ಬೆಂಗಳೂರು ಮಂಡ್ಯದಲ್ಲಿ ರಾಮಾನುಜ ಸಹಸ್ರ ಸಂಭ್ರಮ
ಬೆಂಗಳೂರು, ಏಪ್ರಿಲ್ 21 : ತ್ರಿಮತಾಚಾರ್ಯರಲ್ಲಿ ಒಬ್ಬರಾದ ಶ್ರೀ ರಾಮಾನುಜಾಚಾರ್ಯರ ಜಯಂತಿಯ (1017-1137) ಸಹಸ್ರಮಾನದ ಅಂಗವಾಗಿ ಶ್ರೀ ಯದುಗಿರಿ ಯತಿರಾಜ ಮಠವು ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಯ ತೊಂಡನೂರಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಆಚಾರ್ಯ ಶ್ರೀ ರಾಮಾನುಜರು ಪ್ರಸಿದ್ಧ ತತ್ವಶಾಸ್ತ್ರಜ್ಞರು ಮತ್ತು ಸಮಾಜ ಸುಧಾರಕರೂ ಹೌದು. ಸಮಾಜದ ಹಿಂದುಳಿದ ವರ್ಗಗಳಿಗೆ ತಮ್ಮ ಕಾಲದಲ್ಲಿಯೇ ದೇವಾಲಯಗಳಿಗೆ ಪ್ರವೇಶವನ್ನು ನೀಡುವ ಕ್ರಾಂತಿಕಾರಿ ಹೆಜ್ಜೆಯನ್ನು ರಾಮಾನುಜರು ಇಟ್ಟಿದ್ದರು.
ಬೆಂಗಳೂರಿನ ಶ್ರೀ ಯದುಗಿರಿ ಯತಿರಾಜ ಮಠದಲ್ಲಿ ಏಪ್ರಿಲ್ 22ರಂದು ರಾಮಾನುಜಾಚಾರ್ಯರಿಗೆ ಪಂಚಾಮೃತ ಅಭಿಷೇಕದೊಂದಿಗೆ ಕಾರ್ಯಕ್ರಮವು ವಿಧ್ಯುಕ್ತವಾಗಿ ಆರಂಭವಾಗಲಿದೆ. ಶ್ರೀ ಶ್ರೀನಿವಾಸಸ್ವಾಮಿ ಮಂಟಪ್ಪಡಿ ಉತ್ಸವ ಕೂಡ ಈ ಸಂದರ್ಭದಲ್ಲಿ ಜರುಗಲಿದೆ. ಮೇ 1ರ ಸಹಸ್ರಮಾನೋತ್ಸವ ತಿರುನಕ್ಷತ್ರದವರೆಗೆ ಹಲವಾರು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಾದಿಗಳು ನಡೆಯಲಿವೆ.

ಏಪ್ರಿಲ್ 25ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ತೊಂಡನೂರಿನಲ್ಲಿ ಶ್ರೀ ರಾಮಾನುಜಾಚಾರ್ಯರ ಅತಿ ಎತ್ತರದ ಪ್ರತಿಮೆಯನ್ನು ಅನಾವರಣಗೊಳಿಸಲಾಗುವುದು.
ಮೇ 14ರ ಭಾನುವಾರದಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಮಾನುಜ ಸಹಸ್ರ ಸಂಭ್ರಮದ ಸಮಾರೋಪ ಕಾರ್ಯಕ್ರಮವು ನಡೆಯಲಿದೆ. ಕರ್ನಾಟಕ ಮತ್ತು ದೇಶದ ವಿವಿಧ ಭಾಗಗಳ ಮಠಾಧಿಪತಿಗಳು, ಧಾರ್ಮಿಕ ಮುಖಂಡರು, ಗಣ್ಯವ್ಯಕ್ತಿಗಳು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ರಾಮಾನುಜಾಚಾರ್ಯರ ಜಯಂತಿ ಸಹಸ್ರಮಾನೋತ್ಸವದ ಅಂಗವಾಗಿ ಶ್ರೀಮಠವು ಅನೇಕ ಸಮಾಜಮುಖಿ ಚಟುವಟಿಕೆಗಳನ್ನು ನಡೆಸಲಿದೆ ಎಂದು ಯದುಗಿರಿ ಯತಿರಾಜ ಮಠದ ಯತಿರಾಜ ನಾರಾಯಣ ರಾಮಾನಜು ಜೀಯರ್ ಸ್ವಾಮೀಜಿಯವರು ತಿಳಿಸಿದರು.
ಶ್ರೀ ಯದುಗಿರಿ ಯತಿರಾಜ ಮಠದ ಕುರಿತು:
ಯದುಗಿರಿ ಯತಿರಾಜ ಮಠವನ್ನು ಅತ್ಯಂತ ದೂರದರ್ಶಿತ್ವ ಹೊಂದಿದ್ದ ರಾಮಾನುಜಾಚಾರ್ಯರು ಸುಮಾರು 1090ರಲ್ಲಿ ಮೇಲುಕೋಟೆಯಲ್ಲಿ (ಬೆಂಗಳೂರಿನಿಂದ ಸುಮಾರು 150 ಕಿ.ಮೀ ದೂರ) ಸ್ಥಾಪಿಸಿದರು. ಆಚಾರ್ಯರು ಜ್ಞಾನ-ಭಕ್ತಿ-ದಯೆ-ಕ್ಷಮೆ ಇತ್ಯಾದಿ ಆದರ್ಶಗಳ ಮೂರ್ತಿವೆತ್ತ ಸ್ವರೂಪರಾಗಿದ್ದು, ಅವರ ಕಾರ್ಯಗಳ ಮೂಲಕ ತಮ್ಮ ಕ್ರಿಯಾಶಕ್ತಿಯನ್ನು ವ್ಯಕ್ತಪಡಿಸುತ್ತಾರೆ.
ಯತಿರಾಜ ಮಠವು ಅನಾಥಾಲಯವೊಂದನ್ನು ದತ್ತು ತೆಗೆದುಕೊಂಡಿದ್ದು, ಮಕ್ಕಳಿಗೆ ಆಹಾರ-ಹಾಲು ಒದಗಿಸುತ್ತಿದೆ. ಬಿಸಿಯೂಟ ಕಾರ್ಯಕ್ರಮದ ಅಡಿಯಲ್ಲಿ ಮಠವು ಪ್ರತಿನಿತ್ಯವೂ 500 ಮಕ್ಕಳಿಗೆ ಮಧ್ಯಾಹ್ನದ ಭೋಜನವನ್ನು ಒದಗಿಸುತ್ತಿದೆ. ಸುಮಾರು 150 ಗೋವುಗಳನ್ನು ಶ್ರೀಮಠವು ಸಂರಕ್ಷಿಸುತ್ತಿದೆ.
ರಾಮಾನುಜಾಚಾರ್ಯರ ಕುರಿತು:
ಶ್ರೀ ರಾಮಾನುಜಾಚಾರ್ಯರು ತಮ್ಮ ತಾತ್ವಿಕ ದೃಷ್ಟಿಯನ್ನು ಕಾರ್ಯರೂಪಕ್ಕೆ ತರಲು ಆಗಾಧವಾದ ಕ್ರಿಯಾಶಕ್ತಿಯನ್ನು ಹೊಂದಿದ್ದರು. ವಿಶಿಷ್ಟಾದ್ವೈತ ಮತ ಪ್ರವರ್ತಕರಾದ ಆಚಾರ್ಯರು ತಮ್ಮ ಕಾಲದಲ್ಲಿಯೇ ಸಮಾಜದ ಹಿಂದುಳಿದ ವರ್ಗಗಳಿಗೆ ದೇವಾಲಯಗಳಿಗೆ ಪ್ರವೇಶ ನೀಡುವ ಪ್ರಗತಿಪರ ಆಲೋಚನೆಯನ್ನು ಹೊಂದಿದ್ದರು.
ಯತಿರಾಜ ನಾರಾಯಣ ರಾಮಾನುಜ ಜೀಯರ್
ಯದುಗಿರಿ ಯತಿರಾಜ ಮಠದ 41ನೇ ಪೀಠಾಧಿಪತಿಗಳಾದ ಯತಿರಾಜ ನಾರಾಯಣ ರಾಮಾನುಜ ಜೀಯರ್ ಸ್ವಾಮೀಜಿ, 25ನೇ ನವೆಂಬರ್ 2014ರಂದು ಮಠದ ಅಧಿಪತ್ಯವನ್ನು ವಹಿಸಿಕೊಂಡರು. ಸದಾ ಸಮಾಜಮುಖಿ ಚಿಂತನೆ ಮತ್ತು ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸ್ವಾಮೀಜಿಯವರು "ನಮ್ಮ ನಡೆ ರಾಮಾನುಜರೆಡೆಗೆ" ಎಂಬ ಯೋಜನೆಯಲ್ಲಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದಾರೆ.
ಮಾಧ್ಯಮ ಮಾಹಿತಿಗಾಗಿ ಸಂಪರ್ಕಿಸಿ : ಗಾಯತ್ರಿ ಶೆಣೈ, ದೂರವಾಣಿ - 9448104894












Click it and Unblock the Notifications