ಶಿವಾಜಿನಗರದ ರೋಷನ್ ಬೇಗ್ ಏಕೆ ಬಿಜೆಪಿ ಸೇರುತ್ತಿಲ್ಲ?
Recommended Video
ಬೆಂಗಳೂರು, ನವೆಂಬರ್ 14 : ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರು ಬಿಜೆಪಿ ಸೇರಲು ವೇದಿಕೆ ಸಿದ್ದವಾಗಿದೆ. ಆದರೆ, 16 ಶಾಸಕರು ಮಾತ್ರ ಪಕ್ಷಕ್ಕೆ ಸೇರುತ್ತಿದ್ದು, ರೋಷನ್ ಬೇಗ್ ಏಕೆ ಸೇರುತ್ತಿಲ್ಲ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ಬಿಜೆಪಿ ಅನರ್ಹ ಶಾಸಕರು ಪಕ್ಷ ಸೇರುತ್ತಿರುವ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಗುರುವಾರ ಬೆಳಗ್ಗೆ 10.30ಕ್ಕೆ 16 ಶಾಸಕರು ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪಕ್ಷಕ್ಕೆ ಸೇರುತ್ತಿದ್ದಾರೆ. ಶಿವಾಜಿ ನಗರ ಕ್ಷೇತ್ರದ ಅನರ್ಹ ಶಾಸಕ ರೋಷನ್ ಬೇಗ್ ಹೆಸರು ಪಟ್ಟಿಯಲ್ಲಿ ಇಲ್ಲ.
ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ. ಸಿ. ವೇಣುಗೋಪಾಲ್ ಬಗ್ಗೆ ಟೀಕಾ ಪ್ರಹಾರ ನಡೆಸಿದ್ದ ರೋಷನ್ ಬೇಗ್, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಸ್ಪೀಕರ್ ರೋಷನ್ ಬೇಗ್ರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಈ ಶಿವಾಜಿ ನಗರ ಕ್ಷೇತ್ರದ ಉಪ ಚುನಾವಣೆ ಎದುರಾಗಿದೆ. ರೋಷನ್ ಬೇಗ್ ಚುನಾವಣಾ ಕಣಕ್ಕಿಳಿಯಲು ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿದೆ. ಆದರೆ, ಅವರು ಬಿಜೆಪಿಗೆ ಏಕೆ ಸೇರುತ್ತಿಲ್ಲ? ಎಂಬ ಪ್ರಶ್ನೆ ಕಾಡುತ್ತಿದೆ.

ಬಿಜೆಪಿ ಪಟ್ಟಿಯಲ್ಲಿ ಹೆಸರಿಲ್ಲ
16 ಅನರ್ಹ ಶಾಸಕರು ನವೆಂಬರ್ 14ರಂದು ಬಿಜೆಪಿಗೆ ಸೇರಲಿದ್ದಾರೆ ಎಂದು ಪಕ್ಷ ಪ್ರಕಟಣೆಯಲ್ಲಿ ತಿಳಿಸಿದೆ. ಆದರೆ, ಇದರಲ್ಲಿ ಶಿವಾಜಿ ನಗರ ಕ್ಷೇತ್ರದ ಅನರ್ಹ ಶಾಸಕ ರೋಷನ್ ಬೇಗ್ ಹೆಸರಿಲ್ಲ. ರೋಷನ್ ಬೇಗ್ ಯಾವಾಗ ಬಿಜೆಪಿ ಸೇರಲಿದ್ದಾರೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಹೈಕಮಾಂಡ್ ಒಪ್ಪಿಗೆ ಕೊಟ್ಟಿಲ್ಲ
ಶಿವಾಜಿ ನಗರ ಕ್ಷೇತ್ರದ ಅನರ್ಹ ಶಾಸಕ ರೋಷನ್ ಬೇಗ್ ಬಿಜೆಪಿ ಸೇರಲು ಪಕ್ಷದ ಹೈಕಮಾಂಡ್ ಒಪ್ಪಿಗೆ ಇಲ್ಲ ಎಂದು ತಿಳಿದುಬಂದಿದೆ. ಮಾಧ್ಯಮಗಳ ಜೊತೆ ಮಾತನಾಡಿರುವ ರೋಷನ್ ಬೇಗ್, "ನಾನು ಬಿಜೆಪಿ ಸೇರುವ ಪಕ್ಷದ ನಾಯಕರ ಸೂಚನೆಯಂತೆಯೇ ನಡೆದುಕೊಳ್ಳುವೆ" ಎಂದು ಹೇಳಿದ್ದಾರೆ.

ಐಎಂಎ ಹಗರಣ ಕಾರಣವೇ?
ಮಾಜಿ ಸಚಿವ ರೋಷನ್ ಬೇಗ್ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿದೆ. ಬಿಜೆಪಿ ಹಗರಣದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿತ್ತು. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿತ್ತು. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಈ ಕಾರಣದಿಂದಾಗಿ ರೋಷನ್ ಬೇಗ್ ಸೇರ್ಪಡೆಗೆ ಒಪ್ಪಿಗೆ ಸಿಕ್ಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.

ಉಪ ಚುನಾವಣೆ ಟಿಕೆಟ್ ಸಿಗಲಿದೆಯೇ?
ಶಿವಾಜಿ ನಗರ ಉಪ ಚುನಾವಣೆ ಟಿಕೆಟ್ ಸಹ ರೋಷನ್ ಬೇಗ್ ಕೈ ತಪ್ಪುವ ನಿರೀಕ್ಷೆ ಇದೆ. ಬಿಜೆಪಿ ಸಂಭಾವ್ಯ ಪಟ್ಟಿಯಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು, ರೋಷನ್ ಬೇಗ್ ಮತ್ತು ರುಮನ್ ಬೇಗ್ ಹೆಸರು ಇದೆ. ಯಾರಿಗೆ ಟಿಕೆಟ್ ಎಂಬುದು ಗುರುವಾರ ಸಂಜೆಯ ವೇಳೆಗೆ ಅಂತಿಮಗೊಳ್ಳಲಿದೆ.












Click it and Unblock the Notifications