ಈಜಿಪುರದಲ್ಲಿ ಸಂಪ್ ಗೆ ಬಿದ್ದು ಬಾಲಕ ಸಾವು
ಬೆಂಗಳೂರು, ಸೆ.23 : ಬಿಲ್ಡರ್ ಸಂಸ್ಥೆಯ ಯಡವಟ್ಟಿನಿಂದಾಗಿ ಆರು ವರ್ಷದ ಬಾಲಕನೊಬ್ಬ ಸಂಪ್ ಗೆ ಬಿದ್ದು ಮೃತಪಟ್ಟಿರುವ ಘಟನೆ ಆಡುಗೋಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಬಾಲಕನನ್ನು ಪ್ರಶಾಂತ್ ಎಂದು ಗುರುತಿಸಲಾಗಿದೆ.
ಈಜಿಪುರ ಕೊಳೆಗೇರಿಯಲ್ಲಿ ಕಟ್ಟಡ ನಿರ್ಮಾಣ ಮಾಡುವ ಗುತ್ತಿಗೆಯನ್ನು ಪಡೆದುಕೊಂಡಿರುವ ಮೆವರಿಕ್ ಹೋಲ್ಡಿಂಗ್ಸ್ ಬಿಲ್ಡರ್ ಸಂಸ್ಥೆ ಕಾಮಗಾರಿಗಾಗಿ ಕಟ್ಟಡದ ಸುತ್ತಾ ಮೂರು ಕಡೆ 15 ಅಡಿ ಆಳದ ಗುಂಡಿ ತೋಡಿತ್ತು.

ಇತ್ತೀಚೆಗೆ ಸುರಿದ ಭಾರಿ ಮಳೆಯಿಂದ ಸಂಪ್ ನಲ್ಲಿ ನೀರು ತುಂಬಿಕೊಂಡಿತ್ತು. ಭಾನುವಾರ ಸಂಜೆ ಲಕ್ಷ್ನಣನಗರ 1ನೇ ಕ್ರಾಸ್ ನಿವಾಸಿ ಪ್ರಶಾಂತ್ (6) ಆಟ ಆಡುವಾಗ ಮನೆ ಸಮೀಪವೇ ಇದ್ದ ಹೊಂಡದಲ್ಲಿ ಬಿದ್ದು ಮೃತಪಟ್ಟಿದ್ದಾನೆ.
ಬಾಲಕ ಸಂಪ್ ಗೆ ಬಿದ್ದಿರುವ ವಿಷಯ ತಿಳಿದ ಸ್ಥಳೀಯರು ತಕ್ಷಣ ಆತನನ್ನು ಹೊರ ತೆಗೆದು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಆಸ್ಪತ್ರೆ ತಲುಪುವ ವೇಳೆಗಾಗಲೇ ಪ್ರಶಾಂತ್ ಮೃತಪಟ್ಟಿದ್ದ.
ಅಕ್ರಮ ಕಾಮಗಾರಿ : ಈ ಕಟ್ಟಡ ನಿರ್ಮಾಣ ಕಾಮಗಾರಿಗೆ ಕಾನೂನು ತೊಡಕುಗಳು ಎದುರಾಗಿವೆ. ಆದರೆ, ಅದನ್ನು ಲೆಕ್ಕಿಸದೇ ಬಿಲ್ಡರ್ ಗಳು ಕಾಮಗಾರಿ ಮುಂದುವರೆಸಿದ್ದಾರೆ. ಸಂಪ್ ತೋಡಿ ಅದನ್ನು ಮುಚ್ಚದೆ ಬಿಟ್ಟಿದ್ದರಿಂದ ಬಾಲಕನೊಬ್ಬ ಮೃತಪಟ್ಟಿದ್ದಾನೆ.
ವಸತಿ ಸಮುಚ್ಛಯ ನಿರ್ಮಿಸುವ ಸಂಬಂಧ ಬಿಲ್ಡರ್ ಸಂಸ್ಥೆ ನಿರ್ಮಿಸುವ ಯೋಜನಾ ನಕ್ಷೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ಇನ್ನೂ ಅನುಮತಿ ನೀಡಿಲ್ಲ. ಈ ಕಟ್ಟಡ ನಿರ್ಮಾಣ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ಬಿಡಿಎ ಅನುಮತಿ ದೊರೆಯುವವರೆಗೂ ಯಾವುದೇ ಕಾಮಗಾರಿ ಕೈಗೊಳ್ಳುವಂತಿಲ್ಲ. ಆದರೆ, ಬಿಲ್ಡರ್ ಗಳು ಕಟ್ಟಡದ ಕಾಮಗಾರಿ ಮುಂದುವರೆಸಿದ್ದಾರೆ. ಈ ಸ್ಥಳದಲ್ಲಿ ಮಾಲ್ ಮತ್ತು ವಸತಿ ಸಮುಚ್ಚಯ ನಿರ್ಮಾಣ ಕಾಮಗಾರಿಯ ಭಾಗವಾಗಿ 15 ಅಡಿ ಗುಂಡಿಗಳನ್ನು ತೋಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. (2013ರಲ್ಲಿ ಸಂಪ್ ಗೆ ಬಿದ್ದ ಪ್ರಕರಣಗಳು)












Click it and Unblock the Notifications