ನಟ ಹರ್ಷಮನೆಯಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ
ಬೆಂಗಳೂರು, ಡಿ. 9 : ಚಿತ್ರನಟ ಹರ್ಷ ಅವರ ಮನೆಯಲ್ಲಿ ಭಾನುವಾರ ರಾತ್ರಿ ಸಿನಿಮೀಯ ರೀತಿಯಲ್ಲಿ ದರೋಡೆ ನಡೆದಿದೆ. ಮಚ್ಚು, ಲಾಂಗು ಗಳೊಂದಿಗೆ ಮನೆಗೆ ನುಗ್ಗಿದ್ದ ದುಷ್ಕರ್ಮಿಗಳು, ಮನೆಯವರನ್ನು ಕೂಡಿಹಾಕಿ ಒಂದು ಲಕ್ಷ ರೂ. ಹಣ ಮತ್ತು ಸುಮಾರು 8 ಲಕ್ಷ ರೂ.ಗಳ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಜ್ಞಾನಭಾರತಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ತನಿಖೆ ಕೈಗೊಂಡಿದ್ದಾರೆ.
ಭಾನುವಾರ ರಾತ್ರಿ ಬೆಂಗಳೂರಿನ ನಾಗರಬಾವಿಯ ವಿನಾಯಕ ಲೇಔಟ್ನಲ್ಲಿರುವ ಚಿತ್ರನಟ ಹರ್ಷ ಅವರ ಮನೆಗೆ ನುಗ್ಗಿದ ಮುಸುಕುಧಾರಿಗಳು, ಮನೆಯಲ್ಲಿದ್ದವರಿಗೆ ಮಚ್ಚು, ಲಾಂಗು ತೋರಿಸಿ ಹಣ ದೋಚಿ ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ ನಗದು ಮತ್ತು ಚಿನ್ನವನ್ನು ಮಾತ್ರ ದೋಚಿ ಪರಾರಿಯಾಗಿದ್ದಾರೆ. ಬೆಳ್ಳಿಯ ಆಭರಣ ಮತ್ತು ಬೆದರಿಸಿ ಕಿತ್ತುಕೊಂಡ ತಾಳಿಯನ್ನು ವಾಪಸ್ ನೀಡಿ ಪರಾರಿಯಾಗಿದ್ದಾರೆ.

ಘಟನೆಯ ವಿವರ : ರಾತ್ರಿ 10 ಗಂಟೆ ಸುಮಾರಿಗೆ ಊಟ ಮುಗಿಸಿ, ಹರ್ಷ ತಂದೆ ತಾಯಿ ಜೊತೆ ಟಿವಿ ನೋಡುತ್ತಾ ಕುಳಿತಿದ್ದರು. ಏಕಾಏಕಿ ಮನೆಗೆ ನುಗ್ಗಿದ ಮುಸುಕುಧಾರಿಗಳು ಹರ್ಷ ಮೇಲೆ ಹಲ್ಲೆ ನಡೆಸಿದ್ದಾರೆ. ಹರ್ಷ ತಂದೆ ಪ್ರಕಾಶ್, ತಾಯಿ ವಿಮಲಾ ಹಾಗೂ ಸಹೋದರಿಗೆ ಮಚ್ಚು ತೋರಿಸಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದಾರೆ.
ಮನೆಯಲ್ಲಿದ್ದವರ ಎಲ್ಲಾ ಮೊಬೈಲ್ಗಳ ಬ್ಯಾಟರಿ ತಗೆದು ಹಾಕಿ ಒಡೆದು ಹಾಕಿದ್ದಾರೆ. ನಂತರ ಎಲ್ಲರನ್ನು ರೂಂ ಒಂದರಲ್ಲಿ ಕೂಡಿಹಾಕಿ, ಸತತ ಒಂದು ಗಂಟೆ ಕಾಲ ಮನೆಯನ್ನೆಲ್ಲಾ ತಡಕಾಡಿ ಒಂದು ಲಕ್ಷ ರೂಪಾಯಿ ನಗದು ಹಾಗೂ 8 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಬೆದರಿಸಿ ಕಿತ್ತುಕೊಂಡಿದ್ದ ಹರ್ಷ ತಾಯಿ ವಿಮಲಾ ಅವರ ತಾಳಿಯನ್ನು ವಾಪಸ್ ನೀಡಿ, ಪರಾರಿಯಾಗಿದ್ದಾರೆ.
ಹರ್ಷ ರಾಜಾಹುಲಿ, ಮೊಗ್ಗಿನ ಮನಸ್ಸು, ಕೃಷ್ಣನ್ ಲವ್ ಸ್ಟೋರಿ ಸೇರಿದಂತೆ ಹಲವು ಚಿತ್ರಗಳು ಹಾಗೂ ಧಾರಾವಾಹಿಗಳಲ್ಲಿ ನಟಿಸಿದ್ದರು. ಇವರ ಮನೆಯಲ್ಲಿ ಸಾಕಷ್ಟು ಹಣವಿರಬಹು ಎಂದು ದರೋಡೆಕೋರರರು ಮನಗೆ ನುಗ್ಗಿದ್ದಾರೆ. ಡಿಸಿಪಿ ರಾಜಪ್ಪ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications