ಈದ್ಗಾ ಮೈದಾನದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಅಡ್ಡಿ
ಬೆಂಗಳೂರು, ಅ.20: ನಗರದ ಚಾಮರಾಜಪೇಟೆಯಲ್ಲಿರುವ ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ನಡೆಸುವ ಇಡ್ಗಾ ಮೈದಾನದಲ್ಲಿ ಭಾನುವಾರ ಕೆಲಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಆದರೆ, ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದರಿಂಡ ಯಾವುದೇ ಅಹಿತಕರಗಳ ಘಟನೆಗಳು ಸಂಭವಿಸಲಿಲ್ಲ.
ರಾಷ್ಟ್ರೀಯ ಸ್ವಯಂಸೇವಕರ ಪಥ ಸಂಚಲನ ಕಾರ್ಯಕ್ರಮ ಬೆಂಗಳೂರಿನಲ್ಲಿ ಭಾನುವಾರ ಗೊಂದಲದ ವಾತಾವರಣ ಉಂಟು ಮಾಡಿತ್ತು. ಪೊಲೀಸರು ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ಆತಂಕ ಉಂಟುಮಾಡಿತ್ತು. ಆರ್ ಎಸ್ ಎಸ್ ಗಣವೇಷಾಧಾರಿಗಳು ನಗರದ ವಿವಿಧೆಡೆ ಪಥ ಸಂಚಲನ ಹಮ್ಮಿಕೊಂಡಿದ್ದರು.
ಭಾನುವಾರ ಬೆಳಗ್ಗೆ ಚಾಮರಾಜಪೇಟೆಯ ಮಾದೇಶ್ವರ ಸ್ವಾಮಿ ದೇವಾಲಯದ ಬಳಿಯಿಂದಲೂ ಪಥ ಸಂಚಲನ ಹೊರಟಿತ್ತು. ಸಂಸದ ಅನಂತ್ ಕುಮಾರ್, ಮೇಯರ್ ಬಿ.ಎಸ್.ಸತ್ಯನಾರಾಯಣ್, ಬಿಬಿಎಂಪಿ ಸದಸ್ಯರಾದ ಶಿವಕುಮಾರ್, ಬಿ.ವಿ.ಗಣೇಶ್ ಸೇರಿದಂತೆ 500ಕ್ಕೂ ಹೆಚ್ಚು ಮಂದಿ ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಈದ್ಗಾ ಮೈದಾನದ ಮೂಲಕ ಪಥ ಸಂಚಲನ ಸಾಗುವ ಪ್ರಯತ್ನ ನಡೆಸಲಾಯಿತು. ಮುಂಜಾಗ್ರತಾ ಕ್ರಮ ಕೈಗೊಂಡಿದ್ದ ಪೊಲೀಸರು ಮೈದಾನದ ಸುತ್ತ ಬ್ಯಾರಿಕೇಡ್ ಹಾಕಿದ್ದರು. ಪೊಲೀಸರ ನಡೆ ಆರ್ ಎಸ್ ಎಸ್ ಕಾರ್ಯಕರ್ತರನ್ನು ಕೆರಳಿಸಿತು.
ಇದು ಬಿಬಿಎಂಪಿ ಜಾಗ, ಆರ್ ಎಸ್ ಎಸ್ ಪಥ ಸಂಚಲನ ನಡೆಸಲು ತೊಂದರೆ ಇಲ್ಲ ಎಂದು ಪೊಲೀಸರೊಂದಿಗೆ ಮಾತಿಗಿಳಿದರು. ಆದರೆ, ಪೊಲೀಸರು ಈ ಜಾಗಕ್ಕೆ ಪ್ರವೇಶಿಸಲು ಅನುಮತಿ ಕೊಡಲಿಲ್ಲ. ಆಗ ವಿಧಿ ಇಲ್ಲದೆ ಆರ್ ಎಸ್ ಎಸ್ ಕಾರ್ಯಕರ್ತರು ಹೊರಭಾಗದಿಂದ ಪಥ ಸಂಚಲನ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ಅನಂತ್ ಕುಮಾರ್, 'ಅನಗತ್ಯವಾಗಿ ಗೊಂದಲ ಉಂಟುಮಾಡುತ್ತಿದ್ದಾರೆ. ಹಲವಾರು ಬಾರಿ ಇಲ್ಲಿ ಪಥ ಸಂಚಲನ ನಡೆಸಲಾಗಿದೆ. ಅದರಂತೆ ಈ ಬಾರಿಯೂ ಪಥ ಸಂಚಲನ ನಡೆಸಲಾಗುತ್ತಿದೆ. ಆದರೆ, ಅದಕ್ಕೆ ಅಡ್ಡಿಪಡಿಸಿ ಕಾಂಗ್ರೆಸ್ ಸರ್ಕಾರ ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದೆ. ಎಲ್ಲರೂ ಸೌಹಾರ್ದಯುತವಾಗಿ ಇದ್ದೇವೆ. ಆದರೂ ಈ ರೀತಿಯ ಗೊಂದಲ ಸೃಷ್ಟಿಯಾಗಿರುವುದು ವಿಷಾದಕರ' ಎಂದು ಹೇಳಿದರು.
ಸ್ಥಳದಲ್ಲಿದ್ದ ಹೆಚ್ಚುವರಿ ಪೊಲೀಸ್ ಆಯುಕ್ತ ಕಮಲ್ ಪಂಥ್ ಅವರು ಈ ಕುರಿತು ಮಾತನಾಡಿ, 'ಆರ್ ಎಸ್ ಎಸ್ ಪಥ ಸಂಚಲನಕ್ಕೆ ನಮ್ಮ ಅಡ್ಡಿ ಇಲ್ಲ. ಆದರೆ, ಈ ಮೈದಾನದಲ್ಲಿ ಪಥ ಸಂಚಲನ ನಡೆಸಲು ಪೂರ್ವಾನುಮತಿ ಪಡೆಯಬೇಕು. ಆ ಅನುಮತಿಯನ್ನು ಸಂಘಟಕರು ಪಡೆದಿರಲಿಲ್ಲ. ಹಾಗಾಗಿ ಇಲ್ಲಿ ಪಥ ಸಂಚಲನಕ್ಕೆ ಅವಕಾಶ ನೀಡಿಲ್ಲ' ಎಂದು ಸ್ಪಷ್ಟಪಡಿಸಿದರು.













Click it and Unblock the Notifications