ಎಲ್ಲವೂ ಮುಗಿದ ಅಧ್ಯಾಯ ಎಂದು ಯೂ ಟರ್ನ್ ಹೊಡೆದ ರಮೇಶ್ ಜಾರಕಿಹೊಳಿ
Recommended Video

ಬೆಂಗಳೂರು, ಸೆಪ್ಟೆಂಬರ್ 11: ನಾವು ಪಕ್ಷ ಬಿಡುವ ವಿಚಾರ ಈಗ ಮುಗಿದ ಅಧ್ಯಾಯ, ಪಕ್ಷದ ವರಿಷ್ಠರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ ಎಂದು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದ ಎನ್ನಲಾದ ಸಚಿವ ರಮೇಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದಾರೆ.
ಕುತೂಹಲಕರ ರಾಜಕೀಯ ಬೆಳವಣಿಗೆಯಲ್ಲಿ ಮಂಗಳವಾರ ಬೆಳಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹಾಗೂ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ ರಮೇಶ್ ಜಾರಕಿಹೊಳಿಯವರನ್ನು ಮಂಗಳವಾರ ತಮ್ಮ ನಿವಾಸಕ್ಕೆ ಆಹ್ವಾನಿಸಿ ಮಾತನಾಡಿದರು.
ಇದಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ರಮೇಶ್ ಜಾರಕಿಹೊಳಿ, ಈಗ ಎಲ್ಲಾ ವಿವಾದವೂ ಬಗೆಹರಿದಿದೆ. ನಮಗಿದ್ದ ಅಸಮಧಾನವನ್ನು ದಿನೇಶ್ ಗುಂಡೂರಾವ್ ಹಾಗೂ ಪರಮೇಶ್ವರ ಅವರ ಬಳಿ ಹೇಳಿಕೊಂಡಿದ್ದೇವೆ.

ಪಕ್ಷದ ವರಿಷ್ಠರು ನಮ್ಮ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂದು ಭಾವಿಸಿದ್ದೇವೆ. ಹೀಗಾಗಿ ಇದು ಮುಗಿದ ಅಧ್ಯಾಯ. ಇನ್ನುಮುಂದೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವ ಅಥವಾ ಇನ್ಯಾವುದೇ ವಿಚಾರ ಕುರಿತಂತೆ ನಾವು ಮಾತನಾಡುವುದಿಲ್ಲ ಎಂದು ಸಚಿವ ಜಾರಕಿಹೊಳಿ ಹೇಳಿದರು.
ಅಲ್ಲದೆ ಬಿಜೆಪಿ ಸೇರ್ಪಡೆಗೊಳ್ಳುತ್ತಿರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯ ಕೆಲ ನಾಯಕರು ನಮ್ಮ ಜೊತೆ ಮಾತನಾಡಿದ್ದಾರೆ, ಒಂದು ತಿಂಗಳ ಹಿಂದೆಯೇ ಈ ಮಾತುಕತೆ ನಡೆದಿತ್ತು. ಆದರೆ ಅದು ಪಕ್ಷಕ್ಕೆ ಸೇರುವ ವಿಚಾರ ಆಗಿರಲಿಲ್ಲ, ಅವರ ನಮ್ಮ ವೈಯಕ್ತಿಕ ವಿಚಾರ. ಹೀಗಾಗಿ ಬಿಜೆಪಿ ಸೇರುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆದರೆ ಸಹೋದರ ಮಾಜಿ ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಬಿಜೆಪಿ ಸೇರ್ಪಡೆ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ ಅವರು, ಸತೀಶ್ ಏನು ಹೇಳಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ, ಅದು ಅವರ ವೈಯಕ್ತಿಕ ನಿರ್ಧಾರ, ಆದರೆ ಕಾಂಗ್ರೆಸ್ ಪಕ್ಷ ದೊಡ್ಡ ಪಕ್ಷ, ಕಾಂಗ್ರೆಸ್ ನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಅಲ್ಲಿಗೆ ಎಲ್ಲಾ ಊಹಾಪೋಹಗಳಿಗೆ ತೆರೆಬಿದ್ದಂತಾಗಿದೆ.












Click it and Unblock the Notifications