ಅತ್ಯಾಚಾರ ಪ್ರಕರಣ, ಎಸ್ಎಫ್ಐಯಿಂದ ಪ್ರತಿಭಟನೆ
ಬೆಂಗಳೂರು, ನ.11 : ರಾಜ್ಯದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಪ್ರಕರಣಗಳನ್ನು ಖಂಡಿಸಿ ಮತ್ತು ಅತ್ಯಾಚಾರ ಪ್ರಕರಣಗಳಲ್ಲಿ ರಾಜಕೀಯ ಮಾಡುತ್ತಿರುವ ಪಕ್ಷಗಳ ನಡವಳಕೆ ಖಂಡಿಸಿ ಇಂದು ಭಾರತ ವಿದ್ಯಾರ್ಥಿ ಪೆಡರೇಷನ್, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಮತ್ತು ಭಾರತ ಪ್ರಜಾಸತ್ತಾತ್ಮಕ ಯುವಜನ ಸಂಘಟನೆ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ಗುರುರಾಜ್ ದೇಸಾಯಿ ಅವರು, ವಿಬ್ ಗಯಾರ್, ಆರ್ಕಿಡ್, ಕೇಂಬ್ರಿಡ್ಜ್ನಂತಹ ಖಾಸಗಿ ಶಾಲೆಗಳು ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಮಾರ್ಗಸೂಚಿಯನ್ನು ಉಲ್ಲಂಘಿಸಿ ಸರ್ಕಾರಕ್ಕೇ ಸವಾಲು ಹಾಕಿವೆ. ಇವುಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆಯನ್ನು ಸರ್ಕಾರ ನೀಡಿದ್ದು, ಅದನ್ನು ಸ್ವಾಗತಿಸುತ್ತೇವೆ ಎಂದರು.

ಪ್ರೇಮಲತಾ ಪ್ರಕರಣ, ಕೇಂದ್ರ ಸಚಿವ ಸದಾನಂದ ಗೌಡರ ಮಗನಿಂದ ಪ್ರೀತಿಯ ವಂಚನೆಗೊಳಗಾಗಿ ದೂರು ನೀಡಿರುವ ಮೈತ್ರಿ ಪ್ರಕರಣಗಳಲ್ಲಿ ಪೋಲೀಸರು ಪ್ರಭಾವಕ್ಕೆ ಮಣಿದಿದ್ದಾರೆ. ತೀರ್ಥಹಳ್ಳಿಯ ನಂದಿತಾ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ಮಾಡಿಸುವುದು ಬಿಟ್ಟು ನಾಯಕರು ಕೆಸರೆರಚಾಟ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾದ್ಯಕ್ಷರಾದ ಗೌರಮ್ಮ ಅವರು ಮಾತನಾಡಿ, ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಸರ್ಕಾರದ ಅವಧಿಯಲ್ಲಿ 47,800 ಲೈಂಗಿಕ ದೌರ್ಜನ್ಯಗಳು, 2,700 ಕ್ಕೂ ಹೆಚ್ಚು ಅತ್ಯಾಚಾರಗಳು ನಡೆದಿವೆ. ಸೌಜನ್ಯ ಪ್ರಕರಣವಾದಾಗ ಸುಮ್ಮನಿದ್ದ ಬಿಜೆಪಿಗೆ ಈಗ ಈ ಕುರಿತು ಮಾತನಾಡಲು ನೈತಿಕ ಹಕ್ಕಿಲ್ಲ ಎಂದರು.

ಜನವಾದಿ ಮಹಿಳಾ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಸ್.ಲಕ್ಷ್ಮೀ ಮಾತನಾಡಿ, ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ರಾಷ್ಟ್ರೀಯ ಪಕ್ಷವಾಗಿರುವ ಬಿಜೆಪಿಯ ನಾಯಕರು ರಾಜ್ಯದಲ್ಲಿ ಕೀಳು ಮಟ್ಟದ ರಾಜಕೀಯ ಕೈಬಿಟ್ಟು. ದೌರ್ಜನ್ಯಗಳ ತಡೆಗಾಗಿ ಸರ್ಕಾರಕ್ಕೆ ಸಲಹೆಗಳನ್ನು ನೀಡಬೇಕೆಂದು ಒತ್ತಾಯಿಸಿದರು.

ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ರಾಜಶೇಖರ ಮೂರ್ತಿ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿ, ಸರ್ಕಾರ ತಕ್ಷಣದ ಸುಧಾರಣಾ ಕ್ರಮಗಳೊಂದಿಗೆ, ಧೀರ್ಘಾವಧಿ ಕ್ರಮಗಳನ್ನು ಕೈಗೊಳ್ಳಬೇಕು. ಪ್ರಭಾವ ಮುಕ್ತ ತನಿಖೆ, ಕಠಿಣ ಶಿಕ್ಷೆ, ಮೂಲಕ ಮಕ್ಕಳ ಸುರಕ್ಷತೆಯನ್ನು ಖಾತ್ರಿಗೊಳಿಸಬೇಕು ಎಂದು ಒತ್ತಾಯಿಸಿದರು.













Click it and Unblock the Notifications