ರಾಜ್ಯದ ನಾಲ್ವರಿಗೆ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಗೌರವ
ಬೆಂಗಳೂರು, ಜುಲೈ 16: ರಾಜ್ಯದ ನಾಲ್ವರು ಕಲಾವಿದರಿಗೆ ರಾಷ್ಟ್ರಮಟ್ಟದ ಗೌರವಗಳು ಲಭಿಸಿವೆ. ಮೂವರು ಕಲಾವಿದರಿಗೆ 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಒಲಿದಿದ್ದರೆ, 'ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ' ಕೂಡ ಕರ್ನಾಟಕಕ್ಕೆ ದೊರೆತಿದೆ.
ರಂಗ ನಿರ್ದೇಶಕ ಎಸ್ ರಘುನಂದನ, ಗೊಂಬೆಯಾಟದ ಕಲಾವಿದೆ ಅನುಪಮಾ ಹೊಸಕೆರೆ ಮತ್ತು ಭರತನಾಟ್ಯ ಕಲಾವಿದೆ ರಾಧಾ ಶ್ರೀಧರ್ ಅವರು ಸಂಗೀತ ನಾಟಕ ಅಕಾಡೆಮಿಯ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ಖ್ಯಾತ ಗಾಯಕಿ ಎಂಡಿ ಪಲ್ಲವಿ ಅವರು 2018ನೇ ಸಾಲಿನ 'ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ'ಕ್ಕೆ ಭಾಜನರಾಗಿದ್ದಾರೆ.
ಸಂಗೀತ, ನಾಟಕ, ಜಾನಪದ ಮುಂತಾದ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 44 ಮಂದಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿಯು 1 ಲಕ್ಷ ರೂ ಮತ್ತು ತಾಮ್ರಪತ್ರವನ್ನು ಒಳಗೊಂಡಿರುತ್ತದೆ.

ಇದಲ್ಲದೆ, ಪ್ರಸಿದ್ಧ ತಬಲಾ ವಾದಕ ಜಾಕಿರ್ ಹುಸೇನ್, ನೃತ್ಯ ಕಲಾವಿದರಾದ ಕೆ. ಕಲ್ಯಾಣಸುಂದರಂ ಪಿಳ್ಳೈ, ಸೋನಮ್ ಮಾನ್ಸಿಂಗ್ ಮತ್ತು ಜತಿನ್ ಗೋಸ್ವಾಮಿ ಅವರು 'ಸಂಗೀತ ನಾಟಕ ಅಕಾಡೆಮಿ ರತ್ನ' ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಈ ಪ್ರಶಸ್ತಿಯು 3 ಲಕ್ಷ ರೂ ನಗದು ಮತ್ತು ತಾಮ್ರಪತ್ರವನ್ನು ಒಳಗೊಂಡಿರುತ್ತದೆ. ದೇಶದ ವಿವಿಧ ಭಾಗಗಳ 44 ಕಲಾವಿದರನ್ನು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಹಾಗೂ 32 ಮಂದಿಯನ್ನು ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.












Click it and Unblock the Notifications