಗೋಡೆ ಒಡೆಸುವ ಕೆಲಸವನ್ನು ತಕ್ಷಣ ನಿಲ್ಲಿಸಬೇಕು, ಮುಂದೆ ಇಂತಹ ಸಾಹಸಗಳಿಗೆ ಕೈ ಹಾಕಬೇಡಿ ಎಂದು ತಾಕೀತು ಮಾಡಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರವಿದ್ದಾಗ ಸಿಎಂ ಜಗದೀಶ ಶೆಟ್ಟರ್ ಅವರ ಸಂಸದೀಯ ಕಾರ್ಯದರ್ಶಿ ಶಂಕರ ಪಾಟೀಲ ಮುನೇನಕೊಪ್ಪ ಇದೇ 340 ಕೊಠಡಿಯ ಗೋಡೆ ಒಡೆಸಿ ವಿವಾದ ಹುಟ್ಟುಹಾಕಿದ್ದರು. ಆಗ ಪ್ರತಿಪಕ್ಷದ ನಾಯಕರಾಗಿದ್ದ ತಾವು ವಿರೋಧ ವ್ಯಕ್ತಪಡಿಸಿದ್ದೆವು. ಈಗ ನಿಮ್ಮ ಪ್ರಕರಣವನ್ನು ನಾವು ಹೇಗೆ ಸಮರ್ಥಿಸಿಕೊಳ್ಳಬೇಕು ಎಂದು ಸಿಎಂ ಆಂಜನೇಯ ಅವರಿಗೆ ಪ್ರಶ್ನಿಸಿದ್ದಾರೆ.
ಸಿಎಂ ಕೋಪದ ಪರಿಣಾಮದಿಂದಾಗಿ ಸೋಮವಾರ ಮೂರನೇ ಮಹಡಿಯ ಎಚ್.ಆಂಜನೇಯ ಕೊಠಡಿಗಳಿಗೆ ಬೀಗ ಬಿದ್ದಿತ್ತು. ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ಕೆಲವು ಹೊತ್ತ ವಿಧಾನಸೌಧ ಪ್ರವೇಶಕ್ಕೆ ನಿರ್ಭಂದ ಹೇರಲಾಗಿತ್ತು. ಸಚಿವರ ಕೊಠಡಿಯ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಿ ಅಲ್ಲಿನ ದೃಶ್ಯಗಳನ್ನು ತೆಗೆಯದಂತೆ ಮಾಡಲಾಗಿತ್ತು.
ಪ್ರತಿಪಕ್ಷಗಳ ವಾಗ್ದಾಳಿ : ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಅವರ ಗೋಡೆ ಒಡೆಯವ ಸಾಹಸವನ್ನು ಪ್ರತಿಪಕ್ಷಗಳು ತೀವ್ರವಾಗಿ ಖಂಡಿಸಿವೆ. ಸಚಿವರು ವಿಧಾನಸೌಧದಲ್ಲಿ ತಮ್ಮ ಕಚೇರಿ ಗೋಡೆ ಕೆಡವಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಜನರಿಗೆ ಸುಳ್ಳು ಹೇಳುವ ಮೂಲಕ ಇಡೀ ವಿಧಾನಸೌಧವನ್ನೇ ಕೆಡವಲು ಹೊರಟಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ ಲೇವಡಿ ಮಾಡಿದ್ದಾರೆ.
ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಗೋಡೆ ಕೆಡವಿದ ಪ್ರಕರಣ ನಡೆದಾಗ ಅಬ್ಬರಿಸಿದ್ದ ಸಿದ್ದರಾಮಯ್ಯ, ತಮ್ಮ ಸಂಪುಟದ ಸದಸ್ಯರು ಇಂತಹ ಕೆಲಸ ಮಾಡಿದಾಗ ಏಕೆ ಸುಮ್ಮನಿದ್ದಾರೆ? ಎಂದು ಸದಾನಂದ ಗೌಡ ಪ್ರಶ್ನಿಸಿದ್ದಾರೆ. ಸಚಿವರ ವಿರುದ್ಧ ಸಿಎಂ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.












Click it and Unblock the Notifications